ಬಿಜೆಪಿಗೆ ದರ್ಶನ್- ಸುದೀಪ್ ಬೆಂಬಲ: ನಿಖಿಲ್ ಕುಮಾರಸ್ವಾಮಿಗೆ ಸಿಗುತ್ತಾ ಹನುಮ ಭಕ್ತನ ಬಲ?
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ದಿನ ಹತ್ತಿರವಾಗುತ್ತಿದ್ದಂತೆ 3 ಪಕ್ಷಗಳಿಂದ ಪ್ರಚಾರ ಜೋರಾಗುತ್ತಿದೆ. ನಿಧಾನವಾಗಿ ಸಿನಿಮಾ ತಾರೆಯರನ್ನು ಮತಬೇಟೆಗಾಗಿ ಕರೆತರುವ ಪ್ರಯತ್ನ ನಡೀತಿದೆ. ಈಗಾಗಲೇ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತಬೇಟೆ ಶುರು ಮಾಡಿದ್ದಾರೆ. ಇನ್ನು ನಟಿ ರಮ್ಯಾ, ದುನಿಯಾ ವಿಜಯ್ ಕೂಡ ಶೀಘ್ರದಲ್ಲೇ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ.
ನಟ ಸುದೀಪ್ ನನ್ನ ಬೆಂಬಲ ನಮ್ಮ ಮಾಮ ಸಿಎಂ ಬೊಮ್ಮಾಯಿ ಅವರಿಗೆ ಎಂದು ಹೇಳಿದ್ದಾರೆ. ಬಿಜೆಪಿಯ ಮತ್ತೆ ಕೆಲವು ನಾಯಕರ ಪರವಾಗಿಯೂ ಕಿಚ್ಚ ಪ್ರಚಾರ ನಡೆಸುವ ಸಾಧ್ಯತೆಯಿದೆ. ಮತ್ತೊಂದು ಕಡೆ ನಟ ದರ್ಶನ್ ಒಂದು ಪಕ್ಷಕ್ಕೆ ಸೀಮಿತವಾಗಿದೇ ವಿವಿಧ ಪಕ್ಷಗಳಲ್ಲಿ ಇರುವ ತಮ್ಮ ಆಪ್ತರ ಪರ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಶ್ರೀರಂಗಪಟ್ಟಣ, ಮೇಲುಕೋಟೆ, ನಗರದ ಯಲಹಂಕ ಭಾಗಗಳಲ್ಲಿ ದರ್ಶನ್ ಪ್ರಚಾರ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮುನಿರತ್ನ ಸೇರಿದಂತೆ ಹಲವರ ಪರ ಪ್ರಚಾರ ನಡೆಸುವ ಸಾಧ್ಯತೆಯಿದೆ.

ಇದೀಗ ಜೆಡಿಎಸ್ ಪರ ಧ್ರುವ ಸರ್ಜಾ ಪ್ರಚಾರದ ಕಣಕ್ಕಿಳಿಯುವ ಗುಸುಗುಸು ಶುರುವಾಗಿದೆ. ತಿಂಗಳಾಂತ್ಯಕ್ಕೆ ಸ್ನೇಹಿತರ ಪರ ಆಕ್ಷನ್ ಪ್ರಿನ್ಸ್ ಮತಬೇಟೆ ಆರಂಭಿಸಲಿದ್ದಾರೆ. ಧ್ರುವ ಕೂಡ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗದೇ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್, ಅರಕಲಗೂಡು ಬಿಜೆಪಿ ಅಭ್ಯರ್ಥಿ ಎಚ್.ಯೋಗಾ ರಮೇಶ್ ಪರ ಹಾಗೂ ತುಮಕೂರು ಬಿಜೆಪಿ ಅಭ್ಯರ್ಥಿ ಪರ ಧ್ರುವ ಪ್ರಚಾರ ನಡೆಸುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಚ್ಚರಿ ಎಂದರೆ ಧ್ರುವ ಸರ್ಜಾ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಪರ ಮತಬೇಟೆಗೆ ಇಳಿಯುತ್ತಾರೆ ಎನ್ನಲಾಗ್ತಿದೆ. ಇನ್ನು ಶಿಡ್ಗಘಟ್ಟದ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಪರ ಕೂಡ ಆಕ್ಷನ್ ಪ್ರಿನ್ಸ್ ಮತಯಾಚಿಸುವ ಬಗ್ಗೆ ಚರ್ಚೆ ನಡೀತಿದೆಯಂತೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಧ್ರುವ ಸರ್ಜಾನ ಕರೆಸುವ ಬಗ್ಗೆ ಮಾತುಕತೆ ಮುಂದುವರೆದಿದೆ. ದರ್ಶನ್, ಸುದೀಪ್ ರೀತಿಯಲ್ಲೇ ಧ್ರುವಗೂ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಚುನಾವಣೆ ಪ್ರಚಾರ ರಂಗೇರಲಿದೆ.

ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ. ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಸಚಿವರಾದ ವಿ. ಸೋಮಣ್ಣ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಪೈಪೋಟಿ ಜೋರಾಗಿ ಇರಲಿದ್ದು ಸಿದ್ದರಾಮಯ್ಯ ಪರ ನಟಿ ರಮ್ಯಾ ಹಾಗೂ ನಟ ದುನಿಯಾ ವಿಜಯ್ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗ್ತಿದೆ. ಒಟ್ನಲ್ಲಿ ತಾರೆಯರ ಆಗಮನದಿಂದ ಚುನಾವಣೆ ಪ್ರಚಾರ ಕಣ ಮತ್ತಷ್ಟು ಕಾವು ಪಡೆಯಲಿದೆ.
ನಟ ಸುದೀಪ್, ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ನಿಖಿಲ್ ಕುಮಾರಸ್ವಾಮಿ "ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್ಗಳು, ನಾವು ಬೇರೆ ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಸುವುದಿಲ್ಲ" ಎಂದು ಹೇಳಿದ್ದರು. ಇದೀಗ ಧ್ರುವ ಸರ್ಜಾ ಜೆಡಿಎಸ್ ಪರ ಪ್ರಚಾರ ನಡೆಸುತ್ತಾರೆ ಎನ್ನುವ ಸುದ್ದಿ ಭಾರೀ ಚರ್ಚೆ ಹುಟ್ಟುಹಾಕಿದೆ. ನಿಜಕ್ಕೂ ನಿಖಿಲ್ ಕುಮಾರಸ್ವಾಮಿ ಪರ ಆಕ್ಷನ್ ಪ್ರಿನ್ಸ್ ಮತಯಾಚಿಸುತ್ತಾರಾ? ಕಾದು ನೋಡಬೇಕಿದೆ.

ಸದ್ಯ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರದಲ್ಲೂ ನಟಿಸ್ತಿದ್ಧಾರೆ. ಈ ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟುಹಾಕಿವೆ.


Click it and Unblock the Notifications











