ಯಾವುದು ಗಟ್ಟಿ ಬೇರು, ಯಾವುದು ಮೃದುವಾಗಿರುವ ಬೇರು ಅನ್ನೋದು ದರ್ಶನ್ ಅಣ್ಣನಿಗೆ ಈಗ ಗೊತ್ತಾಗಿದೆ- ಧನ್ವೀರ್..!
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್ ಅವರದ್ದು.
ಆದರೆ, ದುರ್ದೈವ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ದರ್ಶನ್, ಅಪವಿತ್ರ ಸಂಬಂಧಕ್ಕೆ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆವಾಸ ಕೂಡ ಅನುಭವಿಸಿದರು.

ಇನ್ನು ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದರಲ್ಲ ಅಂಥಾ ಅಕ್ಷರಶಃ ಕೊರಗಿದ್ದರು.
ಮತ್ತೊಂದು ಕಡೆ ತಮ್ಮ ಪತಿಯನ್ನು ಹೇಗಾದರೂ ಮಾಡಿ ಹೊರಗಡೆ ಕರೆದುಕೊಂಡು ಬರಬೇಕು ಎಂದು ವಿಜಯಲಕ್ಷ್ಮಿ ಶಪಥ ಮಾಡಿದ್ದರು. ಹೊರ ಕರೆತರಲು ಹರಸಾಹಸವನ್ನು ಮಾಡುತ್ತಿದ್ದರು. ಈ ಸಮಯದಲ್ಲಿ ವಿಜಯಲಕ್ಷ್ಮಿ ಅವರನ್ನು ನೆರಳಿನಂತೆ ಹಿಂಬಾಲಿಸಿದ್ದು ಧನ್ವೀರ್ ಮಾತ್ರ. ಮಿಕ್ಕಂತೆ ಬಹುತೇಕರು ದರ್ಶನ್ಗೆ ಮತ್ತು ನಮಗೆ ಸಂಬಂಧವೇ ಇಲ್ಲವೆನ್ನುವಂತೆ ಇದ್ದರು. ಈಗ ಧನ್ವೀರ್ ಈ ವಿಚಾರದ ಕುರಿತು ಮಾತನಾಡಿದ್ದಾರೆ. ವಿಜಯಲಕ್ಷ್ಮಿ ಜೊತೆ ನಿಂತಿದ್ದೇಕೆ ? ಎಲ್ಲರಂತೆ ದರ್ಶನ್ ಅವರ ಕೈಯನ್ನು ಬಿಡಲಿಲ್ಲವೇಕೆ ಎನ್ನುವುದನ್ನು ಹೇಳಿದ್ದಾರೆ.
ಹೌದು, ಅಸಲಿಗೆ ಧನ್ವೀರ್ ಅಭಿನಯದ ವಾಮನ ಈ ಏಪ್ರಿಲ್ ಹತ್ತರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡಲು ಶುರು ಮಾಡಿರುವ ಧನ್ವೀರ್ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಹೀಗೆ ಪಬ್ಲಿಕ್ ಟಿವಿಗೆ ನೀಡಲಾದ ಸಂದರ್ಶನದಲ್ಲಿ ದರ್ಶನ್ ಕುರಿತು ಕೆಲ ವಿಚಾರಗಳನ್ನು ಧನ್ವೀರ್ ಹಂಚಿಕೊಂಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಮಾತನಾಡಿರುವ ಧನ್ವೀರ್, ಬೇರೆಯವರ ಕಥೆ ನನಗೆ ಗೊತ್ತಿಲ್ಲ ಆದರೆ ನಾನು ದರ್ಶನ್ ಅವರನ್ನು ಹೃದಯದಿಂದ ಇಷ್ಟ ಪಟ್ಟಿದ್ದು ಎಂದು ಹೇಳಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣ ಏನೇ ಇರಬಹುದು, ಅದು ನ್ಯಾಯಾಲಯದಲ್ಲಿದೆ ಎಂದಿರುವ ಧನ್ವೀರ್ ಸರಿ ತಪ್ಪು ಜಡ್ಜ್ ಮಾಡೋಕೆ ನಾವ್ಯಾರು ಅಲ್ಲ, ಅದಕ್ಕೆ ಕಾನೂನು ಇದೆ ಅಲ್ಲಿಯೇ ಅದು ತೀರ್ಮಾನವಾಗುತ್ತೆ ಎಂದು ಹೇಳಿದ್ದಾರೆ.
