ಧ್ರುವ ಸರ್ಜಾ 'ದುಬಾರಿ'ಗೆ ತಾತ್ಕಾಲಿಕ ಬ್ರೇಕ್: ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾ ಯಾವುದು?
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚಿಗೆ ಪೊಗರು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನೇಕ ವರ್ಷಗಳ ನಂತರ ಧ್ರುವ ತೆರೆಮೇಲೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಪೊಗರು ಬಳಿಕ ಧ್ರುವ ದುಬಾರಿ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದರು. ಆದರೀಗ ದುಬಾರಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.
ಪೊಗರು ಮುಗಿಯುತ್ತಿದ್ದಂತೆ ನಿರ್ದೇಶಕ ನಂದ ಕಿಶೋರ್ ಜೊತೆ ಮತ್ತೆ ಸಿನಿಮಾ ಮಾಡಲು ಮುಂದಾಗಿ, ದುಬಾರಿ ಅಂತ ಶೀರ್ಷಿಕೆ ಇಟ್ಟು ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನೆರವೇರಿಸಿದ್ದರು. ಇನ್ನೇನು ಸಿನಿಮಾ ಪ್ರಾರಂಭವಾಯಿತು ಎನ್ನುವಷ್ಟೊತ್ತಿಗೆ ದುಬಾರಿ ಚಿತ್ರವನ್ನು ಪಕ್ಕಕ್ಕೆ ಇಡಲಾಗಿದೆ.
ಸದ್ಯಕ್ಕೆ ನಿರ್ದೇಶಕ ನಂದಕಿಶೋರ್ ದುಬಾರಿ ಬಿಟ್ಟು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜುಗೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಹೊಸ ಸಿನಿಮಾ ತಿಂಗಳಾಂತ್ಯಕ್ಕೆ ಪ್ರಾರಂಭವಾಗುತ್ತಿದೆ. ಅಂದ್ಮೇಲೆ ದುಬಾರಿ ಮತ್ತಷ್ಟು ತಡವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ದುಬಾರಿ ಸದ್ಯಕ್ಕಿಲ್ಲ ಅಂದ್ಮೇಲೆ ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ನಡುವೆ ಧ್ರುವ ಜಗ್ಗುದಾದಾ ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಮಾತುಕತೆ ಕೂಡ ನಡೆದಿದೆ. ಮತ್ತೊಂದೆಡೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್, ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ದುಬಾರಿ ಪಕ್ಕಕ್ಕೆ ಇಟ್ಟಿರುವ ಧ್ರುವ ಸರ್ಜಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಭಾರಿ ಕುತೂಹಲ ಮೂಡಿಸಿದೆ. ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಮಾಡುವ ಯೊಜನೆ ಕೂಡ ನಡೆಯುತ್ತಿದೆಯಂತೆ. ಒಂದು ವೇಳೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ರೆ ಧ್ರುವ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications











