Darshan- Dhruva: ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ, ಕೊನೆಗೆ ದಾಸನಿಗೆ ಸೀಟ್ ಬಿಟ್ಟು ಎದ್ದು ಹೋದ್ರಾ?
ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಪ್ರತಿ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಏನಾದರೂ ಕೊಂಚ ವ್ಯತ್ಯಾಸ ಕಂಡುಬಂದರೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗುತ್ತದೆ. ನಟ ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಇದೇ ವಿಚಾರ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.
ತಮಿಳುನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಕನ್ನಡ ಚಿತ್ರರಂಗ ಕೂಡ ಭಾಗಿ ಆಗಿತ್ತು. ಫಿಲ್ಮ್ ಚೇಂಬರ್ ಪಕ್ಕದಲ್ಲಿ ನಿರ್ಮಾಣವಾಗಿದ್ದ ವೇದಿಕೆಯಲ್ಲಿ ಕನ್ನಡ ಸಿನಿಮಾ ತಾರೆಯರು ಭಾಗಿಯಾಗಿ ಬೇಗ ಸಮಸ್ಯೆ ಬಗೆಹರಿಯಬೇಕು ಎಂದು ಆಗ್ರಹಿಸಿದರು. ನಟರಾದ ಶಿವರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ, ವಸಿಷ್ಠ ಸಿಂಹ, ನಟಿಯರಾದ ಪೂಜಾ ಗಾಂಧಿ, ಭಾವನಾ, ಶ್ರುತಿ ಸೇರಿದಂತೆ ಹಲವರು ಈ ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 9 ಗಂಟೆಯಿಂದಲೇ ಪ್ರತಿಭಟನಾ ಸಭೆಗೆ ಹಿರಿಯ ನಟ ಶ್ರೀನಾಥ್, ಉಮಾಶ್ರೀ, ಲೂಸ್ ಮಾದ ಯೋಗಿ, ಅನಿರುದ್ದ್, ಪೂಜಾ ಗಾಂಧಿ, ಪದ್ಮಾ ವಾಸಂತಿ, ಸುಂದರ್ ರಾಜ್, ರೂಪಿಕಾ, ರವಿ ಚೇತನ್, ಶ್ರೀನಿವಾಸ್ ಮೂರ್ತಿ, ನವೀನ್ ಕೃಷ್ಣ, ಲಹರಿ ವೇಲು, ಧರ್ಮ ಕೀರ್ತಿ ರಾಜ್, ಅನು ಪ್ರಭಾಕರ್, ರಘು ಮುಖರ್ಜಿ, ಚಿಕ್ಕಣ್ಣ, ಸುಂದರ್ ರಾಜ್, ಅಭಿನಯ, ಪ್ರಮಿಳಾ ಜೋಷಾಯಿ ಸೇರಿದಂತೆ ಹಲವರು ಸೇರಿದರು. 11 ಗಂಟೆ ವೇಳೆಗೆ ಶಿವಣ್ಣ, ಧ್ರುವ, ದುನಿಯಾ ವಿಜಯ್ ವೇದಿಕೆ ಏರಿದರು.
ಕೊಂಚ ತಡವಾಗಿ ಕೆಂಪು ಬಣ್ಣದ ತಮ್ಮ ಜೀಪ್ ಏರಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಭಟನೆ ಸ್ಥಳಕ್ಕೆ ಬಂದರು. ವೇದಿಕೆಯಲ್ಲಿ ಏರಿ ಶಿವಣ್ಣನ ಕಾಲಿಗೆ ಬಿದ್ದು ಬಳಿಕ ವಸಿಷ್ಠ ಸಿಂಹ ಪಕ್ಕ ಜಾಗ ಮಾಡಿಕೊಂಡು ಕೂತರು. ಈ ವೇಳೆ ಶಿವಣ್ಣನ ಪಕ್ಕದಲ್ಲೇ ಇದ್ದ ಧ್ರುವ ಸರ್ಜಾ ಸುಮ್ಮನೆ ಇದ್ದರು. ದರ್ಶನ್ ವೇದಿಕೆ ಏರುತ್ತಿದ್ದಂತೆ ಶಿವಣ್ಣ, ಉಮಾಶ್ರೀ ಕೂಡ ಎದ್ದು ನಿಂತರು. ಆದರೆ ಧ್ರುವ ಮಾತ್ರ ಸುಮ್ಮನಿದ್ದಿದ್ದು, ಕೊನೆಗೆ ಕಾಟಾಚಾರಕ್ಕೆ ಎದ್ದಿದ್ದು, ದರ್ಶನ್ ಅವರನ್ನು ಸೌಜನ್ಯಕ್ಕೂ ಮಾತನಾಡಿಸದೇ ಇದ್ದಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಇನ್ನು ದರ್ಶನ್ ಎದ್ದು ಹೋಗಿ ಮೈಕ್ನಲ್ಲಿ ಮಾತನಾಡಿ ಬರುತ್ತಿದ್ದಂತೆ ಇತ್ತ ಧ್ರುವ ಸರ್ಜಾ ಸೀಟ್ ಬಿಟ್ಟು ಎದ್ದು ವೇದಿಕೆಯಿಂದ ಇಳಿದು ಹೊರಟುಬಿಟ್ಟರು. ಅದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋಗಳು ಸಖತ್ ವೈರಲ್ ಆಗ್ತಿದೆ. ಇದನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ದಿನ ದರ್ಶನ್ನ ಡಿಬಾಸ್ ಎನ್ನುತ್ತಿದ್ದ ಧ್ರುವ ಈಗ ಯಾಕೆ ಹೀಗೆ ಮಾಡ್ತಿದ್ದಾರೆ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಬೆಳೆಯುವರೆಗೂ ಅಣ್ಣ, ಬಾಸ್ ಎನ್ನುತ್ತಿದ್ದರು ಈಗ ಸುಮ್ಮನಾಗಿಬಿಟ್ಟರಾ? ಎಂದು ಪ್ರಶ್ನಿಸುತ್ತಿದ್ದಾರೆ.
