Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿ ಫಯಾಜ್ನನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಅತ್ಯುಗ್ರ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸಿನಿಮಾ ತಾರೆಯರು ಇದಕ್ಕೆ ದನಿಗೂಡಿಸಿದ್ದಾರೆ.
ನಟ ಧ್ರುವ ಸರ್ಜಾ ಟ್ವೀಟ್ ಮಾಡಿ "ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ" ಎಂದು ಬರೆದುಕೊಂಡಿದ್ದಾರೆ.

ನೇಹಾ ಹತ್ಯೆ ಪ್ರಕರಣದ ಬಗ್ಗೆ ನಟಿ ಪ್ರಿಯಾ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೊಲೆ ಮಾಡಿದವನಿಗೆ ಯಾರು ಶಿಕ್ಷೆ ಕೊಡ್ತಾರೆ? ಜೈಲಿನಿಂದ 10 ವರ್ಷಕ್ಕೆ ಅವನು ಹೊರಗಡೆ ಬರ್ತಾನೆ, ಅವನಿಗೆ ಮನೆಯಲ್ಲಿ ಯಾರೂ ಇಲ್ಲವಾ? ಮುಸ್ಲಿಂ ಅವ್ರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೀದಿಗೆ ಬಿಡ್ತಾರಾ? ಆದರೆ ಅವರಿಗೆ ಚೆನ್ನಾಗಿರೋ ಹುಡುಗೀರು ಬೇಕು. ಅವರ ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಟ್ಟು, ನಮ್ಮ ಹತ್ತಿರ ಬರುತ್ತಾರೆ. ಈಗ ಎಲ್ಲರೂ ಬಂದು ನೇಹಾ ಮನೆಗೆ ಸಾಂತ್ವನ ಹೇಳ್ತಿದ್ದಾರೆ. ಆಕೆ ವಾಪಸ್ ಬರ್ತಾಳಾ? ನಮ್ಮ ಕೈಗೆ ಫಿಯಾಜ್ ಕೊಡಿ, ಅವನು ಮತ್ತೆ ಹುಟ್ಟಬಾರದು ಹಾಗೆ ಮಾಡ್ತೀವಿ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
"ಹಂತಕ ಫಯಾಜ್ನನ್ನು ಎನ್ ಕೌಂಟರ್ ಮಾಡಬೇಕು. ಅವನಿಗೆ ಯಾವುದೇ ಕರುಣೆ ಬೇಕಾಗಿಲ್ಲ. ನೇಹಾ ಹಿರೇಮಠ್ ಕೊಲೆ ಖಂಡನೀಯ. ಕೊಲೆಗಾರನಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು" ಎಂದು ನಟಿ ಕಾವ್ಯಾ ಶಾಸ್ತ್ರಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏನಿದು ಘಟನೆ?
ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠರನ್ನು ಮುಸ್ಲಿಂ ಸಮುದಾಯದ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಾಲೇಜು ಕ್ಯಾಂಪಸ್ನಲ್ಲೇ ಈ ಘಟನೆ ನಡೆದಿತ್ತು. ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ನೇಹಾ ಪ್ರಥಮ ವರ್ಷ ಎಂಸಿಎ ಓದುತ್ತಿದ್ದಳು. ಕೊಲೆ ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.
ನೇಹಾ ತಂದೆ ಹೇಳಿದ್ದೇನು?
ನನ್ನ ಮಗಳ ಕೊಲೆ ಹಿಂದೆ ಲವ್ ಜಿಹಾದ್ ಇದೆ. ಕೊಲೆಗಾರನ ಜೊತೆಗೆ ನಾಲ್ಕೈದು ಜನ ಅದೇ ಸಮುದಾಯದವರು ಸದಾ ಇರುತ್ತಿದ್ದರು. ಅನೇಕ ಬಾಗಿ ನನ್ನ ಮಗಳ ಜೊತೆ ಅವರು ಮಾತನಾಡುವುದನ್ನು ನೋಡಿದ್ದೇನೆ. ಸರ್ಕಾರ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಮತ್ಯಾವ ಹೆಣ್ಣು ಮಕ್ಕಳಿಗೆ ಆಗಬಾರದು. ನನ್ನ ಮಗಳು ಮುಗ್ಧೆ. ಯಾರೊಂದಿಗೂ ಜಗಳ ಆಡುವ ಸ್ವಭಾವದವಳಲ್ಲ. ಅವಳು ಪ್ರತಿಭಾವಂತೆ ಎಂದು ತಂದೆ ನಿರಂಜನ್ ಹಿರೇಮಠ್ ಹೇಳಿದ್ದರು.


Click it and Unblock the Notifications











