'ಧೂಮಂ' ಮುಂಗಡ ಬುಕಿಂಗ್ ಓಪನ್; ಎಷ್ಟಿದೆ ಕನ್ನಡ ವರ್ಷನ್ ಟಿಕೆಟ್ ದರ?
ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಾಣದ ಮುಂದಿನ ಚಿತ್ರ ಧೂಮಂ ಇದೇ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಕಳೆದ ವರ್ಷ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಮೂಲಕ ಬಾಕ್ಸ್ ಆಫೀಸ್ನಲ್ಲಿ ಚಿನ್ನದ ಬೆಲೆ ತೆಗೆದಿದ್ದ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ರಾಘವೇಂದ್ರ ಸ್ಟೋರ್ಸ್ ಬಳಿಕ ಈ ವರ್ಷ ತೆರೆಗೆ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ.
ಚಿತ್ರಕ್ಕೆ ಲೂಸಿಯಾ ಹಾಗೂ ಯೂ ಟರ್ನ್ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ನಾಯಕನಾಗಿ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಹಾಗೂ ನಾಯಕಿಯಾಗಿ ಮಲಯಾಳಂನ ಅಪರ್ಣ ಬಾಲಮುರಳಿ ನಟಿಸಿದ್ದಾರೆ.

ಇನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಿಡುಗಡೆಗೊಳ್ಳುತ್ತಿರುವ ಮೊದಲ ಕನ್ನಡೇತರ ಚಿತ್ರ ಇದಾಗಿದ್ದು, ಇದು ಮೂಲ ಮಲಯಾಳಂ ಚಿತ್ರವಾಗಿದ್ದು, ಕನ್ನಡ ಭಾಷೆಗೂ ಬಿಡುಗಡೆಯಾಗಲಿದೆ.
ಚಿತ್ರ ಬಿಡುಗಡೆಗೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು ಇಂದು ( ಜೂನ್ 20 ) ಬೆಂಗಳೂರು ಹಾಗೂ ಕೊಚ್ಚಿ ನಗರಗಳಲ್ಲಿ ಚಿತ್ರದ ಮುಂಗಡ ಬುಕಿಂಗ್ ತೆರೆಯಲಾಗಿದೆ. ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳ ಬುಕಿಂಗ್ ಅನ್ನು ತೆರೆಯಲಾಗಿದ್ದು, ನಗರಗಳ ಸಿಂಗಲ್ ಸ್ಕ್ರೀನ್ಗಳಲ್ಲಿ ಮಾತ್ರ ಸದ್ಯಕ್ಕೆ ಮುಂಗಡ ಬುಕಿಂಗ್ ಆರಂಭಗೊಂಡಿದೆ.
ಬೆಂಗಳೂರಿನಲ್ಲಿ ಮಲಯಾಳಂ ವರ್ಷನ್ನ ಬುಕಿಂಗ್ ಅನ್ನು ಅಗರದ ತಿರುಮಲ, ತಾವರೆಕೆರೆ ಬಾಲಾಜಿ, ಸ್ಯಾಂಕಿ ರಸ್ತೆಯ ಕಾವೇರಿ, ಕಾಡುಗೋಡಿಯ ಶ್ರೀನಿವಾಸ, ಸಂಜಯ್ ನಗರದ ವೈಭವ್, ಕೆಂಗೇರಿಯ ವೆಂಕಟೇಶ್ವರ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ತೆರೆಯಲಾಗಿದೆ.
ಈ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ದರ 150 ರೂಪಾಯಿಗಳಿದ್ದು, ಸಾಮಾನ್ಯ ಕ್ಲಾಸ್ ಟಿಕೆಟ್ಗಳ ದರ 120 ರೂಪಾಯಿ ಇದೆ. ಇನ್ನು ಬೆಂಗಳೂರಿನಲ್ಲಿ ಸದ್ಯ ಕನ್ನಡ ಧೂಮಂ ಕನ್ನಡ ವರ್ಷನ್ನ ಮುಂಗಡ ಬುಕಿಂಗ್ ಅನ್ನು ತಾವರೆಕೆರಯ ಬಾಲಾಜಿ ಹಾಗೂ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಯಲಾಗಿದೆ. ಈ ಪ್ರದರ್ಶನಗಳ ಟಿಕೆಟ್ ದರ ಸಹ ಬಾಲ್ಕನಿಗೆ 150 ರೂಪಾಯಿಗಳಿದ್ದು, ಸಾಮಾನ್ಯ ಕ್ಲಾಸ್ ಟಿಕೆಟ್ಗೆ 120 ರೂಪಾಯಿ ಇದೆ.
ಅತ್ತ ಕೊಚ್ಚಿಯಲ್ಲಿ ಮಲಯಾಳಂ ವರ್ಷನ್ ಬುಕಿಂಗ್ ತೆರೆಯಲಾಗಿದ್ದು, ಅಲ್ಲಿಯೂ ಸದ್ಯಕ್ಕೆ ಸಿಂಗಲ್ ಸ್ಕ್ರೀನ್ ಬುಕಿಂಗ್ ಅನ್ನು ಮಾತ್ರ ತೆರೆಯಲಾಗಿದೆ. ಹೀಗೆ ಇಂದು ಎರಡೂ ವರ್ಷನ್ಗಳಿಗೂ ಸಹ ಬುಕಿಂಗ್ ಕೇವಲ ಕೆಲ ಸಿಂಗಲ್ ಸ್ಕ್ರೀನ್ಗಳಲ್ಲಿ ಮಾತ್ರ ಆರಂಭವಾಗಿದ್ದು, ಮಲ್ಡಿಪ್ಲೆಕ್ಸ್ ಬುಕಿಂಗ್ ನಾಳೆ ( ಜೂನ್ 21 ) ಆರಂಭವಾಗಲಿದೆ.
ನಿಕೋಟಿನ್ ಚಿತ್ರವೇ ಧೂಮಂ
ದ ಹಿಂದೂ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಪವನ್ ಕುಮಾರ್ ತಾವು ನಿರ್ದೇಶಕನಾಗುವ ಮುನ್ನವೇ ಬರೆದುಕೊಂಡಿದ್ದ ನಿಕೋಟಿನ್ ಕಥೆಯೇ ಈಗ ಧೂಮಂ ಆಗಿದೆ ಎಂದು ಹೇಳಿಕೊಂಡಿದ್ದಾರೆ. "ಈ ಸಿನಿಮಾಗೆ ಧೂಮಂ ಎಂದು ಹೆಸರಿಡುವ ಮುನ್ನ 'ನಿಕೋಟಿನ್ C10H14N2' ಎಂದು ಶೀರ್ಷಿಕೆ ಇಟ್ಟಿದ್ದೆ. ಆದರೆ ಓರ್ವ ಸ್ಟಾರ್ ನಟ ಚಿತ್ರದಲ್ಲಿ ನಟಿಸುವಾಗ ನೆನಪಿನಲ್ಲಿ ಉಳಿಯುವಂತಹ ಶೀರ್ಷಿಕೆ ಇಡಬೇಕು ಎಂಬ ಕಾರಣಕ್ಕೆ ಬದಲಿಸಿದೆ" ಎಂದು ಪವನ್ ಕುಮಾರ್ ತಿಳಿಸಿದರು.


Click it and Unblock the Notifications











