ದುಡ್ಡಿಗಾಗಿ ತೂಗುದೀಪ ಫ್ಯಾಮಿಲಿ ರಿಲೇಷನ್ಶಿಪ್ ಕಳೆದುಕೊಳ್ಳಲ್ಲ; ಧ್ರುವ ಸರ್ಜಾ
ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಧ್ರುವ ಸರ್ಜಾ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಸಿನಿಮಾ ಬಿಟ್ಟು ಒಂದಷ್ಟು ವೈಯಕ್ತಿಕ ಜೀವನದ ಪ್ರಶ್ನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸುತ್ತಿದ್ದಾರೆ.
ತೂಗುದೀಪ ಹಾಗೂ ಸರ್ಜಾ ಕುಟುಂಬದ ನಡುವೆ ಮೊದಲಿನಿಂದ ಆತ್ಮೀಯ ಸಂಬಂಧವಿತ್ತು. ಆದರೆ ಕೆಲ ವರ್ಷಗಳಿಂದ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತೇಯಿದೆ. 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಜೊತೆ ಅರ್ಜುನ್ ಸರ್ಜಾ ನಟಿಸಿದ್ದರು. ಅದೇ ರೀತಿ 'ಪ್ರೇಮಬರಹ' ಚಿತ್ರದ ಹಾಡೊಂದರಲ್ಲಿ ದರ್ಶನ್ ಹೆಜ್ಜೆ ಹಾಕಿದ್ದರು. ಬಳಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಪರೋಕ್ಷವಾಗಿ ಧ್ರುವ ಸರ್ಜಾ ಕೂಡ ಈ ಬಗ್ಗೆ ಮಾತನಾಡಿದ್ದರು.

ದರ್ಶನ್ ಬಗೆಗಿನ ಬೇಸರದ ಬಗ್ಗೆ ಧ್ರುವ ಸರ್ಜಾ ಬಹಿರಂಗವಾಗಿ ಮಾತನಾಡಿರುವುದು ಇದೆ. ದರ್ಶನ್ ಅವರ ಬಗ್ಗೆ ನನ್ನದು ಕೆಲ ಪ್ರಶ್ನೆಗಳಿವೆ. ಅದಕ್ಕೆಲ್ಲಾ ಉತ್ತರ ಬೇಕಿದೆ ಎಂದು ಧ್ರುವ ಹೇಳಿದ್ದು ವೈರಲ್ ಆಗಿತ್ತು. ಇನ್ನು ದರ್ಶನ್ ಮಾನಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ಅರ್ಜುನ್ ಸರ್ಜಾ ವಂಚನೆ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ವಂಚನೆ ಪ್ರಕರಣದ ಹಿನ್ನೆಲೆಯಲ್ಲೇ ದರ್ಶನ್ ಹಾಗೂ ಅರ್ಜುನ್ ಸರ್ಜಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಚರ್ಚೆ ನಡೀತಿತ್ತು. ಈ ಬಗ್ಗೆ ಸ್ವತ್ಃ ಧ್ರುವ ಸರ್ಜಾ ಮಾತನಾಡಿದ್ದಾರೆ. ಗ್ಯಾರಂಟಿ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಲ್ಲಿಕಾರ್ಜುನ್ ವಾಪಸ್ ಬಂದಿರುವ ಬಗ್ಗೆ ನಾನು ಏನು ಹೇಳಲಿ ಎಂದು ಧ್ರುವ ಸರ್ಜಾ ನಕ್ಕಿದ್ದಾರೆ. "ಕೆಲ ಮಾಧ್ಯಮಗಳಲ್ಲಿ ಬಂದಂತೆ ಸರ್ಜಾ ಫ್ಯಾಮಿಲಿ ದುಡ್ಡಿಗಾಗಿ ಯಾವುದೇ ರಿಲೇಷನ್ಶಿಪ್ ಕಳೆದುಕೊಳ್ಳಲ್ಲ.. ಅದೇ ರೀತಿ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಫ್ಯಾಮಿಲಿ ಕೂಡ ದುಡ್ಡಿಗಾಗಿ ರಿಲೇಷನ್ಶಿಪ್ ಕಳ್ಳಕೊಳ್ಳಲ್ಲ. ದುಡ್ಡಿಗಾಗಿ ಬಿರುಕು ಮೂಡಿತು, ಅನ್ನುವುದು ಸುಳ್ಳು.. ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಇರುವುದರಿಂದ ನಾವು ಹೆಚ್ಚು ಮಾತನಾಡುವಂತಿಲ್ಲ. ನಿಮಗೆ ಬೇಕಿದ್ದರೆ ಅರ್ಜುನ್ ಸರ್ಜಾ ಅವರಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳಿ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಧ್ರುವ ಸರ್ಜಾ "ಅಂದಹಾಗೆ ಮಲ್ಲಿಕಾರ್ಜುನ್ ಸಂಕನಗೌಡ ಅವರಿಗೆ ಆರೋಗ್ಯ ಸಮಸ್ಯೆಯಿದೆ ಅಂತ ಗೊತ್ತಾಯ್ತು. ಅವರಿಗೆ ನಿಜಕ್ಕೂ ಒಳ್ಳೆದಾಗಲಿ" ಎಂದು ಹಾರೈಸಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಸಿನಿಮಾ ಹಾಡುಗಳ ಬಗ್ಗೆ ಮಾತನಾಡುತ್ತಾ "ದರ್ಶನ್ ಸರ್ ನಟನೆಯ 'ಕರಿಯ' ಚಿತ್ರದ ಹಾಡುಗಳಿಂದ ಹಿಡಿದು ಪ್ರೇಮ್ ಅವರ ಎಲ್ಲಾ ಸಿನಿಮಾ ಹಾಡುಗಳು ಹಿಟ್ ಆಗಿದೆ. 'ಜೋಗಿ', 'ಜೋಗಯ್ಯ', 'ದಿ ವಿಲನ್' ಹೀಗೆ ಎಲ್ಲಾ ಸಿನಿಮಾ ಹಾಡುಗಳು" ಎಂದಿದ್ದಾರೆ.
ಏಳೆಂಟು ವರ್ಷ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ವಾಪಸ್ ಬಂದು ಸುದ್ದಿಗೋಷ್ಠಿ ನಡೆಸಿದ್ದರು. ಅತಿಯಾದ ಸಾಲಕ್ಕೆ ಹೆದರಿ ಊರು ಬಿಟ್ಟಿದ್ದಾಗಿ ಹೇಳಿದ್ದರು. ಸಾಡೇಸಾತಿ ನಡೀತಿತ್ತು. ಅದಕ್ಕೆ ಹೋಗಿದ್ದೆ. ಮರಳಿ ಬಂದ ಬಳಿಕ ಯಾರೆಗೆಲ್ಲಾ ಸಾಲ ಕೊಡಬೇಕಿತ್ತೋ ಎಲ್ಲರನ್ನು ಭೇಟಿ ಮಾಡಿ ಮಾತನಾಡಿದ್ದೀನಿ. ಸಾಧ್ಯವಾದಷ್ಟು ಹಣ ವಾಪಸ್ ಕೊಡ್ತೀನಿ ಎಂದಿದ್ದರು.
ಮಲ್ಲಿಕಾರ್ಜುನ್ ಮಹಾ ಮೋಸಗಾರ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. "ಆತ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ. ಇವನನ್ನು ಯಾರು ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ಯಾರು ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಈತ ಎಲ್ಲಾದರೂ ನಮ್ಮಗಳ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ" ಎಂದು ಪೋಸ್ಟ್ ಮಾಡಿ ಮಾಹಿತಿ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications