ಅಣ್ಣಾವ್ರ 'ಅದೇ ಕಣ್ಣು' ಸಿನಿಮಾ ನಿರ್ಮಿಸಿ ನಿರ್ಮಾಪಕ ವಾದಿರಾಜ್ ಬರ್ಬಾದ್ ಆಗಿದ್ರಾ?
ಡಾ. ರಾಜ್ಕುಮಾರ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕೆಲ ಸಿನಿಮಾಗಳು ಸೋತಿರುವುದು ಉಂಟು. ಆದರೆ ಅಣ್ಣಾವ್ರ ಸಿನಿಮಾ ಮಾಡಿ ನಷ್ಟ ಅನುಭವಿಸಿದವರು ಯಾರು ಇಲ್ಲ. 'ಅದೇ ಕಣ್ಣು' ಚಿತ್ರದ ಸೋಲಿನಿಂದ ನಿರ್ಮಾಪಕ ವಾದಿರಾಜ್ ಜೀವನ ಬರ್ಬಾದ್ ಆಯ್ತು ಎನ್ನುವ ಗಾಳಿಸುದ್ದಿ ಈಗ ಹರಡಿದೆ.
ವಾದಿರಾಜ್ ಚಿತ್ರ ನಿರ್ಮಾಣ ಮಾತ್ರವಲ್ಲ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರ ಜೊತೆಗೂ ಬಣ್ಣ ಹಚ್ಚಿದ್ದಾರೆ. ಕುಳ್ಳನೆಯ ದೇಹ, ಹಾಸ್ಯ ಪ್ರವೃತ್ತಿಯ ವಾದಿರಾಜ್ ಅವರು ಸಿನಿಮಾಗಳಲ್ಲಿ ಕೂಡ ಹಾಸ್ಯಪ್ರಧಾನ ಪಾತ್ರಗಳಲ್ಲಿ ನಟಿಸಿದ್ದವರು. 1985ರಲ್ಲಿ 'ಅದೇ ಕಣ್ಣು' ಸಿನಿಮಾ ನಿರ್ಮಾಣವಾಗಿತ್ತು. ವಾಲಿ ಬರೆದ ಕಥೆ ಆಧರಿಸಿ ಚಿ. ಉದಯ ಶಂಕರ್ ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು.

ಚಿ. ಉದಯ ಶಂಕರ್ ಸಹೋದರ ಚಿ. ದತ್ತರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಿನಿಮಾ ಯಶಸ್ವಿಯಾಗಿ 100 ದಿನ ಪ್ರದರ್ಶನ ಕಂಡಿತ್ತು. ತಂದೆ, ಮಗನಾಗಿ ಡಾ. ರಾಜ್ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಗಾಯತ್ರಿ, ತೂಗುದೀಪ ಶ್ರೀನಿವಾಸ್ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದರು. 100 ದಿನ ಪ್ರದರ್ಶನ ಕಂಡ ಚಿತ್ರದಿಂದ ನಿರ್ಮಾಪಕರಿಗೆ ನಷ್ಟ ಯಾಕೆ ಆಗುತ್ತದೆ. ಆದರೆ ಇಂತಾದೊಂದು ಸುದ್ದಿ ಈಗ ಚರ್ಚೆ ಹುಟ್ಟುಹಾಕಿರುವುದು ಯಾಕೆ? ಎನ್ನುವುದನ್ನು ನೋಡೋಣ ಬನ್ನಿ.
ನಟ, ನಿರ್ಮಾಪಕ ವಾದಿರಾಜ್ ಅವರ ಜೀವನದ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಪೋಸ್ಟ್ ಆಗಿತ್ತು. ಅದರಲ್ಲಿ 'ಅದೇ ಕಣ್ಣು' ಚಿತ್ರದ ಸೋಲಿನಿಂದ ವಾದಿರಾಜ್ ಜೀವನ ಬರ್ಬಾದ್ ಆಯ್ತು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಆ ಸಿನಿಮಾದ ನಷ್ಟದಿಂದ ಮುಂದೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಅವರ ನಿಧನಕ್ಕೆ ಇದೂ ಒಂದರ್ಥದಲ್ಲಿ ಕಾರಣ ಇರಬಹುದು ಎನ್ನುವ ಅರ್ಥದಲ್ಲಿ ವೀಡಿಯೋದಲ್ಲಿ ಹೇಳಲಾಗಿತ್ತು.

