ತಾಯ್ನಾಡು, ಪ್ರೀತಿ ಮತ್ತು ಅವನು; ಧ್ರುವ ಸರ್ಜಾ 'ಮಾರ್ಟಿನ್' ಸ್ಟೋರಿಲೈನ್ ಅದೇನಾ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ತೆರಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ.
'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಹೆಚ್ಚು ಕಮ್ಮಿ ಇನ್ನು 3 ತಿಂಗಳು ಕಾಯಬೇಕು. ನಿಧಾನವಾಗಿ ಸಿನಿಮಾ ಪ್ರಮೋಷನ್ ಶುರು ಮಾಡಲು ಚಿತ್ರತಂಡ ಮುಂದಾಗಿದೆ. ಜುಲೈ 29ಕ್ಕೆ ಸಿನಿಮಾ ಟೀಸರ್ ಬಿಡುಗಡೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆಗೆ ಚಿತ್ರತಂಡ ಮುಂದಾಗಿದೆ. ವರ್ಷದ ಹಿಂದೆ 'ಮಾರ್ಟಿನ್' ಸಿನಿಮಾ ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಮಾರ್ಟಿನ್' ಸಿನಿಮಾ ತೆರೆಗೆ ಬರಲಿದೆ. ವೀರೇಶ್ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಸದ್ದು ಮಾಡಿತ್ತು. ಪರಭಾಷೆಯ ಮಾಧ್ಯಮದವರನ್ನು ಬೆಂಗಳೂರಿಗೆ ಆಹ್ವಾನಿಸಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಆದರೆ ಆ ಬಳಿಕ ಸಿನಿಮಾ ಚಿತ್ರೀಕರಣ ತಡವಾಗುತ್ತಾ ಬಂದಿತ್ತು. 2 ತಿಂಗಳ ಹಿಂದೆಯಷ್ಟೆ ಚಿತ್ರೀಕರಣ ಮುಗಿಸಲಾಗಿತ್ತು. ಬರೋಬ್ಬರಿ 240 ದಿನಗಳ ಕಾಲ ಶೂಟಿಂಗ್ ಮಾಡಿರೋದು ವಿಶೇಷ.
ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಇದೆಲ್ಲದರ ನಡುವೆ ಮುಂಬೈನಲ್ಲಿ 'ಮಾರ್ಟಿನ್' ಚಿತ್ರದ ಅದ್ಧೂರಿ ಈವೆಂಟ್ ಮಾಡುವ ಪ್ರಯತ್ನ ನಡೀತಿದೆ. ಅಲ್ಲೇ ಟೀಸರ್ ರಿಲೀಸ್ ಎನ್ನಲಾಗುತ್ತಿದೆ. ಬಳಿಕ ಒಂದೊಂದೇ ಹಾಡುಗಳನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಶುರುವಾಗಲಿದೆ.
'ಮಾರ್ಟಿನ್' ಸಿನಿಮಾ ಕಥೆಯೇನು? ಎನ್ನುವ ಕುತೂಹಲ ಕೆಲವರಲ್ಲಿದೆ. ಅಂದಹಾಗೆ ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಇನ್ನು ಟೀಸರ್ ನೋಡಿದ್ದಾಗ ಕಥೆಯ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಪಾಕಿಸ್ತಾನದ ಜೈಲಿನಿಂದ 'ಮಾರ್ಟಿನ್' ಸಿನಿಮಾ ಟೀಸರ್ ಆರಂಭವಾಗುತ್ತದೆ. ನಾಯಕ 'ಮಾರ್ಟಿನ್' ಪಾಕಿಸ್ತಾನ ಜೈಲಿಗೆ ಹೋಗಿದ್ದೇಕೆ? ಪಾಕಿಸ್ತಾನಕ್ಕೂ ಈ ಕಥೆಗೂ ಏನು ಸಂಬಂಧ? ಅನ್ನೋ ಪ್ರಶ್ನೆ ಮೂಡಿತ್ತು. ಅಕಟೋಬರ್ 11ಕ್ಕೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಈಗಾಗಲೇ ಬುಕ್ಮೈ ಶೋನಲ್ಲಿ 'ಮಾರ್ಟಿನ್' ಸಿನಿಮಾ ಪೇಜ್ ಕ್ರಿಯೇಟ್ ಆಗಿದೆ. 2ಲಕ್ಷಕ್ಕೂ ಅಧಿಕ ಇನ್ಟ್ರೆಸ್ಟ್ ಬಟನ್ ಒತ್ತಿದ್ದಾರೆ. ಇನ್ನು ಅದೇ ಪೇಜ್ನಲ್ಲಿ ಚಿತ್ರದಲ್ಲಿ ಒನ್ಲೈನ್ ಸ್ಟೋರಿ ಕೂಡ ಇದೆ. ಇದನ್ನು ನೋಡಿ ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. 'ಮಾರ್ಟಿನ್' ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಆಕ್ಷನ್ ಥ್ರಿಲ್ಲರ್ ಸಿನಿಮಾ.
ಭಾರತವನ್ನು ನಾಶಮಾಡಲು ಹೊಂಚು ಹಾಕುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ನಾಯಕನ ನಾಟಕೀಯ ಪ್ರಯಾಣವು ಅವನನ್ನು ದೇಶದ ಉದ್ದಗಲಕ್ಕೆ ಕರೆದೊಯ್ಯುತ್ತದೆ. ಮತ್ತೊಂದು ಕಡೆ ಆತ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಮುಂದೆ 'ಮಾರ್ಟಿನ್' ತನ್ನನ್ನು ತಾನು ಕಂಡುಕೊಳ್ಳುವುದರ ಜೊತೆಗೆ ಪ್ರೀತಿಯನ್ನು ಪಡೆದುಕೊಳ್ಳುತ್ತಾನೆ. ತನ್ನ ತಾಯ್ನಾಡಿಗಾಗಿ ಹೋರಾಡುತ್ತಾನೆ. ಮೂರನ್ನು ಹೇಗೆ ನಿಭಾಯಿಸುತ್ತಾನೆ? ಎನ್ನುವುದೇ ಸಿನಿಮಾ ಕಥೆ ಎಂದು ತಿಳಿಸಲಾಗಿದೆ.
ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸುಕೃತಾ ವಾಗ್ಲೆ, ಚಿಕ್ಕಣ್ಣ, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನವಾಬ್ ಶಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಮಣಿಶರ್ಮ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ.


Click it and Unblock the Notifications











