ದರ್ಶನ್ ಮತ್ತು ಸುದೀಪ್ ಮಧ್ಯೆ ಹುಳಿ ಹಿಂಡಿದ್ದು ಯಾರು ? ಬಿರುಕಿನ ರಹಸ್ಯ ಹೇಳಿದ ನವಗ್ರಹ ನಟ ಧರ್ಮ ಕೀರ್ತಿರಾಜ್
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ 9-10 ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ. ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು.
ಯಾಕೆಂದರೆ, ಅಂಬರೀಶ್ ಅವರಿಗೆ ಇಬ್ಬರನ್ನೂ ಮತ್ತೆ ಜೊತೆಯಾಗಿ ನೋಡಬೇಕೆಂಬ ಹೆಬ್ಬಯಕೆ ಇತ್ತು. ಆದರೆ ಆ ಆಸೆ ಆಸೆಯಾಗಿಯೇ ಉಳಿಯಿತು. ಮುಂದಾದರುಇಬ್ಬರು ಒಂದಾಗ್ತಾರಾ..? ಗೊತ್ತಿಲ್ಲ. ಆದರೆ.. ಇಬ್ಬರು ಒಂದಾಗಬೇಕು ಎನ್ನುವುದು ಚಿತ್ರರಂಗದ ಕೋರಿಕೆ. ಆ ಕಾಲ ಯಾವತ್ತು ಬರುತ್ತೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆಯಾದರೂ ಸದ್ಯ ದರ್ಶನ್ ಮತ್ತು ಸುದೀಪ್ ಮಧ್ಯೆ ಹುಳಿ ಹಿಂಡಿದ್ಯಾರು ಎನ್ನುವುದನ್ನು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಹೌದು, ಈ ಕುರಿತು ''ಸುಮನ್ ಟಿವಿ ಕನ್ನಡ'' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಧರ್ಮ ಕೀರ್ತಿರಾಜ್, ದರ್ಶನ್ ಮತ್ತು ಸುದೀಪ್ ಕಿತ್ತಾಡಿಕೊಂಡು ದೂರ ಆಗಿಲ್ಲ ಎಂದು ಹೇಳಿದ್ದಾರೆ. ಬೇಕು ಬೇಕಂತಲೇ ತಮ್ಮ ಸಂಬಂಧವನ್ನು ಅವರು ಮುರಿದುಕೊಂಡಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿರುವ ಧರ್ಮ ಕೀರ್ತಿರಾಜ್, ಇಬ್ಬರ ಸಂಬಂಧ ಮುರಿದು ಬೀಳಲು ಸಹಜ ಮನಸ್ತಾಪ ಮತ್ತು ಸಂವಹನದ ಕೊರತೆ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಮತ್ತು ಸುದೀಪ್, ಇಬ್ಬರು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಸ್. ಬಿಡುವಿರದ ನಟರು. ಈ ಹಿನ್ನೆಲೆ ಮುಖಾಮುಖಿಯಾಗಿ ಮಾತನಾಡಲು ಹೆಚ್ಚಿನ ಸಮಯ ಇಬ್ಬರಿಗೂ ಸಿಕ್ಕಿರಲಿಕ್ಕಿಲ್ಲ. ಇಬ್ಬರ ನಡುವೆ ಇರುವ ಈ ಕಮ್ಯೂನಿಕೇಶನ್ ಗ್ಯಾಪ್ನ್ನೇ ಬೇರೆಯವರು ದುರುಪಯೋಗ ಮಾಡಿಕೊಂಡಿರಬಹುದು. ಧರ್ಮ ಕೀರ್ತಿರಾಜ್ ಅವರಿಗೆ ಕೂಡ ಇದೇ ಅನುಮಾನ ಇದೆ.

ಈ ಕುರಿತು ಮಾತನಾಡಿರುವ ಧರ್ಮ ಕೀರ್ತೀರಾಜ್, ಯಾವುದೋ ಒಂದು ವಿಷಯದಲ್ಲಿ ಸರಿಯಾದ ಸ್ಪಷ್ಟತೆ ಸಿಗದೆ ಇಬ್ಬರು ಅಪಾರ್ಥ ಮಾಡಿಕೊಂಡಿರಬಹುದು ಎಂದಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ವಿಷಯ ಮತ್ತೊಬ್ಬರ ಕಿವಿಗೆ ತಲುಪಿಸುವಾಗ, ಹಾದಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಒಂದು ವಿಚಾರ ಒಬ್ಬರಿಗೆ ತಲುಪಬೇಕಾದ ರೀತಿಯಲ್ಲಿ ಅದು ತಲುಪದೆ, ತಪ್ಪಾಗಿ ತಲುಪಿರಬಹುದು, ಅವರಿಗೆ ತಪ್ಪಾಗಿ ಅರ್ಥವಾಗಿರಬಹುದು ಎಂದು ಹೇಳಿರುವ ಧರ್ಮ ಕೀರ್ತಿರಾಜ್, ಈ ಸಣ್ಣಪುಟ್ಟ ಗೊಂದಲಗಳಿಂದ ಬೇಸತ್ತು, ನನ್ನ ದಾರಿ ನನ್ನದು, ನಿನ್ನ ದಾರಿ ನಿನ್ನದು ಎಂದು ಪರಸ್ಪರ ಇಬ್ಬರು ಅಂತರ ಕಾಯ್ದುಕೊಂಡಿರಬಹುದು ಎಂದಿದ್ದಾರೆ.
ಇನ್ನು ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಧರ್ಮ ಕೀರ್ತಿರಾಜ್, ಮುಂದಿನ ದಿನಗಳಲ್ಲಿ ಇಬ್ಬರೂ ಮತ್ತೆ ಒಂದಾಗುವ ಸಾಧ್ಯತೆ ಖಂಡಿತ ಇದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಒಂದಾದರೆ ಅದು ಒಳ್ಳೆಯ ಬೆಳವಣಿಗೆ, ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಇಬ್ಬರು ದೊಡ್ಡ ನಾಯಕರನ್ನು ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬ ಎಂದಿರುವ ಧರ್ಮ ಈ ಬೆಳವಣಿಗೆ ಚಿತ್ರರಂಗಕ್ಕೂ ಒಳ್ಳೆಯದು, ಅಭಿಮಾನಿಗಳಿಗೂ ಒಳ್ಳೆಯದು ಎಂದಿದ್ದಾರೆ.
ಸದ್ಯ ಧರ್ಮ ಕೀರ್ತಿರಾಜ್ ಅವರ ಈ ಮಾತು ಕೇಳಿ ಇಬ್ಬರ ಅಭಿಮಾನಿಗಳಲ್ಲಿ ಭರವಸೆ ಚಿಗುರಿದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ ಇಬ್ಬರು ಆದಷ್ಟು ಬೇಗ ಒಂದಾಗಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದೇ ವೇದಿಕೆಯಲ್ಲಿ ಕೈ ಕೈ ಹಿಡಿದು ನಿಲ್ಲುತ್ತಾರಾ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.


Click it and Unblock the Notifications