ಬಾಲಿವುಡ್ ಬಳಿಕ ತಮಿಳು ಚಿತ್ರರಂಗಕ್ಕೆ 'ದಿಯಾ' ಪೃಥ್ವಿ ಅಂಬರ್ ಎಂಟ್ರಿ
'ದಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನ ಗೆದ್ದಿರುವ ನಟ ಪೃಥ್ವಿ ಅಂಬರ್ ಈಗ ಬಹುಭಾಷಾ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಒಂದೊಂದೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಪೃಥ್ವಿ ಇದೀಗ ತಮಿಳು ಸಿನಿಮಾರಂಗದ ಕಡೆ ಹೊರಟಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡಿರುವ ದಿಯಾ ಹೀರೋ ಬಿಡುಗಡೆಗೆ ಕಾಯುತ್ತಿದ್ದಾರೆ. ಆಗಲೇ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ದಿಯಾ ಸಿನಿಮಾದ ಆದಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪೃಥ್ವಿ ಸದ್ಯ ಸಾಲು ಸಾಲು ಕನ್ನಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕನ್ನಡದ ಜೊತೆಗೆ ಬೇರೆ ಭಾಷೆಯ ಸಿನಿಮಾಗಳೂ ಆಫರ್ ಬರುವುದು ಪೃಥ್ವಿಯ ಸಂತಸಕ್ಕೆ ಕಾರಣವಾಗಿದೆ.
ಸದ್ಯ ಪೃಥ್ವಿ ಅಂಬರ್ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದ ತಮಿಳು ಸಿನಿಮಾದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, 'ಮಜೈ ಪಿಡಿಕಧಾ ಮಣಿಧಾನ್' ಎಂದು ಶೀರ್ಷಿಕೆ ಇಡಲಾಗಿದೆ.

ಅಂದಹಾಗೆ ಈ ಸಿನಿಮಾದಲ್ಲಿ ನಟ ಧನಂಜಯ್ ಮತ್ತು ವಿಜಯ್ ಆಂಥೋನಿ ಕೂಡ ನಟಿಸಿದ್ದಾರೆ. ಈ ಮೂವರು ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದು ತಮಿಳಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ನಿರ್ದೇಶಕ ವಿಜಯ್ ಮಿಲ್ಟನ್ ಸದ್ಯ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಭೈರಾಗಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಧನಂಜಯ್ ಮತ್ತು ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.
ಈ ಸಿನಿಮಾದಿಂದ ನಿರ್ದೇಶ ಮಿಲ್ಟನ್ ಜೊತೆ ಉತ್ತಮ ಸಂಬಂಧ ಹೊಂದಿರುವ ಪೃಥ್ವಿ ಮತ್ತು ಧನಂಜಯ್ ಈಗ ಮುಂದಿನ ಸಿನಿಮಾದಲ್ಲೂ ಒಂದಾಗುತ್ತಿದ್ದಾರೆ. ತಮಿಳು ಸಿನಿಮಾ ಮುಂದಿನ ತಿಂಗಳು 12ರಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಭೈರಾಗಿ ಮತ್ತು ತಮಿಳು ಸಿನಿಮಾ ಎರಡು ಏಕಕಾಲಕ್ಕೆ ಚಿತ್ರೀಕರಣ ನಡೆಯಲಿದೆ.
ಪೃಥ್ವಿ ಅಂಬರ್ ಸದ್ಯ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೆ ಇನ್ನು ಎರಡು ಸಿನಿಮಾಗಳು ಪೃಥ್ವಿ ಕೈಯಲ್ಲಿವೆ.


Click it and Unblock the Notifications











