ಅವರೆಲ್ಲರಿಗೂ ಕೆಲಸ ಕೊಟ್ಟಿದ್ದೀನಿ ಅನ್ನುವುದೇ ನನಗೆ ಖುಷಿ- ಧ್ರುವ ಸರ್ಜಾ ಹೀಗೆ ಹೇಳಿದ್ದು ಯಾರಿಗೆ...?
ಸಾಹಸಗಾಥೆಯನ್ನು ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ಬಯಸುವವರಿಗೆಂದೇ ನಿರೂಪಿಸಲಾದ ಚಿತ್ರ ಮಾರ್ಟಿನ್. ಯಾವ್ಯಾವುದೋ ದೇಶದ ಆಕ್ಷನ್ ಚಿತ್ರಗಳನ್ನು ನೋಡಿ ರೋಮಾಂಚನಗೊಳ್ಳುವ ಪ್ರೇಕ್ಷಕರಿಗೆ ಆಯುಧ ಪೂಜೆಯ ಸಂದರ್ಭದಲ್ಲಿ ಹೇಳಿ ಮಾಡಿಸಿದ ಚಿತ್ರ ಇದು.
ಆದರೆ, ದುರ್ದೈವ.. ಚಿತ್ರ ಬಿಡುಗಡೆಯಾದ ಮರು ಕ್ಷಣದಿಂದನೇ ಮಾರ್ಟಿನ್ ನಮ್ಮ ಕನ್ನಡದ ಚಿತ್ರ ಎನ್ನುವುದನ್ನು ಮರೆತು ಒಂದು ಬಣ ಧ್ರುವ ಸರ್ಜಾ ವಿರುದ್ಧ ಕೆಂಡ ಕಾರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮಾರ್ಟಿನ್ ಚಿತ್ರವನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿದೆ. ಹಾಗಂಥ.. ಇದೆಲ್ಲದರಿಂದ ಚಿತ್ರತಂಡ ತಲೆ ಕೆಡಿಸಿಕೊಂಡು ಕುಂತಿಲ್ಲ. ಯಾಕೆಂದರೆ, ಚಿತ್ರತಂಡದ ಪ್ರಕಾರ ಚಿತ್ರ ಗೆಲುವಿನತ್ತ ಸಾಗಿದೆ. ಇದಕ್ಕೆ ಪೂರಕವಾಗಿ ಚಿತ್ರತಂಡ ಹೆಮ್ಮೆಯಿಂದ ಚಿತ್ರದ ಮೊದಲೆರಡು ದಿನದ ಗಳಿಕೆಯನ್ನು ಕೂಡ ಸಾರ್ವಜನಿಕವಾಗಿ ಹಂಚಿಕೊಂಡಿದೆ. ಕರುನಾಡಿನೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಮೊದಲ ದಿನ ಕರ್ನಾಟಕದಲ್ಲಿ ಸಿನಿಮಾ 9.1 ಕೋಟಿ ರೂ ಗಳಿಸಿದ್ದರೆ ಎರಡನೇ ದಿನ 13.4 ಕೋಟಿ ರೂಪಾಯಿಯನ್ನು ಕೊಳ್ಳೆ ಹೊಡೆದಿದೆ ಎಂದು ಎದೆ ತಟ್ಟಿಕೊಂಡು ಹೇಳಿದೆ. ಇದರ ನಡುವೆ ಧ್ರುವಾ ಸರ್ಜಾ ಕಾಲೆಳೆಯುವರು ಕಾಲ ಕೆಳಗೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಹೌದು, ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಸ್ವಾಗತದ ನಂತರ ರಿಪಬ್ಲಿಕ್ ಕನ್ನಡಗೆ ಸಂದರ್ಶನ ನೀಡಿರುವ ಧ್ರುವ ಸರ್ಜಾ ವ್ಯಕ್ತವಾಗುತ್ತಿರುವ ನಕರಾತ್ಮಕ ಪ್ರತಿಕ್ರಿಯೆಯ ಕುರಿತು ಮೌನ ಮುರಿದಿದ್ದಾರೆ. ಹೊಟೇಲ್ನಲ್ಲಿ ಒಬ್ಬರಿಗೆ ಇಷ್ಟವಾದ ತಿಂಡಿ ಮತ್ತೊಬ್ಬರಿಗೆ ಇಷ್ಟವಾಗ್ಲೇ ಬೇಕು ಎಂದೇನಿಲ್ಲ. ಕೆಲವರಿಗೆ ಇಷ್ಟವಾಗುತ್ತೆ, ಕೆಲವರಿಗೆ ಇಷ್ಟವಾಗಲ್ಲ ಎಂದು ಹೇಳಿದ್ದಾರೆ. ತುಂಬಾ ಅಂದರೆ ತುಂಬಾ ಇಷ್ಟವಾದರೆ ಕೆಲವರು ತಡೆಯಲ್ಲ, ಹೇಗಾದರೂ ಮಾಡಿ ಇದನ್ನು ಹಾಳು ಮಾಡಬೇಕೆಂದು ಆಲೋಚನೆ ಮಾಡುತ್ತಾರೆ, ರಾತ್ರಿಯಿಡಿ ತಲೆಕೆಡಿಸಿಕೊಂಡು ಮೆಸೇಜ್ ಮಾಡುತ್ತಾರೆ ಎಂದು ಹೇಳಿದ್ದಾರೆ. ನನಗೇನು ಖುಷಿಯೆಂದರೆ ಅವರಿಗೆಲ್ಲ ನಾನು ಕೆಲಸ ಕೊಟ್ಟಿದ್ದೀನಿ ಎನ್ನುವುದಷ್ಟೇ ಎಂದು ನಕ್ಕಿದ್ದಾರೆ.
