ಮತ್ತೆ ದರ್ಶನ್ ಅಭಿಮಾನಿಗಳನ್ನು ಕೆಣಕಿದ್ರಾ ಪ್ರಥಮ್?
ನಟ ದರ್ಶನ್ ಅಭಿಮಾನಿಗಳು ಹಾಗೂ ಬಿಗ್ಬಾಸ್ ಖ್ಯಾತಿಯ ಪ್ರಥಮ್ ನಡುವೆ ಶೀತಲ ಸಮರ ನಡೀತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಎದುರಿಸುವ ವೇಳೆ ಪ್ರಥಮ್ ನೀಡಿದ್ದ ಹೇಳಿಕೆ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಪ್ರಥಮ್ ಕೆಲ ಕಿಡಿಗೇಡಿಗಳ ಬಗ್ಗೆ ಮಾತನಾಡಿದ್ದರು. ಆದರೆ ಅದು ಬೇರೆಯದ್ದೇ ಸ್ವರೂಪ ಪಡೆದುಕೊಂಡಿತ್ತು.
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದರ್ಶನ್ & ಗ್ಯಾಂಗ್ ವಿಚಾರಣೆ ನಡೆಯುತ್ತಿತ್ತು. ಆಗ ಪೊಲೀಸ್ ಠಾಣೆ ಸುತ್ತಾಮುತ್ತಾ 144 ಸೆಕ್ಷನ್ ಕೂಡ ಜಾರಿ ಆಗಿತ್ತು. ಆ ಸಮಯದಲ್ಲಿ ಪೊಲೀಸ್ ಠಾಣೆ ಸುತ್ತಾ ಮುತ್ತಾ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟದ ಬಗ್ಗೆ ಜೈಕಾರ ಹಾಕಿ ಸಂಭ್ರಮಿಸುತ್ತಿದ್ದರು. ಈ ವೇಳೆ ಪ್ರಥಮ್ "ನನಗೆ ಪೊಲೀಸ್ ಕಾನ್ಸ್ಟೆಬಲ್ ಕೆಲಸ ಕೊಡಿಸಿ, ಕೈಯಲ್ಲಿ ಲಾಠಿ ಹಿಡಿದುಕೊಂಡು, ಅಲ್ಲಿದ್ದವರನ್ನೆಲ್ಲಾ ಅಟ್ಟಾಡಿಸಿ ಹೊಡೆಯುತ್ತೇನೆ" ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.

ಪ್ರಥಮ್ ಕೆಲ ಕಿಡಿಗೇಡಿಗಳ ಬಗ್ಗೆ ಮಾತನಾಡಿದ್ದು ಭಾರೀ ವೈರಲ್ ಆಗಿತ್ತು. ಈ ಬಗ್ಗೆ ದರ್ಶನ್ ಅಭಿಮಾನಿಗಳು ಕೆಂಡಕಾರಿದ್ದರು. ಕೆಲವರು ಪ್ರಥಮ್ಗೆ ಬೆದರಿಕೆ ಕರೆ ಮಾಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಬುದ್ದಿ ಹೇಳಿದ್ದರು. ಅಂದಿನಿಂದಲೂ ಪ್ರಥಮ್ ವಿರುದ್ಧ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಪ್ರಥಮ್ ನಟನೆಯ 'ಕರ್ನಾಟಕ ಅಳಿಯ' ಸಿನಿಮಾ ಬಿಡುಗಡೆ ಆಗಬೇಕಿದೆ. ತಮ್ಮ ನೆಚ್ಚಿ ನಟ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಜೊತೆಗೆ 'ಕರ್ನಾಟಕ ಅಳಿಯ' ಸಿನಿಮಾ ಬಿಡುಗಡೆ ಮಾಡುವುದಾಗಿ ಪ್ರಥಮ್ ಹೇಳಿದ್ದರು. ಈ ಬಗ್ಗೆ ಕೂಡ ಕೆಲವರು ತಿರುಗೇಟು ನೀಡಿದ್ದರು. ಇತ್ತೀಚೆಗೆ ಹೋಟೆಲ್ವೊಂದರಲ್ಲಿ ಕೂತಿದ್ದಾಗ ಕೆಲವರು ಬಂದು ಕಿರಿಕ್ ಮಾಡಿದ್ದಾಗಿ ಪ್ರಥಮ್ ದೂರು ನೀಡಿದ್ದರು.

