ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಆರೋಗ್ಯ ಹೇಗಿದೆ?
ಸಾಹಸ ಕ್ರೀಡೆ ಆಡುವ ವೇಳೆ ಬಿದ್ದು ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್ಗೆ ನಿನ್ನೆ (ಜೂನ್ 21) ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಗೋವಾಕ್ಕೆ ಪತ್ನಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದ ದಿಗಂತ್ ಅಲ್ಲಿ ಟ್ರಾಂಪೊಲಿನ್ ಮೇಲೆ ಆಟ ಆಡುವಾಗ ತಲೆ ಕೆಳಗಾಗಿ ಬಿದ್ದ ಪರಿಣಾಮ ಕುತ್ತಿಗೆ ಮೂಳೆಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ಒಂದು ದಿನ ಗೋವಾದಲ್ಲಿಯೇ ಚಿಕಿತ್ಸೆ ಪಡೆದ ದಿಗಂತ್ ಅವರನ್ನು ನಿನ್ನೆ ಮಧ್ಯಾಹ್ನದ ವೇಳೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತರಲಾಯಿತು.
ಮಣಿಪಾಲ್ ಆಸ್ಪತ್ರೆಗೆ ದಿಗಂತ್ರನ್ನು ಕರೆತಂದ ಕೂಡಲೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸತತ ಮೂರು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆದಿದ್ದು, ದಿಗಂತ್ ಈಗ ಆರಾಮವಾಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ರ ಚಿತ್ರವೊಂದನ್ನು ಹೊರಬಿಡಲಾಗಿದ್ದು, ಅದರಲ್ಲಿ ನಗುತ್ತಾ, ಗೆಲುವಿನ ಚಿಹ್ನೆ ತೋರುತ್ತಿದ್ದಾರೆ ದಿಗಂತ್. ದಿಗಂತ್ರ ನಗುವೇ ಹೇಳುತ್ತಿದೆ ಅವರು ಆರಾಮವಾಗಿದ್ದಾರೆಂದು.
ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಅವರನ್ನು ಅಬ್ಸರ್ವೇಶನ್ನಲ್ಲಿ ಇಟ್ಟಿದ್ದು, ಇಂದು ಬೆಳಿಗ್ಗೆ 11 ಗಂಟೆ ವರೆಗೆ ಅವರು ಐಸಿಯುವಿನಲ್ಲಿಯೇ ಇರಲಿದ್ದಾರೆ. ಆ ಬಳಿಕ ಅವರನ್ನು ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತದೆ. ಆ ಬಳಿಕ ಆಸ್ಪತ್ರೆಯವರು ದಿಗಂತ್ ಆರೋಗ್ಯದ ಬಗ್ಗೆ ಎರಡನೇ ಹೆಲ್ತ್ ಬುಲೆಟಿನ್ ಅನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

''ದಿಗಂತ್ಗೆ ಸ್ಪೋರ್ಟ್ಸ್ ಇಂಜುರಿ ಆಗಿದೆ. (ಆಟವಾಡುವಾಗ ಆಗಬಹುದಾದ ಗಾಯ) ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಇನ್ನಷ್ಟು ಚಿಕಿತ್ಸೆಯ ಅಗತ್ಯವಿದೆ. ದಿಗಂತ್ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಆತಂಕದ ಅಗತ್ಯವಿಲ್ಲ'' ಎಂದು ನಿನ್ನೆ ಆಸ್ಪತ್ರೆಯ ವೈದ್ಯರು ಆರೋಗ್ಯ ಮಾಹಿತಿ ನೀಡಿದ್ದರು.
ನಿನ್ನೆ ದಿಗಂತ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿದ್ದ ನಿರ್ದೇಶಕ ಯೋಗರಾಜ್ ಭಟ್, ''ನಾನು, ದಿಗಂತ್ ಅವರ ತಂದೆ, ಐಂದ್ರಿತಾ ರೇ ಅವರ ತಂದೆ ದಿಗಂತ್ ಅನ್ನು ಭೇಟಿಯಾದೆವು, ಅವನನ್ನು ಆಪರೇಷನ್ ಥಿಯೇಟರ್ಗೆ ಕಳಿಸಿ ಬಂದೆವು. ತುಂಬಾ ಚೆನ್ನಾಗಿದ್ದಾನೆ, ಆರಾಮವಾಗಿದ್ದಾನೆ. ನಮ್ಮ ಜೊತೆ ಚೆನ್ನಾಗಿ ಮಾತನಾಡಿದ. ಇದೊಂದು ಸಣ್ಣ ಕ್ರೀಡಾ ಗಾಯ ಅಷ್ಟೆ. ಸಮ್ಮರ್ ಸಾಲ್ಟ್ ಮಾಡುವಾಗ ಆಯತಪ್ಪಿ ತಲೆ ಕೆಳಗಾಗಿ ಬಿದ್ದಿದ್ದಾನೆ. ಕತ್ತಿನ ಭಾಗಕ್ಕೆ ಏಟಾಗಿದೆ. ದಿಗಂತ್ನ ವರದಿಯನ್ನು ವೈದ್ಯರು ಎಲ್ಲಾ ರೀತಿಯಲ್ಲಿ ಪರೀಕ್ಷೆ ಮಾಡಿ, ಗೋವಾದಿಂದ ಇಲ್ಲಿಗೆ ಬಂದ್ರೆ ಇಲ್ಲಿ ಸುಲಭಕ್ಕೆ ಟ್ರೀಟ್ಮೆಂಟ್ ಆಗುತ್ತದೆದೆ, ಅಲ್ಲಿಗಿಂತಲೂ ಇಲ್ಲಿ ಚಿಕಿತ್ಸೆ ಪರಿಣಾಮಕಾರಿ ಎಂದು ಹೇಳಿ, ಇಲ್ಲಿಗೆ ಕರೆಸಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆತ ಮನೆಗೆ ಸಹ ಬರಬಹುದು'' ಎಂದರು ಯೋಗರಾಜ್ ಭಟ್.
ದಿಗಂತ್ ತಂದೆ ಕೃಷ್ಣಮೂರ್ತಿ ಸಹ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ದಿಗಂತ್ ಸದಾ ಸಕ್ರಿಯವಾಗಿರುವ ವ್ಯಕ್ತಿ. ದೇಹಾರೋಗ್ಯಕ್ಕಾಗಿ ಹಲವು ಆಟಗಳನ್ನು ಆಡುತ್ತಿರುತ್ತಾನೆ. ಹಾಗೆಯೇ ಆಟ ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದಾನೆ. ಇದೊಂದು ಸಣ್ಣ ಗಾಯವಷ್ಟೆ. ದಿಗಂತ್ಗೆ ಬೆನ್ನು ಮೂಳೆ ಮುರಿದಿದೆ, ಅವನಿಗೆ ಇನ್ನು ನಡೆಯಲು ಆಗುವುದಿಲ್ಲ, ನಿಲ್ಲಲು ಆಗುವುದಿಲ್ಲ ಎಂಬುದೆಲ್ಲ ಸುಳ್ಳು'' ಎಂದಿದ್ದರು.


Click it and Unblock the Notifications