ಇನ್ನೂ ಮಾರ್ಟಿನ್ ಚಿತ್ರದ ಅಪಪ್ರಚಾರವನ್ನು ನಮ್ಮವರೇ ಕೆಲವರು ಮಾಡುತ್ತಿರುವ ಈ ಸಮಯದಲ್ಲಿ, ಧ್ರುವ ಸರ್ಜಾ ಅವರ ಅಭಿನಯಕ್ಕೆ, ಅವರ ಶ್ರದ್ಧೆ ಮತ್ತು ಶ್ರಮಕ್ಕೆ ಉತ್ತರ ಭಾರತದಲ್ಲಿ ಅನೇಕರು ಅಭಿಮಾನಿಗಳಾಗಿದ್ಧಾರೆ. ನಿಮಗೆ ಧ್ರುವ ಸರ್ಜಾ ಬೇಡವಾದರೆ ನಮ್ಮಲ್ಲಿ ಅವರನ್ನು ಕಳುಹಿಸಕೊಡಿ ನಮಗೆ ಧ್ರುವ ಅವರಂತಹ ಮಾಸ್ ಹೀರೋ ಬೇಕು ಎನ್ನುತ್ತಿದ್ದಾರೆ. ಮಾರ್ಟಿನ್ ನಮಗೆ ತುಂಬಾ ಇಷ್ಟವಾಯ್ತು, ನಿಮಗೆ ಇಷ್ಟವಾಗದೇ ಇದ್ದರೆ ಪರವಾಗಿಲ್ಲ ಆದರೆ ಚಿತ್ರದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಮನವಿಯನ್ನೂ ಕೂಡ ಹಿಂದಿ ಯೂಟ್ಯೂಬರ್ನವರು ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೂ ರಿಪಬ್ಲಿಕ್ ಟಿವಿ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆಯನ್ನು ನೀಡಿರುವ ಧ್ರುವ ಸರ್ಜಾ ಅಭಿಮಾನಕ್ಕೆ ಋಣಿ ಆದರೆ ಕರ್ನಾಟಕದಲ್ಲಿ ನನ್ನನ್ನು ತುಂಬಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಳಿದಂತೆ ಸದ್ಯಕ್ಕೆ ನೆಗೆಟಿವ್ ಕಾಮೆಂಟ್ಸ್ ನಡುವೆಯೂ ಮಾರ್ಟಿನ್ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ನಿರ್ದೇಶಕ ಎ.ಪಿ.ಅರ್ಜುನ್ ನಿರ್ಮಾಪಕ ಉದಯ್ ಮೆಹ್ತಾ ಅವರ ಮೊಗದಲ್ಲಿನ ಮಂದಹಾಸವನ್ನು ಚಿತ್ರದ ಗಳಿಕೆ ಹೆಚ್ಚಿಸಿದೆ. ಮೊದಲೆರಡು ದಿನ ಕ್ರಮವಾಗಿ ಒಂಬತ್ತು ಮತ್ತು ಹದಿಮೂರು ಕೋಟಿಯನ್ನು ಗಳಿಸಿದ ಚಿತ್ರ ಇಂದು ಇನ್ನೂ ಹೆಚ್ಚಿನ ಹಣವನ್ನು ಗಳಿಸುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಶುಕ್ರವಾರ ಮತ್ತು ಶನಿವಾರಕ್ಕೆ ಹೋಲಿಸಿದರೆ ಇಂದು ಚಿತ್ರ ನೋಡಲು ಬಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ ಎನ್ನುವ ಮಾತು ಚಿತ್ರಮಂದಿರದ ಆವರಣದಲ್ಲಿ ಕೇಳಿ ಬರುತ್ತಿದೆ. ಸದ್ಯ ಅಪಪ್ರಚಾರದ ವಿರುದ್ಧ ಹೋರಾಡುತ್ತಿರುವ ಈ ಮಾರ್ಟಿನ್ ಒಟ್ಟಾರೆಯಾಗಿ ಚಿತ್ರಮಂದಿರದಲ್ಲಿ ಎಷ್ಟು ಹಣ ಗಳಿಸಬಹುದು ಎನ್ನುವುದು ಸದ್ಯದ ಕುತೂಹಲ.


Click it and Unblock the Notifications