ಇನ್ನು ಹೊಸಬರ ಚಿತ್ರಕ್ಕೆ ತಮ್ಮ ಚಿತ್ರಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ದರ್ಶನ್ ಅವರ ವಿಶೇಷತೆ. ಕೆಲ ಒಮ್ಮೆ ತಮ್ಮ ಚಿತ್ರಕ್ಕೆ ಕೊಡದಷ್ಟು ಮಹತ್ವವನ್ನು ಬೇರೆಯವರಿಗೆ ದರ್ಶನ್ ಕೊಡೋದಿದೆ. ದರ್ಶನ್ ಅವರಿಂದ ಸಹಾಯ ಪಡೆದ ಅನೇಕರು ಚಿತ್ರರಂಗದಲ್ಲಿದ್ದಾರೆ. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಧನ್ವೀರ್ ಅವರಿಂದ ಎಲ್ಲ ರೀತಿಯ ಬೆಂಬಲ ತೆಗೆದುಕೊಂಡರು, ಅವರ ಜೊತೆ ಮೊದಲು ಎಲ್ಲರು ಇದ್ದರು, ಅವರು ಕೂಡ ಹಿಂದೆ ಮುಂದೆ ಯೋಚನೆ ಮಾಡದೇ ಎಲ್ಲರೂ ನಮ್ಮವರು ಅಂತ ಅಪ್ಪಿಕೊಂಡರು ಆದರೆ ಅವರಿಗೆ ಕಷ್ಟ ಬಂದಾಗ ಯಾರು ಕೈ ಚಾಚಲಿಲ್ಲ ಎಲ್ಲ ದೂರಿ ಸರಿದರು ಎಂದು ಹೇಳಿದ್ದಾರೆ. ಜೊತೆಗಿದ್ದವರೇ ಹೀಗೆ ಮಾಡಿದರೆ ಅವರ ಜೊತೆ ನಿಲ್ಲೋರು ಯಾರು ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಯ್ತು ಹೀಗಾಗಿ ನಾನು ನಿಂತುಕೊಂಡೆ ಎಂದು ಹೇಳಿದ್ದಾರೆ.
ಮುಂದುವರೆದು ವಿಜಯಲಕ್ಷ್ಮಿ ಅಕ್ಕ ಏಕಾಂಗಿಯಾಗಿ ಹೋರಾಟ ಮಾಡಿದರು, ಅವರನ್ನು ನೋಡಿ ನನಗೆ ಇಲ್ಲ ನಾನು ನಿಂತುಕೊಳ್ಳಲೇಬೇಕು ಎಂದು ಅನಿಸ್ತು ಎಂದಿರುವ ಧನ್ವೀರ್ ನಾನು ತಂಗಿ ಜೊತೆ ಬೆಳೆದಿದೀನಿ ಹೀಗಾಗಿ ನನಗೆ ಕಷ್ಟ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಅವರಿಗೆ ಇನ್ನೇನು ಇಲ್ಲ ಆ ದೇವರು ಅವರನ್ನು ಚೆನ್ನಾಗಿಯೇ ಇಟ್ಟಿದ್ದಾನೆ ಎಂದಿರುವ ಧನ್ವೀರ್ ಅವರಿಗೆ ಬೇಕಾಗಿದ್ದು ನೈತಿಕ ಬೆಂಬಲ ಮತ್ತು ನಾವು ನಿಮ್ಮ ಜೊತೆ ಇದ್ದೇವೆ ಎನ್ನುವಂತಹ ಧೈರ್ಯ ಹೀಗಾಗಿ ನಾನು ಅವರ ಜೊತೆ ನಿಂತುಕೊಂಡೆ ಎಂದು ಹೇಳಿದ್ದಾರೆ.
