ಡಿಬಾಸ್ ಹೊರಗಡೆ ಬರೋವರ್ಗು ಬೇರೆ ಸಿನ್ಮಾ ನೋಡಲ್ಲ , ದರ್ಶನ್ ಫ್ಯಾನ್ಸ್ ಟ್ರೆಂಡ್ ಬಗ್ಗೆ ಧ್ರುವ ಪ್ರತಿಕ್ರಿಯೆ
ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ದೊಡ್ಡ ಸಿನಿಮಾಗಳು ಬರದೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಬರ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ 'ಭೀಮ', 'ಮಾರ್ಟಿನ್', 'ಮ್ಯಾಕ್ಸ್', 'ಯುಐ', 'ಭೈರತಿ ರಣಗಲ್', 'ಕೆಡಿ' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ.
ಸ್ಯಾಂಡಲ್ವುಡ್ನಲ್ಲಿ ಈಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೊಡ್ಡದಾಗಿ ಸದ್ದು ಮಾಡ್ತಿದೆ. ಕಾರಣ ಈ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿರುವುದು. ಕಳೆದೊಂದು ತಿಂಗಳಿಂದ ದರ್ಶನ್ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರದ ಬಗ್ಗೆ ಪದೇ ಪದೇ ಚರ್ಚೆ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಜನ ತಾರೆಯರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೆಲ ತಾರೆಯರು ದರ್ಶನ್ ಬೆಂಬಲಿಸಿದರೆ ಹಲವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ. ಅಭಿಮಾನಿಗಳು ಸಹ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ನಮ್ ಬಾಸ್ ಯಾವುದೇ ತಪ್ಪು ಮಾಡಿಲ್ಲ, ಆದಷ್ಟು ಬೇಗ ಈ ಸಂಕಷ್ಟದಿಂದ ಹೊರ ಬರುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ. ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನಮ್ ಬಾಸ್ ಹೊರಗಡೆ ಬರುವರೆಗೂ ಬೇರೆ ಸಿನಿಮಾಗಳನ್ನು ನೋಡಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ದರ್ಶನ್ ಅಭಿಮಾನಿಗಳಲ್ಲಿ ಇತ್ತೀಚೆಗೆ 'ಹೆಜ್ಜಾರು' ಚಿತ್ರದ ನಿರ್ದೇಶಕ ಹರ್ಷಪ್ರಿಯ ವಿಶೇಷ ಮನವಿ ಮಾಡಿದ್ದರು. ಇಂತಾದೊಂದು ನಿರ್ಧಾರದಿಂದ ಹೊರಬನ್ನಿ. ದಯವಿಟ್ಟು ಎಲ್ಲಾ ಸಿನಿಮಾಗಳನ್ನು ನೋಡಿ ಹರಸಿ ಎಂದು ಕೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳ ಟ್ರೆಂಡ್ ಬಗ್ಗೆ ನಟ ಧ್ರುವ ಸರ್ಜಾಗೆ ಪ್ರಶ್ನೆ ಎದುರಾಗಿತ್ತು. ಆಕ್ಷನ್ ಪ್ರಿನ್ಸ್ ಪಬ್ಲಿಕ್ ಟಿವಿ ಜೊತೆ ಮಾತನಾಡುವಾಗ ನಟ ದರ್ಶನ್ ವಿಚಾರದ ಬಗ್ಗೆ ಪ್ರಶ್ನೆ ಎದುರಾಗಿದೆ. ಕೂಡಲೇ ನಕ್ಕು ಧ್ರುವ ಸರ್ಜಾ, ಜೈ ಆಂಜನೇಯ ಎಂದು ಹೊರಟುಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿರುವ ಧ್ರುವ "ಈಗ ಪ್ರಕರಣ ಕೋರ್ಟ್ನಲ್ಲಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ರಾಜ ಕೂಡ ಕಾನೂನಿನ ಕೆಳಗೆ ಬರುತ್ತಾನೆ. ಸೋ ನೋಡೋಣ" ಎಂದಿದ್ದಾರೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಪ್ರಮೋಷನ್ ಶುರು ಮಾಡುವ ಕೆಲಸಗಳು ಶುರುವಾಗಿದೆ.
ಅಕ್ಟೋಬರ್ 11ಕ್ಕೆ 'ಮಾರ್ಟಿನ್' ಸಿನಿಮಾ ತೆರೆಗೆ ಬರಲಿದೆ. ಉದಯ್ ಕೆ. ಮೆಹ್ತಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅರ್ಜುನ್ ಸರ್ಜಾ ಕಥೆ ಬರೆದಿದ್ದು ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಮುಂದೆ ಸಾಂಗ್, ಟ್ರೈಲರ್ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಪೋಲ್ ನಡೆಸಿತ್ತು. ಇದರಲ್ಲಿ ಸಾಕಷ್ಟು ಜನ ಟ್ರೈಲರ್ ರಿಲೀಸ್ ಮಾಡಿ ಎಂದಿದ್ದಾರೆ. ಜುಲೈ 28ಕ್ಕೆ ಟ್ರೈಲರ್ ಬಿಡುಗಡೆ ಎನ್ನುವ ಚರ್ಚೆ ಶುರುವಾಗಿದೆ.
ಡಿಸೆಂಬರ್ನಲ್ಲಿ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ತೆರೆಗೆ ಬರಲಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. 'ಕೆಡಿ' ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.


Click it and Unblock the Notifications