ಸಂಕ್ರಾಂತಿ ಸಂಭ್ರಮದಲ್ಲಿ ದರ್ಶನ್ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಪ್ರಥಮ್ ಕೂಡ ಕಾಮೆಂಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ ವೈರಲ್ ಆಗುತ್ತಿದೆ. ಈ ಕಾಮೆಂಟ್ ಬಗ್ಗೆ ಕೂಡ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೇಕಂತಲೇ ಪ್ರಥಮ್ ವ್ಯಂಗ್ಯವಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ದರ್ಶನ್ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕಾಮೆಂಟ್ ಮಾಡಿ "ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್, ಆರೋಗ್ಯವಾಗಿರಿ. ಆರಾಮಾಗಿರಿ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅನ್ನೋ ಮಾತು ಹೊಸ ವರ್ಷ ನಮ್ಮ ನಿಮ್ಮೆಲ್ಲರ ಬಾಳಲ್ಲಿ ನಡೆಯಲಿ, ಡೆವಿಲ್ ಚಿತ್ರವನ್ನು ಎಲ್ಲಾ ಕನ್ನಡಾಭಿಮಾನಿಗಳು ಗೆಲ್ಲಿಸಲಿ, ಸ್ವಲ್ಪ ಬೇಗ 'ಡೆವಿಲ್' ಶೂಟಿಂಗ್ ಮುಗಿಸಿ ಸರ್, 'ಕರ್ನಾಟಕದ ಅಳಿಯ' ಸಿನಿಮಾ ಡೆವಿಲ್ ಜೊತೆ ಬರಬೇಕು ಎಂದು ಕಾಯುತ್ತಿದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿರಿ, ಚೆನ್ನಾಗಿರಿ, ನಿಮಗೂ ನಿಮ್ಮ ಮಡದಿ ವಿಜಯಲಕ್ಷ್ಮಿ ಮೇಡಂಗೂ ಸಂಕ್ರಾಂತಿ ಶುಭಾಶಯಗಳು ಸರ್" ಎಂದು ಬರೆದುಕೊಂಡಿರುವಂತೆ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.
ಅಂದಹಾಗೆ ದರ್ಶನ್ ಮಾಡಿರುವ ಪೋಸ್ಟ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಪ್ರಥಮ್ ಮಾಡಿರುವಂತೆ ಯಾವುದೇ ಕಾಮೆಂಟ್ ಕಾಣುತ್ತಿಲ್ಲ. ಪ್ರಥಮ್ ನಿಜಕ್ಕೂ ಈ ರೀತಿ ಕಾಮೆಂಟ್ ಮಾಡಿದ್ರಾ? ಅಥವಾ ಇದು ಎಡಿಟ್ ಮಾಡೋರೋದಾ? ಗೊತ್ತಿಲ್ಲ. ಒಟ್ಟಾರೆ ಈ ಸ್ಕ್ರೀನ್ಶಾಟ್ ವೈರಲ್ ಆಗ್ತಿದೆ. 'ಡೆವಿಲ್' ಜೊತೆ 'ಕರ್ನಾಟಕ ಅಳಿಯ' ಸಿನಿಮಾ ರಿಲೀಸ್ ಮಾಡೋದಾಗಿ ಮತ್ತೆ ಹೇಳಿ ಪ್ರಥಮ್ ಪರೋಕ್ಷವಾಗಿ ದರ್ಶನ್ ಅಭಿಮಾನಿಗಳನ್ನು ಕೆಣಕಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.


Click it and Unblock the Notifications