ದರ್ಶನ್ ಹಾಗೂ ಧ್ರುವ ನಡುವೆ ಎಲ್ಲವೂ ಸರಿಯಿಲ್ಲ. ಅದೇ ಕಾರಣಕ್ಕೆ ಈ ರೀತಿ ನಡೆದುಕೊಂಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಕೆಲವರು ಇದನ್ನು ಒಪ್ಪಲು ಸಿದ್ಧರಿಲ್ಲ. ಸುಖಾ ಸುಮ್ಮನೆ ಏನೇನೋ ಕಲ್ಪಿಸಿಕೊಳ್ಳಬೇಡಿ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಿಗೆ ಇದ್ದಾರೆ. ಚೆನ್ನಾಗಿ ಇದ್ದಾರೆ ಎನ್ನುತ್ತಿದ್ದಾರೆ. ಅಂದಹಾಗೆ ಸರ್ಜಾ ಕುಟುಂಬದ 'ಪ್ರೇಮ ಬರಹ' ಚಿತ್ರದ ಹಾಡೊಂದರಲ್ಲಿ ದರ್ಶನ್ ಹೆಜ್ಜೆ ಹಾಕಿದ್ದರು. ಹನುಮಂತನ ಗುಡಿಯಲ್ಲಿ ಚಿತ್ರೀಕರಿಸಿದ್ದ 'ಜೈ ಹನುಮಂತ' ಹಾಡಿಗೆ ಅರ್ಜುನ್ ಸರ್ಜಾ, ಧ್ರುವ, ಚಿರು ಜೊತೆ ದರ್ಶನ್ ಕುಣಿದಿದ್ದರು. ದರ್ಶನ್ ಹಾಗೂ ಅರ್ಜುನ್ ಸರ್ಜಾ ನಡುವೆ ಆತ್ಮೀಯ ಒಡನಾಟವಿದೆ. ಹಾಗಾಗಿ ದರ್ಶನ್-ಧ್ರುವ ನಡುವೆ ಮನಸ್ತಾಪ ಅನ್ನೋದೆಲ್ಲಾ ಸುಳ್ಳು ಎಂದು ಕೆಲವರು ವಾದಿಸುತ್ತಿದ್ದಾರೆ.
ದರ್ಶನ್ ಹಾಗೂ ದುನಿಯಾ ವಿಜಯ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಇತ್ತು. ಆದರೆ ಅವರಿಬ್ಬರು ವೇದಿಕೆ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಾತನಾಡಿಸಿದ್ದರು. ಆದರೆ ಧ್ರುವ ಸುಮ್ಮನಿದ್ದರು ಎನ್ನುವ ವಾದ ಶುರುವಾಗಿದೆ. ವೇದಿಕೆ ಮೇಲಿನ ವಿಡಿಯೋ ಜೊತೆಗೆ ಈ ಹಿಂದೆ ಧ್ರುವ, "ನಾನು ದರ್ಶನ್ ಸರ್ ಅಭಿಮಾನಿ" ಎಂದಿರುವುದು. ಡಿ ಬಾಸ್ ಎಂದು ಕರೆದು ಟ್ವೀಟ್ ಮಾಡಿರುವ ಪೋಸ್ಟ್ಗಳ ಸ್ಕ್ರೀನ್ ಶಾಟ್ ತೆಗೆದು ಒಟ್ಟಿಗೆ ಸೇರಿಸಿ ತೇಲಿಬಿಡಲಾಗುತ್ತಿದೆ. ಇನ್ನು ಕೆಲವರು 'ಮಾರ್ಟಿನ್' ಎದುರು 'ಕಾಟೇರ' ಸಿನಿಮಾ ರಿಲೀಸ್ ಆಗಲಿ ಆಗ ನಿಜವಾದ ಡಿ ಬಾಸ್ ಯಾರು ಅನ್ನೋದು ಗೊತ್ತಾಗುತ್ತದೆ ಅಂತೆಲ್ಲಾ ಚರ್ಚೆ ಶುರು ಮಾಡಿದ್ದಾರೆ.


Click it and Unblock the Notifications











