50ನೇ ವರ್ಷಕ್ಕೆ ನಿವೃತ್ತಿಯಾಗುವುದಾಗಿ ಹೇಳಿ 47ನೇ ವರ್ಷಕ್ಕೆ ಬಾರದ ಲೋಕಕ್ಕೆ ಹೋದ ದಿಲೀಪ್ ರಾಜ್ ; ಅಂದು ಹೇಳಿದ್ದೇನು ?
ಬದುಕಿನಲ್ಲಿ ಎಲ್ಲವೂ ನಾವು ಅಂದುಕೊಂಡತೆ ಆಗುತ್ತೆ ಎಂದುಕೊಂಡಿರುತ್ತೇವೆ. ಕೇವಲ ನಾಳೆಯ ಬಗ್ಗೆ ಮಾತ್ರ ಅಲ್ಲ ಭವಿಷ್ಯದ ಕುರಿತು ನಾನಾ ರೀತಿಯ ಪ್ಲಾನ್ಗಳನ್ನು ಕೂಡ ಮಾಡಿರುತ್ತೇವೆ. ಚೆನ್ನಾಗಿ ದುಡ್ಡು ಮಾಡಿ ಒಂದು ಹಂತಕ್ಕೆ ತಲುಪಿದ ನಂತರ ನೆಮ್ಮದಿಯಿಂದ ಇರಬೇಕು ಅಂದುಕೊಂಡು ಕನಸು ಕಾಣುತ್ತೇವೆ.
ಆದರೆ ವಾಸ್ತವದಲ್ಲಿ ಇವತ್ತು ಇದ್ದಂಗೆ ನಾಳೆ ಇರಲ್ಲ.ಈಗಿದ್ದಂಗೆ,ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ತಾನೊಂದು ಯೋಚನೆ ಮಾಡಿದ್ದರೆ ಆ ಭಗವಂತ ಹಣೆಯಲ್ಲಿ ಬೇರೆಯದ್ದೇ ಬರೆದಿರುತ್ತಾನೆ. ಇದಕ್ಕೆ ಉದಾಹರಣೆಯೇ ದಿಲೀಪ್ ರಾಜ್ ಅವರ ಅಕಾಲಿಕ ನಿಧನ.

ಹೌದು, ಹೆಚ್ಚೇನು ಇಲ್ಲ. ಕೇವಲ ಒಂದು ವರ್ಷದ ಹಿಂದೆ ದಿಲೀಪ್ ರಾಜ್ ಕನ್ನಡದ ಪ್ರಖ್ಯಾತ ಆರ್ ಜೆ ಮತ್ತು ಯೂಟ್ಯೂಬರ್ ರ್ಯಾಪಿಡ್ ರಶ್ಮಿ ಅವರಿಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ಮುಂದಿನ ಬದುಕಿನ ಕುರಿತು ಮಾತನಾಡಿದ್ದರು. ಬದುಕಿನ ಪಾಠವನ್ನು ಕೂಡ ಮಾಡಿದ್ದ ದಿಲೀಪ್ ರಾಜ್ ನಮ್ಮ ಬದುಕನ್ನು ನಾವು ಇಲ್ಲಿ ಡಿಸೈನ್ ಮಾಡಿಕೊಳ್ಳಲು ಆಗಲ್ಲ ಎಂದಿದ್ದರು. ದಿಲೀಪ್ ರಾಜ್ ಅವರ ಈ ಮಾತು ಅಕ್ಷರಶಃ ನಿಜಾ ಆಗಿದೆ.
ಈ ಕುರಿತು ರ್ಯಾಪಿಡ್ ರಶ್ಮಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ದಿಲೀಪ್ ರಾಜ್ ನಮ್ಮ ಲೈಫ್ ಅನ್ನು ನಾವೇ ಡಿಸೈನ್ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ, ನಾವು ಎಷ್ಟೇ ಪ್ಲಾನ್ ಮಾಡಿದರೂ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕೇ ಹೊರತು, ಕಾಲವನ್ನು ಬದಲಿಸಲು ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದರು.
ಮುಂದುವರೆದು ಮಾತನಾಡಿದ್ದ ದಿಲೀಪ್ ರಾಜ್, ನನ್ನ ಹತ್ರ ಇವತ್ತು ದುಡ್ಡು ಇಲ್ಲ ಅಂತಲ್ಲ. ದುಡ್ಡಿದೆ. ಆದರೆ ಒಮ್ಮೊಮ್ಮೆ ಒಂದು ಸಾವಿರ ರೂಪಾಯಿ ಬೇಕು ಅಂದಾಗ ಕೂಡ ಅದು ನಮಗೆ ಸಿಗಲ್ಲ, ಯಾಕೆಂದರೆ ಟೈಮ್ ಹಾಗಿರುತ್ತೆ ಎಂದು ಹೇಳಿದ್ದರು. ಸಮಯಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕೆಂದಿದ್ದರು. ಈ ಮೂಲಕ ನಾವು ಸಮಯದ ಗೊಂಬೆ ಮಾತ್ರ ಎಂದಿದ್ದರು.
