''ದರ್ಶನ್ ಸರ್ಗೂ ಒಬ್ಬ ಮಗ ಇದಾರೆ, ಅವರಿಗೂ ಒಂದು ಕುಟುಂಬ ಇದೆ''- ಧ್ರುವ ಸರ್ಜಾ..!
ದರ್ಶನ್ ಮತ್ತು ಧ್ರುವ ಸರ್ಜಾ.. ಕನ್ನಡ ಚಿತ್ರರಂಗದ ಎರಡು ಕಣ್ಣು. ಆದರೆ.. ಈ ಜೋಡಿಯ ಮೇಲೆ ಅದ್ಯಾವ ಮಸಣಿ ಕಣ್ಣು ಬಿತ್ತೋ.. ಒಬ್ಬರು ಉತ್ತರಕ್ಕೆ ಮತ್ತೊಬ್ಬರು ದಕ್ಷಿಣದತ್ತ ಮುಖ ಮಾಡಿದರು. ಇಬ್ಬರ ಮಧ್ಯೆ ಹುಳಿ ಹಿಂಡಿದ್ದು ಯಾರು, ಅನ್ನುವುದು ಇವತ್ತು ಕೂಡ ಅನೇಕರಿಗೆ ಕಾಡ್ತಿರುವ ಯಕ್ಷ ಪ್ರಶ್ನೆ. ಹೀಗಿರುವಾಗ ಧ್ರುವ ಸರ್ಜಾ ಇದೇ ಮೊದಲ ಬಾರಿ ಕಂಬಿ ಹಿಂದೆ ಇರುವ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಹೌದು. ಅಸಲಿಗೆ .. ದರ್ಶನ್ ಜೈಲುಪಾಲಾದ ನಂತರ, ಅನೇಕರಲ್ಲಿ ಧ್ರುವ ಸರ್ಜಾ ಅವರ ಅನಿಸಿಕೆ- ಅಭಿಪ್ರಾಯ ತಿಳಿದುಕೊಳ್ಳುವ ಕುತೂಹಲ ಇತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಧ್ರುವ ಎದುರಾದಾಗೆಲ್ಲ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಕೂಡ ಮಾಡಲಾಗಿತ್ತು. ಆದರೆ, ಮೊನ್ನೆವರೆಗೆ ದರ್ಶನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಳಿಯೂ ಕೇಳಿಸದಂತೆ ಹೋಗುತ್ತಿದ್ದ ಧ್ರುವ ಸರ್ಜಾ ಇವತ್ತು ದರ್ಶನ್ ಅವರ ಬಗ್ಗೆ ಮೌನ ಮುರಿದಿದ್ದಾರೆ. ಆಳಿಗೊಂದು ಕಲ್ಲು ಎಂಬಂತೆ ನಾವು ಕಲ್ಲು ಹೊಡೆಯಬಾರದು ಎಂದು ಹೇಳಿದ್ದಾರೆ.

ಟಿವಿ9 ಕನ್ನಡ ಜೊತೆ ಮಾತನಾಡಿರುವ ಧ್ರುವ ಸರ್ಜಾ, ಯಾರೋ ಒಬ್ಬರು ನೋವಲ್ಲಿದ್ದಾರೆ. ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ ಎಂದಿರುವ ಧ್ರುವ ಸರ್ಜಾ, ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ.. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ ಎಂದಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ.. ನಾವು ಏನೇನೋ ಮಾತನಾಡುವುದು ಬೇಡ ಅಂದಿದ್ದಾರೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು ಎಂದು ಕೂಡ ಹೇಳಿದ್ದಾರೆ ಧ್ರುವ ಸರ್ಜಾ.
ಉಳಿದಂತೆ ಧ್ರುವ ಮತ್ತು ದರ್ಶನ್ ಮಧ್ಯೆದ ಮನಸ್ತಾಪದ ಕಥೆ ನಿಮಗೆ ಗೊತ್ತೇ ಇರಬೇಕು. ಆದರೂ ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಕಾವೇರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದೇ ವೇದಿಕೆಯನ್ನೇರಿದ್ದ ಸಮಯದಲ್ಲಿ ದರ್ಶನ್ ಮುಖವನ್ನ ಧ್ರುವ ಒಮ್ಮೆಯೂ ನೋಡಿರಲಿಲ್ಲ. ದರ್ಶನ್ ಬಂದಾಗ ಎಲ್ಲರೂ ಎದ್ದು ನಿಂತರೂ ಧ್ರುವ ಮಾತ್ರ ಕುರ್ಚಿಯಿಂದ ಕದಲಿರಲಿಲ್ಲ.ಈ ಕುರಿತು ಒಂದು ವಾರದ ನಂತರ ಪ್ರಶ್ನೆ ಮಾಡಿದಾಗ ಉತ್ತರಿಸಿದ್ದ ಧ್ರುವ, ದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲೂ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದಿದ್ದರು. ದರ್ಶನ್ ಕಥೆ ಗೊತ್ತಿಲ್ಲ. ಧ್ರುವ ಆಡಿದ್ದ ಈ ಮಾತು ದರ್ಶನ್ ಅಭಿಮಾನಿಗಳನ್ನ ಕೆರಳಿಸಿತ್ತು. ಅಲ್ಲಿಂದ ಎರಡು ಬಣದ ನಡುವೆ ಸಮರ ಶುರುವಾಗಿತ್ತು.

ಒಟ್ನಲ್ಲಿ ಸದ್ಯಕ್ಕೆ ಧ್ರುವ ಸರ್ಜಾ ಜೈಲು ಪಾಲಾಗಿರುವ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರ ಈ ಮಾತುಗಳನ್ನು ದರ್ಶನ್ ಅಭಿಮಾನಿಗಳು ಹೇಗೆ ಅರ್ಥೈಸಿಕೊಳ್ಳುತ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