ಯಾವತ್ತು ಇದೆಲ್ಲ ಮುಗಿಯುತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿರುವ ಧನ್ವೀರ್, ದರ್ಶನ್ ಅವರ ಬಿಡುಗಡೆಗಾಗಿ ನಾನು ಕೈ ಮುಗಿಯದ ದೇವರಿಲ್ಲ ಎಂದು ಹೇಳಿದ್ದಾರೆ. ಚಾಮುಂಡೇಶ್ವರಿ ತಾಯಿಯನ್ನು ಕೂಡ ಸಂದರ್ಶನದಲ್ಲಿ ನೆನೆದಿದ್ದಾರೆ. ಇನ್ನೂ ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಓನ್ ಹೀರೋ. ವರ್ಷಕ್ಕೆ ಎರಡು ಚಿತ್ರಗಳನ್ನು ಖಾಯಂ ಆಗಿ ಮಾಡುವ ಸ್ಟಾರ್. ಕನ್ನಡ ಚಿತ್ರರಂಗದಲ್ಲಿ ಇನ್ನೂರು, ಮೂನ್ನೂರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಸ್ಟಾರ್ ಅವರು, ಅವರನ್ನು ನಂಬಿಕೊಂಡು ಹಲವಾರು ಕುಟುಂಬಗಳ ಕೆಲಸ ನಡೆಯುತ್ತೆ ಹಾಗಾಗಿ ಚಿತ್ರರಂಗಕ್ಕೆ ಅವರು ತುಂಬಾನೇ ಮುಖ್ಯವಾದವರು ಎಂಬ ಮಾತನ್ನು ದರ್ಶನ್ ಜೈಲಿನಲ್ಲಿದ್ದಾಗ ತರುಣ್ ಸುಧೀರ್ ಸೇರಿ ಅನೇಕರು ಹೇಳಿದ್ದರು.
ಈ ಮಾತುಗಳನ್ನೇ ಪುನರುಚ್ಚಿಸಿರುವ ಧನ್ವೀರ್, ಚಿತ್ರರಂಗದಲ್ಲಿ ದರ್ಶನ್ ಅವರನ್ನು ನಂಬಿಕೊಂಡು ಎಷ್ಟೋ ಜನ ಅನ್ನ ತಿನ್ನುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಹಯಗ್ರೀವ ಚಿತ್ರದ ಚಿತ್ರೀಕರಣ ಮಾಡುವಾಗ ಅಣ್ಣ ಇನ್ನು ಜೈಲಿನಲ್ಲಿದ್ದರು ಆಗ ಎಷ್ಟೋ ಜನ ತಂತ್ರಜ್ಞರು ಬಂದು ಅಣ್ಣ ಯಾವಾಗ ಬರ್ತಾರೆ ಎಂದು ನನ್ನ ಕೇಳುತ್ತಿದ್ದರು ಆಗ ನಾನು ಯಾಕೆ ಅವರನ್ನು ಅಷ್ಟು ಇಷ್ಟ ಪಡ್ತೀರಾ ಎಂದಾಗ ಅವರು ಹೊರಗಡೆ ಬಂದರೆ ತುಂಬಾ ಜನರ ಕುಟುಂಬ ನಡೆಯುತ್ತೆ ಎಂದು ನನಗೆ ಹೇಳಿದರು ಎಂದು ಹೇಳಿದ್ದಾರೆ. ಬಣ್ಣದ ಲೋಕ ಅಂದರೆ ಎಲ್ಲ ಚೆನ್ನಾಗಿರುತ್ತೆ ಅಂತ ಅಂದುಕೊಳ್ಳುತ್ತಾರೆ ಆದರೆ ಇಲ್ಲಿ ಅವರದ್ದೇ ಆದ ಕಷ್ಟಗಳಿವೆ ಎಂದಿರುವ ಧನ್ವೀರ್ ತಂತ್ರಜ್ಞರು, ದಿನಗೂಲಿ ನೌಕರರಿದ್ದಾರೆ. ಅವರು ಕಷ್ಟದಲ್ಲಿರುತ್ತಾರೆ. ಇದೆಲ್ಲ ನೋಡಿದಾಗ ಇಂತಹ ವ್ಯಕ್ತಿಗೆ ಹೀಗಾಗೋಯ್ತಲ್ಲ ಅಂತ ಬೇಜಾರು ಆಗಿದ್ದು ಇದೆ ಎಂದು ಹೇಳಿದ್ದಾರೆ.
