ನಿವೇದಿತಾ ಗೌಡಗೆ ರ್ಯಾಪರ್ ಚಂದನ್ ಶೆಟ್ಟಿ 9 ಕೋಟಿ ರೂ. ಜೀವನಾಂಶ ಕೊಟ್ರಾ?
ಕನ್ನಡ ಕಿರುತೆರೆಯ ಕ್ಯೂಟ್ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಂಪತಿ ಇತ್ತೀಚೆಗೆ ವಿಚ್ಛೇದನ ಪಡೆದು ದೂರಾಗಿದ್ದಾರೆ. 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ದಂಪತಿ ಇದೀಗ ಪರಸ್ಪರ ಒಪ್ಪಿಗೆ ಪಡೆದು ಡಿವೋರ್ಸ್ ಪಡೆದಿದ್ದಾರೆ. ಅಭಿಮಾನಿಗಳಿಗೆ ಇನ್ನು ಈ ವಿಷಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಗ್ಬಾಸ್ ಶೋನಲ್ಲಿ ಇಬ್ಬರೂ ಸ್ಪರ್ಧಿಗಳಾಗಿದ್ದರು. ಬಳಿಕ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು. ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರಪೋಸ್ ಮಾಡಿದ್ದ ರ್ಯಾಪರ್ ಚಂದನ್ ಶೆಟ್ಟಿ 2020 ರ ಫೆಬ್ರವರಿ 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಕಲ್ಯಾಣಮಂಟಪದಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆದಿತ್ತು. ಬಳಿಕ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. 20 ದಿನಗಳ ಹಿಂದೆ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಚಂದನ್ ಪೋಸ್ಟ್ ಮಾಡಿದ್ದರು. ಆದರೆ ಇದೀಗ ದಿಢೀರ್ ದೂರಾಗಿ ಶಾಕ್ ಕೊಟ್ಟಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಯಾಕೆ ವಿಚ್ಛೇದನ ಪಡೆದು ದೂರಾದರು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಚರ್ಚೆ ನಡೆಯುತ್ತಿದೆ. ಆದರೆ ಕರಿಯರ್ ವಿಚಾರದ ಕಾರಣಕ್ಕೆ ಇಬ್ಬರೂ ದೂರಾಗಿದ್ದಾರೆ, ಅದು ಬಿಟ್ಟು ಬೇರೆ ಯಾವುದೇ ಕಾರಣ ಇಲ್ಲ ಎನ್ನಲಾಗ್ತಿದೆ. ಇನ್ನು ಈಗಾಗಲೇ ಇಬ್ಬರೂ ಅಧಿಕೃತವಾಗಿ ತಮ್ಮ ವಿಚ್ಛೇದನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
"ಈ ದಿನ ಚಂದನ್ ಶೆಟ್ಟಿ ಹಾಗೂ ನಾನು, ನಮ್ಮ ದಾಂಪತ್ಯವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಹಾಗೂ ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಎಂದಿನಂತೆ ಬೆಂಬಲ ಕೋರುತ್ತೇವೆ. ನಾವೂ ಪ್ರತ್ಯೇಕ ಮಾರ್ಗ ಅನುಸರಿಸಿದ್ರೂ, ಒಬ್ಬರೊನ್ನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ತಾರಾ ಜೋಡಿ ವಿಚ್ಛೇದನ ಪಡೆದು ದೂರಾದಾಗ ಜೀವನಾಂಶದ ವಿಚಾರದ ಬಗ್ಗೆಯೂ ಚರ್ಚೆ ಆಗುತ್ತದೆ. ಕೆಲ ತಾರೆಯರು ಕೋಟಿ ಕೋಟಿ ರೂ. ಜೀವನಾಂಶ ನೀಡಿರುವ ಉದಾಹರಣೆಗಳಿವೆ. ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ ಬಳಿಕ ಕೂಡ ಜೀವನಾಂಶದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಚಂದನ್ ಬರೋಬ್ಬರಿ 9 ಕೋಟಿ ರೂ. ಜೀವನಾಂಶವನ್ನು ನಿವೇದಿತಾಗೆ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ನಿವೇದಿತಾರಿಗೆ ವಿಚ್ಛೇದನದ ಬಳಿಕ ಚಂದನ್ ಜೀವನಾಂಶ ಕೊಟ್ಟಿದ್ದಾರಾ? ಎನ್ನುವ ಬಗ್ಗೆ ಟಿವಿ9 ವಾಹಿನಿಗೆ ವಕೀಲೆ ಅನಿತಾ ಪ್ರತಿಕ್ರಿಯೆ ನೀಡಿದ್ದಾರೆ. "ನಿವೇದಿತಾ ಗೌಡ ಯಾವುದೇ ರೀತಿಯ ಜೀವನಾಂಶದ ಬೇಡಿಕೆ ಇಟ್ಟಿಲ್ಲ. ಹಾಗಾಗಿ ಚಂದನ್ ಶೆಟ್ಟಿ, ನಿವೇದಿತಾಗೆ ಯಾವುದೇ ರೀತಿಯ ಜೀವನಾಂಶವನ್ನು ನೀಡುವ ಅವಶ್ಯಕತೆ ಇಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇನ್ನು ನಿವೇದಿತಾ ಯಾವುದೇ ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ಅಷ್ಟೇ ಅಲ್ಲ ಇಬ್ಬರೂ ಸಹ ಶೋಗಳು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಇನ್ನೊಬ್ಬರ ಹಣದ ಅವಶ್ಯಕತೆ ಇಬ್ಬರಿಗೂ ಇಲ್ಲ" ಅವರು ವಿವರಿಸಿದ್ದಾರೆ.
ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ 'ಕ್ಯಾಂಡಿಕ್ರಶ್' ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಒಪ್ಪಿ ಚಿತ್ರತಂಡಕ್ಕೆ ಕರೆ ಮಾಡಿ ಹೇಳಿದ್ದಾರೆ. ಆ ಮೂಲಕ ಪ್ರಬುದ್ಧತೆ ಮೆರೆದಿದ್ದಾರೆ.


Click it and Unblock the Notifications










