ವಿಷ್ಣುವರ್ಧನ್ ಬಗ್ಗೆ ಹಗುರವಾಗಿ ಮಾತನಾಡಿದ್ರಾ ಬಿ. ಸಿ ಪಾಟೀಲ್?; ದಾದಾ ಅಭಿಮಾನಿಗಳ ಆಕ್ರೋಶ
ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಬಿ. ಸಿ ಪಾಟೀಲ್ ಬಳಿಕ ಹೀರೊ ಕೂಡ ಆಗಿದ್ದರು. ಕೆಲ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ರಾಜಕೀಯರಂಗದಲ್ಲಿ ಬ್ಯುಸಿಯಾದ ಬಳಿಕ ಮತ್ತೆ ಸಿನಿಮಾಗಳಲ್ಲಿ ಹೆಚ್ಚು ನಟಿಸಲಿಲ್ಲ. 'ಸಾಮ್ರಾಟ್' ಎಂಬ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಪಾಟೀಲ್ ಆಡಿರುವ ಮಾತು ವೈರಲ್ ಆಗ್ತಿದೆ.
ದಾದಾ ಬಗ್ಗೆ ಬಿ. ಸಿ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರರಂಗದ ಸಂಕಷ್ಟ, ಪ್ರೇಕ್ಷಕರು ಯಾಕೆ ಸಿನಿಮಾ ನೋಡಲು ಬರ್ತಿಲ್ಲ, ಎಲ್ಲಿ ಸಮಸ್ಯೆ ಆಗ್ತಿದೆ ಎನ್ನುವ ಬಗ್ಗೆ ಬಿಸಿ ಪಾಟೀಲ್ ಮಾತನಾಡಿದ್ದಾರೆ. ಇವತ್ತು ಸಿನಿಮಾ ನಿರ್ಮಾಣ ಅಷ್ಟು ಸುಲಭ ಅಲ್ಲ ಎಂದು ಹೇಳಿದ್ದಾರೆ. ಅದಕ್ಕೆ ತಮ್ಮ ಸಿನಿಜೀವನವನ್ನು ಮೆಲುಕು ಹಾಕಿ ಉದಾಹರಣೆ ನೀಡಿದ್ದಾರೆ.

ನಾನು ಚಿತ್ರರಂಗಕ್ಕೆ ಬಂದು 33 ವರ್ಷ ಆಯ್ತು. 1993ರಲ್ಲಿ 'ನಿಷ್ಕರ್ಷ' ಚಿತ್ರವನ್ನು ನಿರ್ಮಾಣ ಮಾಡಿದ್ದೆ, ಬಳಿಕ ಏನಾಯ್ತು ಗೊತ್ತೇಯಿದೆ ಎಂದು ಬಿ. ಸಿ ಪಾಟೀಲ್ ಮಾತು ಆರಂಭಿಸಿದ್ದಾರೆ. ಚಿತ್ರರಂಗ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಕಥೆ ಬಹಳ ಮುಖ್ಯ. 150 ಕೋಟಿ ರೂ. ಸಿನಿಮಾಗಳು ಡಬ್ಬಾ ಸೇರಿವೆ. 'ಸು ಫ್ರಂ ಸೋ' ಸಿನಿಮಾ ಬಂತು. ಕಡಿಮೆ ಬಜೆಟ್ನಲ್ಲಿ ಅಷ್ಟು ದೊಡ್ಡದಾಗಿ ಗೆದ್ದಿದ್ದು ಗೊತ್ತಾಗಿ ನಾನು ಸಿನಿಮಾ ನೋಡ್ದೆ. ಕಥೆ, ನಿರ್ದೇಶನ ಎಷ್ಟು ಮುಖ್ಯ ಎಂದು ಗೊತ್ತಾಗುತ್ತದೆ. ನಾನು ಸಿನಿಮಾ ಮಾಡಲು ಸಾಕಷ್ಟು ಕಥೆ ಕೇಳ್ತಿದ್ದೀನಿ. ಆದ್ರೆ ಸಿಕ್ತಿಲ್ಲ. ಕೆಲವರು ಮೋಸ ಮಾಡಲು ಸಿನಿಮಾ ಮಾಡ್ತಾರೆ, ಇದು ನನ್ನ ಅನುಭವ ಎಂದಿದ್ದಾರೆ.