ಇನ್ನು ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ ನಾನು ನಂಬಲೇ ಇಲ್ಲ, ಎರಡು ದಿನ ಎಲ್ಲರ ಹತ್ತಿರ ಹೀಗೆಲ್ಲ ಆಗೋಕೆ ಚಾನ್ಸ್ ಇಲ್ಲ ಅಂತ ವಾದ ಮಾಡಿದ್ದೆ ಎಂದಿರುವ ಧನ್ವೀರ್, ಅದ್ಯಾವಾಗ ದರ್ಶನ್ ಅವರನ್ನು ಕಸ್ಟಡಿಗೆ ಕೇಳಿದರೋ ಆಗ ಇಲ್ಲೇನೋ ನಡೆದಿದೆ ಅಂತ ನನಗೆ ಅನಿಸಲು ಶುರುವಾಯ್ತು ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಜೈಲಿಂದ ಬಂದ ಮೇಲೆ ಬದಲಾಗಿದ್ದಾರೆ ಎನ್ನುವುದು ಅನೇಕರ ಅಭಿಪ್ರಾಯ. ಕೇವಲ ಮುಖಚಹರೆ ಮಾತ್ರವಲ್ಲ ಅವರ ನಡೆ ಮತ್ತು ನುಡಿ ಕೂಡ ಚೇಂಜ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಳಿದು ಉಳಿದ ಆರು ಜನರನ್ನು ಕೂಡ ದರ್ಶನ್ ಅನ್ ಫಾಲೋ ಮಾಡಿದ್ದಾರೆ. ಈ ಕುರಿತು ಕೂಡ ಮಾತನಾಡಿರುವ ಧನ್ವೀರ್ ಕಷ್ಟಕಾಲದಲ್ಲಿ ಕೈ ಹಿಡಿಯಲು ಯಾರು ಮುಂದೆ ಬರದಿದ್ದಾಗ ಸಹಜವಾಗಿಯೇ ಬೇಸರವಾಗುತ್ತೆ, ಯಾರ ಸಹವಾಸ ಬೇಡ ಅನ್ಸುತ್ತೆ ದರ್ಶನ್ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ. ಯಾವುದು ಗಟ್ಟಿ ಬೇರು, ಯಾವುದು ಮೃದುವಾಗಿರುವ ಬೇರು ಅನ್ನೋದು ಅವರಿಗೆ ಈಗ ಚೆನ್ನಾಗಿ ಅರ್ಥ ಆಗಿದೆ ಹೀಗಾಗಿ ಯಾರು ನನಗೆ ಬೇಕು ಯಾರು ಬೇಡ ಎನ್ನುವುದನ್ನು ಅವರೇ ಡಿಸೈಡ್ ಮಾಡಿದ್ದಾರೆ ಎಂದು ಹೇಳಿರುವ ಧನ್ವೀರ್ ಅವರನ್ನು ಜೈಲಿನಲ್ಲಿ ನೋಡಲು ಬೇಸರವಾಗುತ್ತಿತ್ತು ಎಂದು ಹೇಳಿದ್ದಾರೆ. ಹೇಗಿದ್ದ ಮನುಷ್ಯ ಹೇಗಾದರು ಟೈಮ್ ಅಂತ ಬಂದಾಗ ಎಂದು ಅನಿಸಿತ್ತು ಎಂದು ಹೇಳಿದ್ದಾರೆ.


Click it and Unblock the Notifications











