ಅವತ್ತು ಯಶ್ ಮಾಡಬೇಕಿದ್ದ ಸಿನ್ಮಾ ನಾನು ಮಾಡಿ ಗೆದ್ದಿದ್ದೆ.. ಆಮೇಲೆ..; ದಿಗಂತ್
ಚಿತ್ರರಂಗದಲ್ಲಿ ಒಬ್ಬರು ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬರು ಮಾಡಿ ಗೆಲ್ಲುವುದು ಹೊಸದೇನು ಅಲ್ಲ. ಅದೃಷ್ಟ ಇದ್ದವರಿಗೆ ಅವಕಾಶ, ಯಶಸ್ಸು ಎಲ್ಲವೂ ಒಲಿಯುತ್ತದೆ. ಗೆದ್ದಾಗ ಆ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಸೋತಾಗ ಎಲ್ಲರೂ ಮರೆತುಬಿಡುತ್ತಾರೆ.
ನಿಮಗೆ ಗೊತ್ತಾ ಯಶ್ ಮಾಡಬೇಕಿದ್ದ ಅದೊಂದು ಸಿನಿಮಾ ದಿಗಂತ್ ಪಾಲಾಗಿತ್ತು. ಆ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಹಿಟ್ ಲಿಸ್ಟ್ ಕೂಡ ಸೇರಿತ್ತು. ಈ ವಿಚಾರ ಬಹಳ ಜನರಿಗೆ ಗೊತ್ತಿರಲಿಲ್ಲ. ಇದೀಗ ಸ್ವತಃ ದಿಗಂತ್ ಈ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಅವರು ನಟಿಸಿರುವ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಮಾಡಿ ಶೂಭ ಕೋರಿದ್ದಾರೆ. ಈ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಮತ್ತೊಮ್ಮೆ ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ನಿರ್ಮಿಸಿ, ನಿರ್ದೇಶಿಸಿದ್ದ 'ಪಂಚರಂಗಿ' ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸಹ ಹಿಟ್ ಆಗಿತ್ತು.
2010ರಲ್ಲಿ 'ಪಂಚರಂಗಿ' ಸಿನಿಮಾ ತೆರೆಗೆ ಬಂದಿತ್ತು. ಭಟ್ರ 'ಮುಂಗಾರುಮಳೆ' ಚಿತ್ರದ ಸಣ್ಣ ಪಾತ್ರದಲ್ಲಿ ಮಿಂಚಿದ್ದ ದೂಡ್ ಪೇಡಾ ಬಳಿಕ 'ಗಾಳಿಪಟ' ಹಾಗೂ 'ಮನಸಾರೆ' ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಅದರ ಬೆನ್ನಲ್ಲೇ 'ಪಂಚರಂಗಿ' ಸಿನಿಮಾ ಅವಕಾಶ ಸಿಕ್ಕಿತ್ತು. ಅಂದಹಾಗೆ ಈ ಚಿತ್ರದಲ್ಲಿ ಯಶ್ ನಟಿಸಬೇಕಿತ್ತು ಎಂದು ದಿಗಂತ್ ಇದೀಗ ರಿವೀಲ್ ಮಾಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ತಮ್ಮ ಸಿಕ್ಕ ಪಾತ್ರಗಳು, ಸಕ್ಸಸ್ ತೃಪ್ತಿ ತಂದಿದ್ಯಾ? ಎನ್ನುವ ಪ್ರಶ್ನೆಗೆ ಖಂಡಿತ ತೃಪ್ತನಾಗಿದ್ದೇನೆ ಎಂದು ದಿಗಂತ್ ಹೇಳಿದ್ದಾರೆ. ಬೇರೆ ನಟರು ಬೇರೆ ಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವುದನ್ನು ನೋಡಿದಾಗ ಬೇಸರವಾಗುತ್ತಾ ಎನ್ನುವ ಪ್ರಶ್ನೆಗೆ "ನನಗೆ ಯಾವತ್ತೂ ಆ ರೀತಿ ಅನ್ನಿಸಲಿಲ್ಲ. 'ಪಂಚರಂಗಿ' ಸಿನಿಮಾ ಯಶ್ ಮಾಡಬೇಕಿತ್ತು. ಯಶ್ ಬದ್ಲು ನಾನು ಮಾಡ್ದೆ. ಆಗ ನಾನು ಯಶ್ಗಿಂತ ಉತ್ತುಂಗಕ್ಕೆ ಏರಿದ್ದೆ. ಆದರೆ ಈಗ ಅವ್ರು, ನಾನು ತಲುಪಲು ಸಾಧ್ಯವಾಗದ ಸ್ಥಾನಕ್ಕೆ ಏರಿದ್ದಾರೆ. ನನಗೆ ಅವ್ರ ಬಗ್ಗೆ ಬಹಳ ಸಂತೋಷ ಇದೆ. ನಾನು ಬೇರೊಬ್ಬರ ಯಶಸ್ಸು ನೋಡಿ ಖುಷಿಪಡುತ್ತೇನೆ. ಯಾವತ್ತೂ ನನಗೆ ಅದು ಸಿಗಲಿಲ್ಲ ಎಂದು ಕೊರಗಲ್ಲ" ಎಂದು ದಿಗಂತ್ ಹೇಳಿದ್ದಾರೆ.
ಇನ್ನು 14 ವರ್ಷಗಳ ಬಳಿಕ 'ಪಂಚರಂಗಿ' ಜೋಡಿ ದಿಗಂತ್ ಹಾಗೂ ನಿಧಿ ಸುಬ್ಬಯ್ಯ 'ಎಡಗೈ ಅಪಘಾತಕ್ಕೆ ಕಾರಣ' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 2010ರಲ್ಲಿ ಈ ಸಿನಿಮಾ ಬಂದಿತ್ತು. ಆಗ ಯಶ್ ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದರು. 'ಮೊಗ್ಗಿನ ಮನಸ್ಸು' ಸಕ್ಸಸ್ ಬಳಿಕ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 2011ರಲ್ಲಿ 'ರಾಜಧಾನಿ' ಹಾಗೂ 'ಕಿರಾತಕ' ಚಿತ್ರಗಳು ಬಂದು ಗೆದ್ದಿತ್ತು. ಮುಂದೆ 'ಲಕ್ಕಿ', 'ಜಾನು', 'ಡ್ರಾಮಾ' ಹೀಗೆ ನಿಧಾನವಾಗಿ ಒಂದೊಂದೆ ಸಿನಿ ಆ ಗೆಲ್ಲಲು ಆರಂಭವಾಯಿತು. 'ಗೂಗ್ಲಿ' ಹಾಗೂ 'ರಾಜಾಹುಲಿ' ಯಶ್ ಸಿನಿಬದುಕಿಗೆ ದೊಡ್ಡ ತಿರುವು ಕೊಟ್ಟಿತ್ತು.
'KGF' ಸರಣಿ ಸಿನಿಮಾಗಳನ್ನು ಮಾಡಿ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಈಗ ಪ್ಯಾನ್ ವರ್ಲ್ಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಿತ್ರ ನಿರ್ಮಾಪಕರು ಆಗಿ ಯಶಸ್ಸು ಸಾಧಿಸಿದ್ದಾರೆ.


Click it and Unblock the Notifications