ಒಂದು ಗೆಲುವಿಗೆ ನೂರು ಜನ ಅಪ್ಪಂದಿರು. ಸೋಲು ಅನಾಥ ಇಲ್ಲಿ ಎಂದು ಬಿ. ಸಿ ಪಾಟೀಲ್ ಹೇಳಿದ್ದಾರೆ. "ಅವತ್ತು 'ಸಂಘರ್ಷ' ಸಿನಿಮಾ ಮಾಡಿ ದೇಸಾಯಿ, ವಿಷ್ಣುವರ್ಧನ್ ಅವ್ರು ಸೋತಿದ್ರು. ನಾನು ಅದ್ರಲ್ಲಿ ಸಣ್ಣ ಪಾತ್ರ ಮಾಡಿದ್ದೆ. 'ಸಂಘರ್ಷ' ಅಟ್ಟರ್ಫ್ಲಾಪ್ ಆಗಿತ್ತು. ಗಾಂಧಿನಗರದಲ್ಲಿ ವಿಷ್ಣುವರ್ಧನ್ ಹಾಗೂ ದೇಸಾಯಿ ಅವ್ರನ್ನು ನಂಬಿ ಒಂದು ರೂಪಾಯಿ ಫೈನಾನ್ಸ್ ಕೊಡಲು ಯಾರು ಸಿದ್ಧರಿರಲಿಲ್ಲ. ಸ್ನೇಹಿತರ ಬೆಂಬಲದೊಂದಿಗೆ ನಾವು ಹೇಗೋ ಸಿನಿಮಾ ಮಾಡಿದ್ವಿ. ಸಿನಿಮಾ ಗೆದ್ದಾಗ ಎಲ್ಲರೂ ಬಂದ್ರು. ಗೆದ್ದಾಗ ಎಲ್ಲರೂ ನನ್ನಿಂದಲೇ ಗೆಲುವು ಅಂತಾರೆ. ಸೋತಾಗ ನಿರ್ಮಾಪಕರ ಕಷ್ಟ ಕೇಳುವವರು ಇರಲ್ಲ ಎಂದಿದ್ದಾರೆ.
ವಿಷ್ಣುವರ್ಧನ್ ಅವರ ಸಿನಿಮಾಕ್ಕೆ ಹಣ ಹಾಕಲು ಯಾರು ಮುಂದೆ ಬರುತ್ತಿರಲಿಲ್ಲ ಎನ್ನುವ ಬಿ. ಸಿ ಪಾಟೀಲ್ ಹೇಳಿಕೆ ದಾದಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ನಿಷ್ಕರ್ಷ' ಸಿನಿಮಾ ಬಂದಿದ್ದು 1994ರಲ್ಲಿ, ಆದರೆ ಅದರ ಹಿಂದಿನ ವರ್ಷ 1993ರಲ್ಲಿ 'ರಾಯರು ಬಂದರು ಮಾವನ ಮನೆಗೆ' ಸಿನಿಮಾ ಸೂಪರ್ ಹಿಟ್ಟಾಗಿತ್ತು. ದಾದಾ ಆ ಸಮಯದಲ್ಲಿ ಓಡುವ ಕುದುರೆ ಆಗಿದ್ದರು. ದಯವಿಟ್ಟು ನಿಮ್ಮ ಮಾತು ಹಿಂದಕ್ಕೆ ಪಡೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ನಿಷ್ಕರ್ಷ' ಚಿತ್ರದಲ್ಲಿ ವಿಲನ್ ಆಗಿ ಬಿ. ಸಿ ಪಾಟೀಲ್ ಅಬ್ಬರಿಸಿದ್ದರು. ಬಳಿಕ 'ಮಹಾಕ್ಷತ್ರಿಯ' ಚಿತ್ರದಲ್ಲೂ ವಿಷ್ಣು ಜೊತೆ ನಟಿಸಿದ್ದರು. 'ಕೌರವ' ಸಿನಿಮಾ ಮೂಲಕ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಮುಂದೆ 'ಲಂಕೇಶ' ಸಿನಿಮಾ ಮೂಲಕ ನಿರ್ದೇಶಕ ಕೂಡ ಆಗಿದ್ದರು.


Click it and Unblock the Notifications