'ಅನಿಮಲ್' ಚಿತ್ರಕ್ಕೆ ರಾಘಣ್ಣನ ಆ ಸಿನಿಮಾ ಸ್ಫೂರ್ತಿ? ವೀಡಿಯೋ ವೈರಲ್
ಸ್ಫೂರ್ತಿ ಎನ್ನುವುದು ಯಾವುದೇ ರೀತಿಯಲ್ಲಿ ಆಗಿರಬಹುದು. ಚಿತ್ರರಂಗದಲ್ಲಿ ಒಂದು ಸಿನಿಮಾ ನೋಡಿ ಮತ್ತೊಂದು ಸಿನಿಮಾ ಮಾಡುವುದು ಸರ್ವೇ ಸಾಮಾನ್ಯ. ಒಂದ್ಕಾಲದಲ್ಲಿ ರೀಮೆಕ್ ಹಾವಳಿ ಜೋರಾಗಿತ್ತು. ಇವತ್ತಿಗೂ ದೇಶ ವಿದೇಶದ ಸಿನಿಮಾಗಳನ್ನು ನೋಡಿ ಕೆಲ ಸಿನಿಮಾಗಳನ್ನು ಕಾಪಿ ಮಾಡುವುದನ್ನು ನೋಡಬಹುದು.
ರೀಮೆಕ್ ಅಥವಾ ಯಾವುದೋ ಸಿನಿಮಾ ನೋಡಿ ಕಾಪಿ ಮಾಡುವುದು ಇಲ್ಲ ಸ್ಫೂರ್ತಿ ಪಡೆಯುವುದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. 10 ವರ್ಷಗಳ ಹಿಂದೆ ಇದು ಅಷ್ಟೇನು ಗೊತ್ತಾಗುತ್ತಿರಲಿಲ್ಲ. ಅದರಲ್ಲೂ ವಿದೇಶಿ ಸಿನಿಮಾಗಳನ್ನು ನೋಡಿ ಕಾಪಿ ಮಾಡಿದರೆ ಬಹುತೇಕರ ಗಮನಕ್ಕೆ ಬರುತ್ತಿರಲಿಲ್ಲ. ಎರಡೂ ಸಿನಿಮಾಗಳನ್ನು ನೋಡಿದವರಿಗೆ ಗೊತ್ತಾದರೂ ಹೆಚ್ಚು ಜನರಿಗೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದು ಡಿಜಿಟಲ್ ಯುಗ. ಎಲ್ಲವೂ ಬೆರಳಿನ ತುದಿಯಲ್ಲಿದೆ. ಇಂತದ್ದನ್ನೆಲ್ಲಾ ಬೇಗ ಗುರ್ತಿಸಿ ಬಟಾಬಯಲು ಮಾಡಿಬಿಡಬಹುದು.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಣ್ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಣ್ಬೀರ್ ಅಭಿನಯವನ್ನಂತೂ ಪ್ರೇಕ್ಷಕರು ಇನ್ನು ಮರೆತ್ತಿಲ್ಲ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ವಂಗಾ ಕಥೆಯನ್ನು ಕಟ್ಟಿಕೊಟ್ಟಿದ್ದರು. ಅದು ಪ್ರೇಕ್ಷಕರಿಗೆ ಇಷ್ಟವಾಗಿತ್ತು.
'ಅನಿಮಲ್' ಚಿತ್ರದ ಕೆಲ ಫ್ರೇಮ್ಗಳು ನಿಮಗೆ ಕನ್ನಡ ಸಿನಿಮಾವೊಂದನ್ನು ನೆನಪಿಸಬಹುದು. ಎಲ್ಲರಿಗೂ ಗೊತ್ತಾಗದಿದ್ದರೂ ಕೆಲವರ ಅರವಿಗೆ ಬರಬಹುದು. ಎರಡೂ ಸಿನಿಮಾಗಳಲ್ಲಿ ಸಾಮ್ಯತೆ ಎನ್ನಿಸುವ ಕೆಲ ಫ್ರೇಮ್ಗಳನ್ನು ಎಡಿಟ್ ಮಾಡಿ ವೀಡಿಯೋವನ್ನು AKV FX ಯೂಟ್ಯೂಬ್ ಚಾನಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ಅರೇ ಹೌದಲ್ವಾ? ಎಂದು ಅಚ್ಚರಿಗೊಂಡಿದ್ದಾರೆ.
