'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿತ್ತು. ಉದಯ್ ಕೆ. ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಚುನಾವಣೆ, ಐಪಿಎಲ್ ಭರಾಟೆ ಬಳಿಕ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ತೆರೆ ಕಾಣಲಿದೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದು ಈಗಾಗಲೇ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಿರ್ಮಾಪಕ ಉದಯ್ ಕೆ ಮೆಹ್ತಾ ಹಾಗೂ ನಿರ್ದೇಶಕ ಎ. ಪಿ ಅರ್ಜುನ್ ನಡುವೆ ಸಂಭಾವನೆ ವಿಚಾರಕ್ಕೆ ಕಿರಿಕ್ ಆಗಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಈ ವಿಚಾರ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ಉದಯ್ ಕೆ ಮೆಹ್ತಾ ಜೊತೆ ಸೇರಿ ನಿರ್ದೇಶಕ ಎ. ಪಿ ಅರ್ಜುನ್ ವಿಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ. "ನಾನು ಹಾಗೂ ನಿರ್ಮಾಪಕರು ಆರಾಮಾಗಿ ಇದ್ದೀವಿ. ಚೆನ್ನಾಗಿದ್ದೀವಿ. ನಮ್ಮ ನಡುವೆ ಯಾವುದೇ ರೀತಿಯ ಕಿತ್ತಾಟ ಇಲ್ಲ. ಇದೆಲ್ಲಾ ಬರೀ ರೂಮರ್ಸ್. ದಯವಿಟ್ಟು ಇದಕ್ಕೆ ಯಾರು ಕಿವಿಗೊಡಬೇಡಿ" ಎಂದು ನಿರ್ದೇಶಕ ಎ. ಪಿ ಅರ್ಜುನ್ ಹೇಳಿದ್ದಾರೆ.
"ಯಾರೂ ತಪ್ಪು ಮಾಹಿತಿ ಹಬ್ಬಿಸಬೇಡಿ. ಇದು ನಮ್ಮ ಮನವಿ. ನಾವಿಬ್ಬರು ಚೆನ್ನಾಗಿದ್ದೇವೆ. 'ಮಾರ್ಟಿನ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆ. ಈಗಷ್ಟೆ ಇಬ್ಬರೂ ಡಬ್ಬಿಂಗ್ ಮುಗಿಸಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದು ನಿರ್ಮಾಪಕ ಉದಯ್ ಕೆ. ಮೆಹ್ತಾ ವಿಡಿಯೋದಲ್ಲಿ ತಿಳಿಸಿದ್ದಾರೆ.
240 ದಿನಗಳ ಕಾಲ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ನಡೆದಿದೆ. 35ರಿಂದ 40 ಕೋಟಿ ರೂಪಾಯಿ ಬಜೆಟ್ನಲ್ಲಿ 'ಮಾರ್ಟಿನ್' ಸಿನಿಮಾ ಮಾಡಲು ಮುಂದಾಗಿತ್ತು ಚಿತ್ರತಂಡ. ಕೊನೆಗೆ ಅದು 100 ಕೋಟಿ ರೂ. ಗಡಿ ದಾಟಿದೆ ಎಂದು ಚಿತ್ರತಂಡವೇ ಇತ್ತೀಚೆಗೆ ಹೇಳಿತ್ತು. ಇನ್ನು ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ದೇಶ ವಿದೇಶಗಳಲ್ಲಿ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ನಡೆದಿದೆ.
ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಚಿಕ್ಕಣ್ಣ, ಸಾಧು ಕೋಕಿಲ, ಮಾಳವಿಕಾ ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣ 'ಮಾರ್ಟಿನ್' ಚಿತ್ರದಲ್ಲಿದೆ. ಮಣಿಶರ್ಮ ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ, ಕೆ. ಎಮ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.
'ಪೊಗರು' ಬಳಿಕ ಧ್ರುವ ಸರ್ಜಾ ನಟನೆಯ ಸಿನಿಮಾ 'ಮಾರ್ಟಿನ್'. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಯಿತು. ಎಲೆಕ್ಷನ್ ಹಿನ್ನೆಲೆ ಸಿನಿಮಾ ರಿಲೀಸ್ ಮತ್ತಷ್ಟು ಮುಂದೂಡುವಂತಾಯಿತು. ಜುಲೈ, ಆಗಸ್ಟ್ ವೇಳೆಗೆ ತೆರೆಮೇಲೆ 'ಮಾರ್ಟಿನ್' ಆರ್ಭಟ ಶುರುವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಟೀಸರ್ 4 ದಿನಕ್ಕೆ 70 ಮಿಲಿಯನ್ಗೂ ಅಧಿಕ ವೀವ್ಸ್ ಸಾಧಿಸಿ ಸೌಂಡ್ ಮಾಡಿತ್ತು.
ಬಹಳ ಅದ್ಧೂರಿಯಾಗಿ 'ಮಾರ್ಟಿನ್' ಸಿನಿಮಾ ಮೂಡಿ ಬಂದಿದೆ. ಫೆಬ್ರವರಿಯಲ್ಲಿ ಚಿತ್ರತಂಡ ಚಿತ್ರೀಕರಣಕ್ಕಾಗಿ ಶ್ರೀನಗರಕ್ಕೆ ತೆರಳಿತ್ತು. ಈ ವೇಳೆ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಚಿತ್ರತಂಡ ಹೊರಟಿತ್ತು. ಹವಾಮಾನ ವೈಪರೀತ್ಯದಿಂದಾಗಿ ರಾಡಾರ್ ಕಂಟ್ರೋಲ್ ತಪ್ಪಿದ್ದ ಕಾರಣ ವಿಮಾನದಲ್ಲಿದ್ದ ಎಲ್ಲರೂ ಕೆಲವೊತ್ತು ಆತಂಕಕ್ಕೀಡಾಕಿದ್ದರು. ಬಳಿಕ ದೇವರ ದಯೆಯಿಂದ ಸುರಕ್ಷಿತವಾಗಿ ಮರಳಿ ಬಂದಿದ್ದಾಗಿ ಚಿತ್ರತಂಡ ಹೇಳಿತ್ತು.
ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ 'ಮಾರ್ಟಿನ್' ಸಹ ಒಂದು. ಧ್ರುವ ಸರ್ಜಾ ಹೀರೊ ಆಗಿ ನಟಿಸಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಟ್ಟಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೇಗೆ ಸದ್ದು ಮಾಡುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