ಸದ್ಯ ವೀಡಿಯೋ ವೈರಲ್ ಆಗಿ ಕಳೆದೊಂದು ವಾರದಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅಣ್ಣಾವ್ರ ಅಭಿಮಾನಿಗಳು ಇದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಾರೆ. ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ತೋರಿಸುತ್ತಿದ್ದಾರೆ. ನಿಮ್ಮ ಆರೋಪಕ್ಕೆ ಸಾಕ್ಷ್ಯ ಇದ್ದರೆ ತೋರಿಸಿ ಎನ್ನುತ್ತಿದ್ದಾರೆ. ಕೆಲವರು ಯೂಟ್ಯೂಬ್ನಲ್ಲಿ ವೀಡಿಯೋ ಮಾಡಿ, ಕಾಮೆಂಟ್ ಮಾಡಿ ಈ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪಾರ್ವತಮ್ಮ ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ ಬಳಿಕ ಬೇರೆ ಬ್ಯಾನರ್ಗಳಲ್ಲಿ ಹೆಚ್ಚು ನಟಿಸಲಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಬೇರೆಯವರಿಗೆ ಕಾಲ್ಶೀಟ್ ಕೊಟ್ಟಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ವಾದಿರಾಜ್ ಅವರಿಗೂ ಇದೇ ರೀತಿ ಕಾಲ್ಶೀಟ್ ಕೊಟ್ಟು ಡಾ. ರಾಜ್ಕುಮಾರ್ ನಟಿಸಿದ್ದರು. ಕಪಾಲಿಯಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಕೆಲ ದಿನಗಳ ಬಳಿಕ ಕೆಂಪೇಗೌಡ ಚಿತ್ರಮಂದಿರಕ್ಕೆ ವರ್ಗಾಯಿಸಲಾಗಿತ್ತು. ಒಟ್ಟಾರೆ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು.
'ಅದೇ ಕಣ್ಣು' ಸಿನಿಮಾ ಬಿಡುಗಡೆ ಆಗಿ 19 ವರ್ಷಗಳ ಬಳಿಕ ನಿರ್ಮಾಪಕ ವಾದಿರಾಜ್ ಅವರು ನಿಧನರಾಗಿದ್ದರು. ಆ ಚಿತ್ರದ ಸೋಲಿಗೂ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ. ಇದೇ ಮಾತನ್ನು ಹಿರಿಯ ನಿರ್ದೇಶನದ ಭಾರ್ಗವ ಹೇಳಿದ್ದಾರೆ. ಈ ಗೊಂದಲದ ಬಗ್ಗೆ ಫಿಲ್ಮಿಬೀಟ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಣ್ಣಾವ್ರ ಸಿನಿಮಾ ನಿರ್ಮಿಸಿದ ಯಾವುದೇ ನಿರ್ಮಾಪಕರಿಗೆ ನಷ್ಟವಾಗಿಲ್ಲ. 'ಅದೇ ಕಣ್ಣು' ಚಿತ್ರದಿಂದ ವಾದಿರಾಜ್ ಅವರಿಗೆ ನಷ್ಟವಾಗಿತ್ತು, ಅದರಿಂದ ಆರ್ಥಿಕ ಸಂಕಷ್ಟ ಎದುರಾಯಿತು ಎನ್ನುವುದೆಲ್ಲಾ ಸುಳ್ಳು. ಯಾಕಂದರೆ ಆ ಸಿನಿಮಾ ಬಂದು ಬಹಳ ವರ್ಷಗಳ ನಂತರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು. ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಯಾರ್ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಅದೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ನಿರ್ದೇಶಕ ಭಾರ್ಗವ ಹೇಳಿದ್ದಾರೆ.
ಅದೇ ಕಣ್ಣು ಕ್ರೈಂ ಥ್ರಿಲ್ಲರ್ ಸಿನಿಮಾ. ಪತ್ನಿಯ ಜೊತೆಗಿನ ಕಲಹದ ವೇಳೆ ಜಗನ್ನಾಥ್ ರಾವ್(ರಾಜ್ಕುಮಾರ್) ಕೈ ಮಾಡಿದಾಗ ಆಕೆ ಪ್ರಾಣಬಿಡುತ್ತಾಳೆ. ಅದನ್ನು ಮುಚ್ಚಿಡಲು ಆತ ಮತ್ತೆ 3 ಕೊಲೆಗಳನ್ನು ಮಾಡುವಂತಾಗುತ್ತದೆ. ಇದರಲ್ಲಿ ಒಬ್ಬ ಇನ್ಸ್ಪೆಕ್ಟರ್ ಸಹ ಸಾಯುತ್ತಾನೆ. ಆದರೆ ಆತನ ಬೆಕ್ಕಿನ ಕಣ್ಣುಗಳನ್ನು ಕಣ್ಣು ಕಳೆದುಕೊಂಡ ಜಗನ್ನಾಥ್ ಮಗ ಗೋಪಿ(ರಾಜ್ಕಮಾರ್)ಗೆ ಹಾಕಲಾಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಅದೇ ಕಣ್ಣು ಚಿತ್ರದ ರೋಚಕ ಕಥೆ.


Click it and Unblock the Notifications











