ಸೌಂದರ್ಯ ಜಗದೀಶ್ ಖಾತೆಯಿಂದ ಪವಿತ್ರಾ ಗೌಡ ಖಾತೆಗೆ ₹2 ಕೋಟಿ ವರ್ಗಾವಣೆ?
ಏಪ್ರಿಲ್ 14ರಂದು ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನರಾಗಿದ್ದರು. ಮಹಾಲಕ್ಷ್ಮಿ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಯಹತ್ಯೆ ಮಾಡಿಕೊಂಡಿದ್ದರು. ಆರ್ಥಿಕ ನಷ್ಟ ಹಾಗೂ ಸಾಲಭಾದೆಯಿಂದ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾಗಿ ಹೇಳಲಾಗಿತ್ತು. ಇದೀಗ ನಟಿ ಪವಿತ್ರಾ ಗೌಡಗೂ ಸೌಂದರ್ಯ ಜಗದೀಶ್ ಹಣ ಕೊಟ್ಟಿದ್ದರು ಎನ್ನುವ ಗುಸುಗುಸು ಶುರುವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ನಟಿ ಪವಿತ್ರಾ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಸೇರಿದಂತೆ ಇನ್ನು 12 ಜನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೆಲ್ಲದರ ನಡುವೆ ಪವಿತ್ರಾ ಗೌಡಗೆ ಸೌಂದರ್ಯ ಜಗದೀಶ್ 2 ಕೋಟಿ ರೂ. ಹಣ ಕೊಟ್ಟಿದ್ರಾ? ಎನ್ನುವ ಮಾತುಗಳು ಕೇಳಿಬರ್ತಿದೆ. ಸೌಂದರ್ಯ ಜಗದೀಶ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ.

ಸದ್ಯ ಹಣ ವರ್ಗಾವಣೆ ವಿಚಾರದ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ಜಗದೀಶ್ ಆತ್ಮಹತ್ಯೆಗೂ ಇದಕ್ಕೂ ಏನಾದರೂ ಲಿಂಕ್ ಇದ್ಯಾ? ಎನ್ನುವ ಊಹಾಪೋಹ ಶುರುವಾಗಿದೆ. ನಟ ದರ್ಶನ್ಗೆ ಸೌಂದರ್ಯ ಜಗದೀಶ್ ಬಹಳ ಆಪ್ತರಾಗಿದ್ದರು. ಆರ್. ಆರ್ ನಗರದ ಕೆಂಚನಹಳ್ಳಿ ಬಳಿ ಪವಿತ್ರಾ ಗೌಡ 1. 75 ಕೋಟಿ ಮೌಲ್ಯದ ಮನೆ ಖರೀದಿಸಿದ್ದರು. ಈ ಮನೆಯ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್ ಸಹಿ ಇದೆ ಎನ್ನಲಾಗ್ತಿದೆ.
ಸೌಂದರ್ಯ ಜಗದೀಶ್ ಜೊತೆಗಿನ ಪಾಲುದಾರರಾದ ವಿ. ಎಸ್ ಸುರೇಶ್ ಈ ಹಣದ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಹಣದ ಬಗ್ಗೆ ಪಾಲುದಾರರ ಬಳಿ ಯಾವುದೇ ಮಾತುಕತೆ ನಡೆಸಿರಲಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಪಬ್ಲಿಕ್ ಟಿವಿ ವಾಹಿನಿಯಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿದೆ. ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಸೌಂದರ್ಯ ಜಗದೀಶ್ ಹಣ ಕೊಟ್ರಾ? ಯಾಕೆ ಕೊಟ್ರು? ಸಾಲವಾಗಿ ಕೊಟ್ಟಿದ್ರಾ? ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
60 ಕೋಟಿ ರೂ. ವಂಚನೆಯಿಂದ ನಮ್ಮ ಪತಿ ನೊಂದಿದ್ದರು ಎಂದು ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ದೂರು ನೀಡಿದ್ದರು. ಜಗದೀಶ್ 'ಸೌಂದರ್ಯ ಕನ್ಸ್ಟ್ರಕ್ಷನ್' ಎನ್ನುವ ಕಂಪನಿ ನಡೆಸುತ್ತಿದ್ದರು. ಎಸ್.ಪಿ ಹೊಂಬಣ್ಣ, ಸುಧೀಂದ್ರ ಜೊತೆ ಸುರೇಶ್ ಸಹ ಪಾಲುದಾರರಾಗಿದ್ದರು. ಇದೆಲ್ಲದರ ನಡುವೆ ಜಗದೀಶ್ ಬ್ಯಾಂಕ್ ಖಾತೆಯಿಂದ ಪವಿತ್ರಾ ಗೌಡ ಬ್ಯಾಂಕ್ ಖಾತೆಗೆ 2 ಕೋಟಿ ರೂ. ಹಣ ವರ್ಗಾವಣೆ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.


Click it and Unblock the Notifications











