'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ ನಟ ದಿಗಂತ್
ಸ್ಯಾಂಡಲ್ ವುಡ್ ನ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಟೈಟಲ್ ನ ಸಿನಿಮಾಗಳಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಇದೀಗ ದೂದ್ ಪೇಡ ಅಭಿನಯದ ಮತ್ತೊಂದು ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ದಸರಾ ಹಬ್ಬದ ಪ್ರಯುಕ್ತ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂದು ಹೆಸರಿಡಲಾಗಿದೆ. ವಿಭಿನ್ನ ಟೈಟಲ್ ಕನ್ನಡ ಚಿತ್ರಪ್ರಿಯರ ಮನಸೆಳೆಯುತ್ತಿದೆ. ಅಂದ್ಹಾಗೆ ಈ ಸಿನಿಮಾ ಈಗಾಗಲೇ ಪ್ರಾರಂಭವಾಗಬೇಕಿತ್ತು, ಆದರೆ ಲಾಕ್ ಡೌನ್ ನಿಂದ ಸಿನಿಮಾ ತಡವಾಗಿ ಪ್ರಾರಂಭವಾಗುತ್ತಿದೆ.
ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಮಲೆನಾಡಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. ಸಾಗರದ ಪುಟ್ಟಹಳ್ಳಿಯಲ್ಲಿ ನಡೆಯುವ ಕಥೆ ಎಂದು ದಿಗಂತ್ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಬೈಕ್ ಮೇಲೆ ಎರಡು ಮೂಟೆಗಳನ್ನು ಕಟ್ಟಿಕೊಂಡು ದಿಗಂತ್ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ ದಿಗಂತ್ ಗೆ ನಾಯಕಿಯಾಗಿ ಐಂದ್ರಿತಾ ರೇ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೋರ್ವ ನಾಯಕಿಯಾಗಿ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿನಾಯಕ ಕೋಡ್ಸರ ನಿರ್ದೇಶನ ಮಾಡುತ್ತಿದ್ದಾರೆ. ವಿನಾಯಕ ಈ ಮೊದಲು ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.
ದಿಗಂತ್ ಬಳಿ ಸದ್ಯ ಯುವರತ್ನ, ಹುಟ್ಟುಹಬ್ಬ ಶುಭಾಶಯಗಳು, ವೇರ್ ಈಸ್ ಮೈ ಕನ್ನಡಕ, ಮಾರಿಗೋಲ್ಡ್, ಗಾಳಿಪಟ-2, ಎವರು ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿರುವ ದಿಗಂತ್ ಇದೀಗ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ವಿಭಿನ್ನ ಟೈಟಲ್ ಮತ್ತು ಕಥಾಹಂದರ ಹೊಂದಿರುವ ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.


Click it and Unblock the Notifications











