"ಪಾರ್ವತಿ.. ನಾನ್ ಎಂಥ ಹುಚ್ಚ್ ಸು*ಮಗ ಅದೀನಿ ಅಂದ್ರೆ.."; ಜಬರ್ದಸ್ತ್ ಡೈಲಾಗ್ ಹೊಡೆದ ಧ್ರುವ
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಜೋಡಿಯ 'KD' ಸಿನಿಮಾ ರಿಲೀಸ್ ತಡವಾಗುತ್ತಿದೆ. ಮತ್ತೊಂದು ಕಡೆ ಧ್ರುವ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಕ್ರಿಮಿನಲ್' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ರಾಜ್ ಗುರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ.
ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ನಡೆದ ನೈಜ ಪ್ರೇಮ ಕಥೆಯನ್ನು ಆಧಾರಿಸಿ 'ಕ್ರಿಮಿನಲ್' ಸಿನಿಮಾ ಕಟ್ಟಿಕೊಡಲಾಗ್ತಿದೆ. ಮನಿಶ್ ಶಾ ಎಂಬುವವರು ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೋರಿ ಶಿವ ಎಂಬ ಖಡಕ್ ಪೈಲ್ವಾನ್ ಪಾತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಲಿದ್ದಾರೆ. ಹಂಪಿ ಉತ್ಸವದಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ ಚಿತ್ರದ ಜಬರ್ದಸ್ತ್ ಡೈಲಾಗ್ ಹೊಡೆದು ಧ್ರುವ ನೆರೆದಿದ್ದ ಜನರನ್ನು ರಂಜಿಸಿದ್ದಾರೆ.

ಚಿತ್ರದಲ್ಲಿ ಪಾರ್ವತಿ ಎಂಬ ಪಾತ್ರದಲ್ಲಿ ನಾಯಕಿ ರಚಿತಾ ರಾಮ್ ಮಿಂಚಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಕನ್ನಡ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಶಿವ ಹಾಗೂ ಪಾರ್ವತಿ ನಡುವಿನ ಸಂಭಾಷಣೆಯನ್ನು ಧ್ರುವ ಸರ್ಜಾ ಹಂಪಿ ಉತ್ಸವದಲ್ಲಿ ರಿವೀಲ್ ಮಾಡಿದ್ದಾರೆ. ಆಕ್ಷನ್ ಪ್ರಿನ್ಸ್ ಖಡಕ್ ವಾಯ್ಸ್ ಕೇಳಿ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.
"ಪಾರ್ವತಿ.. ನಾನ್ ಎಂಥ ಹುಚ್ಚ್ ಸು*ಮಗ ಅದೀನಿ ಅಂದ್ರೆ, ನೀನ್ ನನ್ ಮೇಲೆ ಎಷ್ಟಾದ್ರು ಹಗೆ ಸಾಧ್ಸು. ಆದ್ರೆ ನಾನ್ ಮಾತ್ರ ನಿನ್ ಮೇಲೆ ಜೀವನೇ ಇಟ್ಟೀನಿ ಕಣೆ.. ಯಾವತ್ತಿದ್ರು ನಿನ್ ಕುತ್ತಿಗೆಗೆ ತಾಳಿ ಕಟ್ಟೋ ಗಂಡು ನಾನಾ, ನನ್ನ ಹೆಂಡ್ರು ನೀನಾ. ಗೊತ್ತಾತ್ತ.. ಗೊತ್ತಾತ್ತೆನೇ. ಈ ಪ್ರೀತಿ ಏನಾದ್ರೂ ದೋಖಾ ಆತೋ ಆ ಯಲ್ಲವ್ವನ ಮೇಲಾಣಿ ನಿನ್ನ ಕೊಂದಾಕ್ತೀನಿ.. ಅವನ್ನ**ನ" ಎಂದು ಉತ್ತರ ಕರ್ನಾಟಕ ಶೈಲಿಯಲ್ಲೇ ಡೈಲಾಗ್ ಹೇಳಿ ಗಮನ ಸೆಳೆದಿದ್ದಾರೆ.
ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಕ್ರಿಮಿನಲ್' ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಚಂದನ್ ಶೆಟ್ಟಿ ಸಂಗೀತ, ವೈದಿ ಛಾಯಾಗ್ರಹಣ, ರವಿವರ್ಮಾ ಹಾಗೂ ವಿಕ್ರಂ ಮೋರ್ ಸಾಹಸ ಸಂಯೋಜನೆ ಕ್ರಿಮಿನಲ್ ಚಿತ್ರಕ್ಕಿದೆ. ಒಂದೊಳ್ಳೆ ಬ್ರೇಕ್ಗಾಗಿ ಧ್ರುವ ಸರ್ಜಾ ಎದುರು ನೋಡ್ತಿದ್ದಾರೆ. 'ಭರ್ಜರಿ' ಬಳಿಕ ಅವರ ಯಾವುದೇ ಸಿನಿಮಾ ದೊಡ್ಡದಾಗಿ ಗೆದ್ದಿಲ್ಲ.
'ಪೊಗರು' ಹಾಗೂ 'ಮಾರ್ಟಿನ್' ಸಿನಿಮಾಗಳು ಕೈಹಿಡಿಯಲೇ ಇಲ್ಲ. 'KD' ಸಿನಿಮಾ ರಿಲೀಸ್ ತಡವಾಗುತ್ತಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಏಪ್ರಿಲ್ 30ರಂದು ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಧ್ರುವ ನಟನೆಯ ಪ್ರತಿ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆಗೆ ಮೂರ್ನಾಲ್ಕು ವರ್ಷ ಸಮಯ ತೆಗೆದುಕೊಳ್ತಿದೆ. ಹಾಗಾಗಿ 'ಕ್ರಿಮಿನಲ್' ಚಿತ್ರವನ್ನು ಬಹಳ ಬೇಗ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. 'ಭರ್ಜರಿ' ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿ ರಚ್ಚು ಮಿಂಚಿದ್ದರು. ಮತ್ತೆ ಅವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.
'ಕ್ರಿಮಿನಲ್' ಚಿತ್ರದಲ್ಲಿ ಪಕ್ಕಾ ಹಳ್ಳಿಹೈದನಾಗಿ ಧ್ರುವ ಸರ್ಜಾ ಮಿಂಚಿದ್ದಾರೆ. ಇತ್ತೀಚೆಗೆ ತೆರೆಗೆ ಬಂದಿರುವ 'ಸೀತಾ ಪಯಣ' ಚಿತ್ರದಲ್ಲಿ ಕೂಡ ಆಕ್ಷನ್ ಪ್ರಿನ್ಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಿದ್ದಾರೆ. ಐಶ್ವರ್ಯಾ ಅರ್ಜುನ್ ಜೋಡಿಯಾಗಿ ಉಪ್ಪಿ ಅಣ್ಣನ ಮಗ ನಿರಂಜನ್ ನಟಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಕೂಡ ಸಿನಿಮಾ ತೆರೆಕಂಡಿದೆ.


Click it and Unblock the Notifications











