ವಿರಾಟ್ ಕೊಹ್ಲಿ ಭೇಟಿ ಮಾಡಿದ ರಾಜ್ ಮೊಮ್ಮಗ ಧೀರೆನ್; ಭೇಟಿಗೆ ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ವಿವಿಧ ತಂಡಗಳ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಊರುಗಳಿಗೆ ಬಂದಿಳಿಯುತ್ತಿದ್ದಾರೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೂ ಸಹ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ಮೊನ್ನೆ ( ಮಾರ್ಚ್ 26 ) ಆಗಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್ ಜತೆಗೆ ಕ್ರಿಸ್ ಗೇಲ್ ಸಹ ಮೊನ್ನೆ ಬೆಂಗಳೂರಿಗೆ ಆಗಮಿಸಿದ್ರು. ಇನ್ನು ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಅನಾವರಣಗೊಳಿಸಲು ಆರ್ ಸಿ ಬಿ ಅನ್ ಬಾಕ್ಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಈ ಸ್ಟಾರ್ ಕ್ರಿಕೆಟರ್ಸ್ ಬೆಂಗಳೂರಿಗೆ ಬಂದಿಳಿದಿದ್ದರು.

ಇನ್ನು ಇದರ ನಡುವೆಯೇ ಬೆಂಗಳೂರಿನಲ್ಲಿ ನಡೆದ 18ಕೆ ಮ್ಯಾರಥಾನ್ ಕಾರ್ಯಕ್ರಮದಲ್ಲಿಯೂ ಸಹ ವಿರಾಟ್ ಕೊಹ್ಲಿ ಭಾಗವಹಿಸಿದ್ದಾರೆ. ಹೌದು, ಈ ಮ್ಯಾರಾಥಾನ್ ಅನ್ನು ಉದ್ಘಾಟಿಸುವ ಸಲುವಾಗಿ ವಿರಾಟ್ ಕೊಹ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಮ್ಯಾರಾಥಾನ್ನಲ್ಲಿ ಸಾಮಾನ್ಯ ಜನರ ಜತೆಗೆ ಸಿನಿಮಾ ಸೆಲೆಬ್ರಿಟಿಗಳೂ ಸಹ ಭಾಗವಹಿಸಿದ್ದರು. ಕನ್ನಡದ ಮೇರುನಟ ಡಾ ರಾಜ್ಕುಮಾರ್ ಅವರ ಮೊಮ್ಮಗ ಧೀರೆನ್ ರಾಮ್ಕುಮಾರ್ ಸಹ ಈ ಮ್ಯಾರಥಾನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಧೀರೆನ್ ರಾಮ್ಕುಮಾರ್ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದು, ಅವರ ಪಕ್ಕ ನಿಂತು ಫೋಟೊ ಕೂಡ ತೆಗೆಸಿಕೊಂಡಿದ್ದಾರೆ. ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧೀರೆನ್ ರಾಮ್ಕುಮಾರ್ ಕಳೆದ ಭಾನುವಾರ ನಡೆದ ಒನ್ ಏಯ್ಟ್ ಮ್ಯಾರಥಾನ್ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದು ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಮ್ಯಾರಥಾನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ನಮಸ್ಕಾರ ಬೆಂಗಳೂರು, ಎಂಜಾಯ್ ಮಾಡಿ ಓಡು ಗುರು ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ನೆರೆದಿದ್ದವರಲ್ಲಿ ಹುರಿದುಂಬಿಸಿದ್ದರು. ವಿರಾಟ್ ಕೊಹ್ಲಿ ಅವರು ಕನ್ನಡದಲ್ಲಿ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕನ್ನಡಿಗರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಶಿವ 143 ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ಧೀರೆನ್ ರಾಮ್ಕುಮಾರ್ ಮೊದಲ ಸಿನಿಮಾ ಮೂಲಕವೇ ನಟನೆ ಮೂಲಕ ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದಲ್ಲಿನ ತಮ್ಮ ನಟನೆಗಾಗಿ ಧೀರೆನ್ ರಾಮ್ಕುಮಾರ್ ಚಿತ್ರಸಂತೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭರವಸೆ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


Click it and Unblock the Notifications











