'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ
ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಒಡನಾಟ ಎಷ್ಟು ಆಪ್ತವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು ಚಿರಂಜೀವಿ. ಅಣ್ಣ-ತಮ್ಮನ ಬಾಂಧವ್ಯ ಹೇಗಿತ್ತು ಎಂಬುದನ್ನು ಸಾರುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ.
Recommended Video
ಬಾಲ್ಯದಿಂದಲೂ ತನ್ನನ್ನು ತಮ್ಮನಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಂಡಿದ್ದ ಧ್ರುವ ಸರ್ಜಾ, ಅಣ್ಣನ ಹಠಾತ್ ಅಗಲುವಿಕೆಯಿಂದ ಎಷ್ಟು ಆಘಾತಗೊಂಡಿರಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಈ ಸಾವಿಗೆ ಇಡೀ ಕರ್ನಾಟಕವೇ ಮರುಗಿದೆ. ಚಿರಂಜೀವಿ ಸರ್ಜಾ ಅವರ ಅಭಿಮಾನಿಯಾಗಿರದೇ ಇರಬಹುದು, ಆದರೆ ಆ ಸಾವು ಮನೆಯೊಳಗಿನ ಒಬ್ಬ ಆಪ್ತ ಸದಸ್ಯನನ್ನು ಕಳೆದುಕೊಂಡಂತೆ ನೋವುಂಟು ಮಾಡುತ್ತಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಅಣ್ಣನ ನೆನಪಲ್ಲಿ ಧ್ರುವ ಭಾವುಕ ಸಾಲನ್ನು ಬರೆದುಕೊಂಡಿದ್ದಾರೆ. ಮುಂದೆ ಓದಿ...

ವೈರಲ್ ಆಗಿದ್ದ ಫೋಟೊ
ಚಿರಂಜೀವಿ ಸರ್ಜಾ ಅಗಲುವ ಹಿಂದಿನ ದಿನವಷ್ಟೇ ಸಹೋದರರೊಂದಿಗಿನ ಅಪೂರ್ವ ಫೋಟೊವನ್ನು ಶೇರ್ ಮಾಡಿದ್ದರು. ಹಳೆಯ ಫೋಟೊವೊಂದರಂತೆಯೇ ಪೋಸ್ ನೀಡಿದ್ದ ಈ ಫೋಟೊ ವೈರಲ್ ಆಗಿತ್ತು.

ಈಗಲೂ ಹೀಗೆಯೇ ಇದ್ದೇವೆ
'ಆಗ ಮತ್ತು ಈಗ. ನಾವು ಈಗಲೂ ಹೀಗೆಯೇ ಇದ್ದೇವೆ. ನೀವೇನು ಹೇಳುತ್ತೀರಿ?' ಎಂದು ಅಭಿಮಾನಿಗಳ ಜತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. 'ಇದೇ ರೀತಿಯ ಪೋಸ್ಅನ್ನು 20 ವರ್ಷದ ಬಳಿಕವೂ ನೋಡಲು ಇಷ್ಟಪಡುತ್ತೇನೆ' ಎಂದು ಸರ್ಜಾ ಕುಟುಂಬುದವರೇ ಆದ ಅಪರ್ಣಾ ಸರ್ಜಾ ಎಂಬುವವರು ಅಂದು ಕಾಮೆಂಟ್ ಹಾಕಿದ್ದರು.

ನೀನು ವಾಪಸ್ ಬೇಕು
ಈ ಫೋಟೊವನ್ನೇ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಬಳಸಿಕೊಂಡಿದ್ದಾರೆ. ಅಣ್ಣನನ್ನು ಕಳೆದುಕೊಂಡ ನೋವಿನಲ್ಲಿದ್ದ ಅವರು ಐದು ದಿನದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಅವರು ಬರೆದ ಸಾಲುಗಳು ಹೃದಯ ಹಿಂಡುವಂತಿದೆ. 'ನೀನು ನನಗೆ ವಾಪಸ್ ಬೇಕು. ನೀನಿಲ್ಲದೆ ನನಗೆ ಇರಲು ಸಾಧ್ಯವೇ ಆಗುತ್ತಿಲ್ಲ' ಎಂದು ಧ್ರುವ ಬರೆದುಕೊಂಡಿದ್ದಾರೆ.

ಪನ್ನಗಾಭರಣ ಫೋಟೊ
ಚಿರಂಜೀವಿ ಸರ್ಜಾ ಅವರಿಗೆ ತೀರಾ ಆಪ್ತರಾಗಿದ್ದವರು ನೋವು ಸಹಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಫೋಟೊಗಳೇ ಸಾಕ್ಷಿ. ಅವರ ಆಪ್ತ ವಲಯದಲ್ಲಿದ್ದ ನಿರ್ದೇಶಕ ಪನ್ನಗಾಭರಣ ಫೋಟೊವೊಂದನ್ನು ಶೇರ್ ಮಾಡಿದ್ದು, ಪನ್ನಗಾಭರಣ, ಪ್ರಜ್ವಲ್ ದೇವರಾಜ್ ಹಾಗೂ ಅಭಿಷೇಕ್ ಎಂಬುವವರನ್ನು ಚಿರಂಜೀವಿ ಎತ್ತಿಕೊಂಡಿದ್ದರು.

ಇದು ಅನಿರೀಕ್ಷಿತ
ಮೂರು ದಿನಗಳ ಹಿಂದೆ ಸುದೀರ್ಘ ಬರಹ ಬರೆದಿದ್ದ ಪನ್ನಗಾಭರಣ, ತಮ್ಮ ಸ್ಥಿತಿಯಲ್ಲಿ ಏನನ್ನೂ ಹೇಳಿಕೊಳ್ಳಲು ಸಾಧ್ಯವಾಗದೆ, ಪದೇ ಪದೇ ಬರೆದು ಮತ್ತೆ ಡಿಲೀಟ್ ಮಾಡುತ್ತಿದ್ದೇನೆ. ಸ್ವಲ್ಪ ಹೊತ್ತು ಗಟ್ಟಿಯಾಗುತ್ತೇನೆ, ಆದರೆ ಮರುಕ್ಷಣವೇ ಬಿಕ್ಕಿ ಬಿಕ್ಕಿ ಅಳುತ್ತೇನೆ. ಈಗ ಯಾವುದು ಸರಿ ಎನ್ನುವುದೇ ಗೊತ್ತಾಗುತ್ತಿಲ್ಲ. ಏಕೆಂದರೆ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಪನ್ನಗಾಭರಣ ಬರೆದಿದ್ದರು.


Click it and Unblock the Notifications