ಇನ್ನು ಎಲ್ಲರಿಗೆ ಗೊತ್ತಿರುವಂತೆ ದುಡ್ಡೇ ದೊಡ್ಡಪ್ಪ. ದುಡ್ಡಿದವನೇ ಬಾಸು. ದುಡ್ಡು ಒಂದಿದ್ದರೆ ಸಾಕು ಯಾವ ಸಂಬಂಧಕ್ಕೂ ಬೆಲೆ ಇಲ್ಲ. ಆದರೆ ದಿಲೀಪ್ ರಾಜ್ ಅವರದ್ದು ಇದಕ್ಕೆ ತದ್ವಿರುದ್ದವಾದ ವ್ಯಕ್ತಿತ್ವವಾಗಿತ್ತು. ಇದಕ್ಕೆ ಕೈಗನ್ನಡಿಯೇ ಅವತ್ತು ಅವರಾಡಿದ ಮಾತು. ಈ ಕುರಿತು ಮಾತನಾಡಿದ್ದ ದಿಲೀಪ್ ರಾಜ್ ನಾನು ಹಣಕ್ಕಿಂತ ವ್ಯಕ್ತಿಗಳಿಗೆ ಬೆಲೆ ಕೊಡುತ್ತೇನೆ ಎಂದು ಹೇಳಿದ್ದರು. ಇಂತಹ ವ್ಯಕ್ತಿತ್ವಕ್ಕೆ ಸಿಕ್ಕ ಬೆಲೆ ಇಂದು ಕಣ್ಮುಂದೆಯೇ ಇದೆ. ಹಲವರು ದಿಲೀಪ್ ರಾಜ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಅತ್ಯಂತ ನೋವಿನ ಸಂಗತಿ ಅಂದರೆ ಇದೇ ಸಂದರ್ಶನದಲ್ಲಿ ತಮ್ಮ ನಿವೃತ್ತಿಯ ಕುರಿತು ಕೂಡ ದಿಲೀಪ್ ರಾಜ್ ಮಾತನಾಡಿದ್ದರು., ನೋಡಮ್ಮಾ ನಾವು ಈಗ ಹತ್ತಿರ ಬರುತ್ತಿದ್ದೇವೆ, 50 ವರ್ಷಕ್ಕೆ ರಿಟೈರ್ಡ್ ಆಗಬೇಕು ಎಂದು ನಾನು ನನ್ನ ಪತ್ನಿಗೆ ಯಾವಾಗಲೂ ಹೇಳ್ತಾ ಇರುತ್ತೇನೆ ಎಂದು ಹೇಳಿದ್ದರು. ನಿವೃತ್ತಿ ಅಂದರೆ ನಿರ್ಮಾಣದಿಂದ, ಈ ಪ್ರೊಡಕ್ಷನ್ ಒತ್ತಡ ಎಲ್ಲ ಬೇಡ ಎಂದು ಹೇಳಿದ್ದ ದಿಲೀಪ್ ರಾಜ್ ನಾನು ಕೊನೆಯವರೆಗೆ ಕಲಾವಿದನಾಗಿ ಉಳಿಯುತ್ತೇನೆ ಎಂದು ಹೇಳಿದ್ದರು.
ಹೀಗೆ ತಮ್ಮ ಮುಂದಿನ ಜೀವನ, ನಿವೃತ್ತಿಯ ಕುರಿತು ದಿಲೀಪ್ ರಾಜ್ ಒಂದು ವರ್ಷದ ಹಿಂದೆ ಮಾತನಾಡಿದ್ದರು. ದಿಲೀಪ್ ರಾಜ್ ಅವರಿಗೆ ಈಗ 47 ವರ್ಷ ವಯಸ್ಸಾಗಿತ್ತು. ನಿರ್ಮಾಪಕನ ಸ್ಥಾನದಿಂದ ಕೆಳಗಿಳಿಯಲು ಇನ್ನು 3 ವರ್ಷ ಬಾಕಿ ಇತ್ತು. ಆದರೆ ವಿಧಿ ಮಾತ್ರ ಅದಾಗಲೇ ದಿಲೀಪ್ ರಾಜ್ ಬದುಕಿನ ಕ್ಲೈಮ್ಯಾಕ್ಸ್ ಬರೆದು ಮುಗಿಸಿತ್ತು.


Click it and Unblock the Notifications