ತಪ್ಪಿದ ವಿಮಾನ ದುರಂತ: ನಿಟ್ಟುಸಿರು ಬಿಟ್ಟ ಧ್ರುವ ಸರ್ಜಾ ಮಾರ್ಟಿನ್ ಟೀಂ
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರತಂಡ ವಿಮಾನ ದುರಂತದಿಂದ ಪಾರಾಗಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ದೆಹಲಿಯಿಂದ ಶ್ರೀನಗರಕ್ಕೆ ಇಂಡಿಗೋ ವಿಮಾನದಲ್ಲಿ ಧ್ರುವ ಸರ್ಜಾ ಸೇರಿದಂತೆ ಇಡೀ 'ಮಾರ್ಟಿನ್ ಚಿತ್ರತಂಡ ಪ್ರಯಾಣಿಸುತ್ತಿತ್ತು. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.
ತಾಂತ್ರಿಕ ದೋಷದಿಂದ ಕ್ರ್ಯಾಶ್ ಆಗಬೇಕಿದ್ದ ವಿಮಾನವನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು 'ಮಾರ್ಟಿನ್' ತಂಡ ನಿಟ್ಟುಸಿರು ಬಿಟ್ಟಿದೆ. ಈ ವಿಚಾರವನ್ನು ವಿಮಾನದಿಂದಲೇ ಚಿತ್ರತಂಡ ವೀಡಿಯೋ ಮಾಡಿ ಹಂಚಿಕೊಂಡಿದೆ. ನಟ ಧ್ರುವ ಸರ್ಜಾ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣಗೆ ಕೂಡ ಇಂತದ್ದೇ ಅನುಭವವಾಗಿತ್ತು. ಆಕೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಸದ್ಯ ಇಂತದ್ದೇ ಕಹಿ ಅನುಭವ 'ಮಾರ್ಟಿನ್' ಚಿತ್ರತಂಡಕ್ಕೂ ಎದುರಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹಾಗಾಗಿ ಚಿತ್ರೀಕರಣಕ್ಕಾಗಿ ಗೋವಾ, ಶ್ರೀನಗರ ಹೀಗೆ ಬೇರೆ ಬೇರೆ ಕಡೆಗಳಿಗೆ ಚಿತ್ರತಂಡ ಪ್ರಯಾಣಿಸುತ್ತಿದೆ.
"ಕೆಟ್ಟ ಅನುಭವ ಇವತ್ತು ಆಗಿದ್ದು. ಜೀವನದಲ್ಲಿ ಇಂತಹ ಕೆಟ್ಟ ಅನುಭವ ಆಗಿರಲಿಲ್ಲ. ದೇವರಿಗೆ ಧನ್ಯವಾದ ತಿಳಿಸಬೇಕು. ಜೈ ಆಂಜನೇಯ" ಎಂದು ಧ್ರುವಾ ಸರ್ಜಾ ವಿಡಿಯೋದಲ್ಲಿ ಹೇಳಿದ್ದಾರೆ. ಪೈಲೆಟ್ಗೆ ಇಡೀ ತಂಡ ಧನ್ಯವಾದ ತಿಳಿಸಿದೆ. ಅಂದಹಾಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿಯಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಇಡೀ ತಂಡ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು.
ಶ್ರೀನಗರದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಚಿತ್ರತಂಡ ದೆಹಲಿಗೆ ಬರುತ್ತಿದ್ದ ವೇಳೆ ವಿಮಾನದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ ಅಷ್ಟು ಜನ ಕೆಲವೊತ್ತು ಆತಂಕದಲ್ಲಿ ಕಳೆಯುವಂತಾಗಿದೆ. ಪೈಲೆಟ್ ನಿಧಾನವಾಗಿ ವಿಮಾನವನ್ನು ಕೆಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದಿಂದ ಇಳಿದು ಹೊರಬರುವ ವೇಳೆ ತಂಡ ವಿಡಿಯೋ ಮಾಡಿರುವುದು ಗೊತ್ತಾಗುತ್ತಿದೆ.
ನವದೆಹಲಿಯಿಂದ ಶ್ರೀನಗರಕ್ಕೆ ಸೋಮವಾರ ಇಂಡಿಗೋ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪ್ರಕ್ಷುಬ್ಧತೆ ಅನುಭವಿಸಿತು. 6E6125 ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಸಂಜೆ 5.25 ಕ್ಕೆ ಟೇಕಾಫ್ ಆಗಿದ್ದು, ಭಾರೀ ಮಳೆಯಿಂದಾಗಿ ಸಮಸ್ಯೆ ಎದುರಿಸಿತು.
ಹವಾಮಾನ ಸಮಸ್ಯೆಯಿಂದ ವಿಮಾನ ಅಲುಗಾಡುತ್ತಿದ್ದಾಗ ಪ್ರಯಾಣಿಕರು ತಮ್ಮ ಕುರ್ಚಿಗಳನ್ನು ಹಿಡಿದುಕೊಂಡಿರುವುದನ್ನು ಕೆಲವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಸೋಮವಾರ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಳೆ ಮತ್ತು ಹಿಮಪಾತವು ಸಂಭವಿಸಿದೆ. ಹೀಗಾಗಿ 270-ಕಿಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಮತ್ತು ರಾಂಬನ್ ಜಿಲ್ಲೆಯ ಅರ್ಧ ಡಜನ್ಗಿಂತಲೂ ಹೆಚ್ಚು ಸ್ಥಳಗಳಲ್ಲಿ ಗುಡ್ಡಗಳಿಂದ ಕಲ್ಲುಗಳ ಗುಂಡಿನ ನಂತರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ದೋಡಾ ಜಿಲ್ಲೆಯ ಭದೇರ್ವಾಹ್ನ ಮೇಲ್ಭಾಗದಲ್ಲಿ ಹಿಮಪಾತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಂತರರಾಜ್ಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ದಿಢೀರ್ ರಸ್ತೆ ಬಂದ್ ಆಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ಇಂತಹ ಹವಾಮಾನ ಸನ್ನಿವೇಶದಲ್ಲಿ ಇಂಡಿಗೋ ವಿಮಾನ ಶ್ರೀನಗರದಲ್ಲಿ ಲ್ಯಾಂಡ್ ಆಗಲು ಸಮಸ್ಯೆ ಎದುರಾಗಿತ್ತು ಎಂದು ವರದಿಯಾಗಿದೆ.
ಉದಯ್ ಕೆ ಮೆಹ್ತಾ ನಿರ್ಮಾಣದ 'ಮಾರ್ಟಿನ್' ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬರುತ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಮುಂಬೈ ಬೆಡಗಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ನಟ ಧ್ರುವ ಸರ್ಜಾ, ನಾಯಕಿ ವೈಭವಿ, ನಿರ್ದೇಶಕ ಎ. ಪಿ ಅರ್ಜುನ್, ಕೊರಿಯೋಗ್ರಫಿ ಇಮ್ರಾನ್ ಮಾಸ್ಟರ್ ಸೇರಿದಂತೆ 10 ಜನಕ್ಕೂ ಹೆಚ್ಚು ತಂಡ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು.


Click it and Unblock the Notifications