ಅಂದಹಾಗೆ ಆ ಕನ್ನಡ ಸಿನಿಮಾ ಉಪೇಂದ್ರ ನಿರ್ದೇಶನದ 'ಸ್ವಸ್ತಿಕ್'. ನಿಮಗೆ ಗೊತ್ತಾ 'ಅನಿಮಲ್' ಚಿತ್ರದಲ್ಲಿ ನಾಯಕನ ತಂದೆ ಸ್ವಸ್ತಿಕ್ ಸ್ಟೀಲ್ ಕಂಪನಿ ಒಡೆಯನಾಗಿರುತ್ತಾನೆ. 'ಅನಿಮಲ್' ಚಿತ್ರದಲ್ಲಿ 'ಸ್ವಸ್ತಿಕ್' ಎನ್ನುವುದನ್ನು ಕೂಡ ಬಳಸಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಉಪೇಂದ್ರ ಸಿನಿಮಾಗಳ ಅಭಿಮಾನಿ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಇತ್ತೀಚೆಗೆ ಬಂದ 'ಯುಐ' ಸಿನಿಮಾ ನೋಡಲು ವಂಗಾ ಬಹಳ ಉತ್ಸುಕರಾಗಿದ್ದರು.

1998ರಲ್ಲಿ 'ಸ್ವಸ್ತಿಕ್' ಸಿನಿಮಾ ತೆರೆಗೆ ಬಂದಿತ್ತು. ರಾಘವೇಂದ್ರ ರಾಜ್ಕುಮಾರ್, ವಿಜಯಲಕ್ಷ್ಮಿ ಹಾಗೂ ಶ್ರೀನಾಥ್ ಈ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದರು. ರಾಘಣ್ಣ ಬಹಳ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಅವರು ಮ್ಯಾನರಿಸಂ, ಸ್ಟೈಲ್ ಎಲ್ಲವೂ ಬದಲಾಗಿತ್ತು. ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಪಾರ್ವತಮ್ಮ ರಾಜ್ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ ಯಾಕೋ ಸಿನಿಮಾ ಗೆಲ್ಲಲಿಲ್ಲ. ಇವತ್ತಿಗೂ ಚಿತ್ರದ ಹಾಡುಗಳು ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿದೆ.
'ಸ್ವಸ್ತಿಕ್' ಚಿತ್ರದಲ್ಲಿ ರಾಘಣ್ಣ ಕಪ್ಪು ಬಣ್ಣದ ಜಾಕೆಟ್ ಧರಿಸಿ ಬೈಕ್ ಏರಿ ಬರುವುದು, ಸಂಗಡಿಗರೊಂದಿಗೆ ನಡೆದು ಬರುವುದು, ಸಿಗರೇಟ್ ಸೇದುವುದು ಸೇರಿದಂತೆ ಕೆಲ ಸನ್ನಿವೇಶಗಳನ್ನು ನೋಡಿದರೆ ಬಹಳ ಸಾಮ್ಯತೆ ಇದೆ ಎನಿಸದೇ ಇರುವುದಿಲ್ಲ. 'ಸ್ವಸ್ತಿಕ್' ಸಿನಿಮಾ ನೋಡಿಯೇ ವಂಗಾ ಆ ದೃಶ್ಯಗಳನ್ನು ಹೆಣೆದಂತೆ ಕಾಣುತ್ತದೆ.
ಉಗ್ರವಾದದ ವಿಚಾರವನ್ನು 'ಸ್ವಸ್ತಿಕ್' ಚಿತ್ರದಲ್ಲಿ ಉಪ್ಪಿ ಹೇಳಿದ್ದರು. ಅಂದಹಾಗೆ ಹೆಚ್ಚು ಕಮ್ಮಿ ಇದೇ ಕಥೆಯನ್ನು ಚಿರಂಜೀವಿ ಅವರಿಗೆ ಹೇಳಿ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. 'ಸ್ವಸ್ತಿಕ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲದೇ ಇದ್ದರೂ ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು. ಅಲ್ಲದೇ ಉಪ್ಪಿ ಸ್ಟೈಲ್ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಯಾಕೆ ಗೆಲ್ಲಲಿಲ್ಲ ಎಂದು ಇವತ್ತಿಗೂ ಬೇಸರ ವ್ಯಕ್ತಪಡಿಸುವರು ಇದ್ದಾರೆ.


Click it and Unblock the Notifications











