ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಡಿಂಪಲ್ ಕ್ವೀನ್ ಭೇಟಿ: ದಿಢೀರ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?
ಇತ್ತೀಚೆಗೆ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ಯಾಕೋ ಸೈಲೆಂಟ್ ಆಗಿದ್ದರು. 'ಕ್ರಾಂತಿ' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ರಚಿತಾ ರಾಮ್ ಸುಳಿವೇ ಇರಲಿಲ್ಲ. ಆದ್ರೀಗ ದಿಢೀರನೇ ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ದಿಢೀರನೇ ಭೇಟಿ ಕೊಟ್ಟಿದ್ದಾರೆ.
ಮಂಗಳೂರಿನ ಹೊರ ವಲಯದಲ್ಲಿರೋ ಕೊರಗಜ್ಜನ ಕ್ಷೇತ್ರಕ್ಕೆ ಈಗಾಗಲೇ ಸ್ಯಾಂಡಲ್ವುಡ್ನ ತಾರೆಯರು ಭೇಟಿ ಕೊಟ್ಟು ಬಂದಿದ್ದಾರೆ. ಕೊರಗಜ್ಜನ ಮುಂದೆ ಏನೇ ಹರಕೆ ಹೊತ್ತುಕೊಂಡರೂ ಈಡೇರಿಸುತ್ತಾರೆಂಬ ನಂಬಿಕೆ ಜನರಲ್ಲಿ ಇದೆ. ಇಲ್ಲಿಗೆ ಬಂದ ತಾರೆಯರಿಗೂ ಈ ಅನುಭವ ಆಗಿದೆ.

ಈ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕುಟುಂಬದೊಂದಿಗೆ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದರು. ಅದರಂತೆ ರಕ್ಷಿತಾ ಪ್ರೇಮ್ ಕೂಡ ಅಂದುಕೊಂಡಿದ್ದು ಈಡೇರಿದ್ದಕ್ಕೆ ಹರಕೆ ತೀರಿಸಲು ಕೊರಗಜ್ಜನ ದೇವಸ್ಥಾನಕ್ಕೆ ಬಂದಿದ್ದರು. ಇತ್ತೀಚೆಗೆ ಪ್ರೇಮ ಕೂಡ ಕೊರಜ್ಜನ ಮುಂದೆ ಭಕ್ತಿಯಿಂದ ಪ್ರಾರ್ಥನೆ ಮಾಡಿ ಪೂಜೆಯನ್ನು ಸಲ್ಲಿಸಿದ್ದರು.
ಸಿನಿಮಾ ಯಶಸ್ಸಿಗಾಗಿ ಪ್ರಾರ್ಥನೆ
ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಸ್ನೇಹಿತರು ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ದರು. ಈ ಕಾರಣಕ್ಕೆ ಇಲ್ಲಿಗೆ ಭೇಟಿ ಕೊಟ್ಟು ಪ್ರಾರ್ಥನೆ ಮಾಡಿದ್ದಾರೆ.
'ಕ್ರಾಂತಿ' ಸಿನಿಮಾ ಬಳಿಕ ರಚಿತಾ ರಾಮ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗಬೇಕಿವೆ. ಯಂಗ್ ರೆಬೆಲ್ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಹಾಗೇ ನೀನಾಸಂ ಸತೀಶ್ ಜೊತೆ 'ಮ್ಯಾಟ್ನಿ'ಯಲ್ಲೂ ನಟಿಸಿದ್ದು, ಅದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾಗಳ ಗೆಲುವಿಗಾಗಿ ಕೊರಗಜ್ಜನ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಕೊರಗಜ್ಜನ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?
ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಆತ್ಮೀಯರೊಂದಿಗೆ ಮಂಗಳೂರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ " ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ರು. ಹಾಗಾಗಿ ನನಗೂ ಕೊರಗಜ್ಜ ದೈವದಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಅನ್ನಿಸಿತು. ಅದಕ್ಕೆ ಬಂದಿದ್ದೇನೆ" ಎಂದು ರಚಿತಾ ರಾಮ್ ಹೇಳಿದ್ದಾರೆ.
ಹಾಗೇ ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ. "ಈ ಕ್ಷೇತ್ರದ ಪ್ರಾಕೃತಿಕ ಸೌಂದರ್ಯ ತುಂಬಾ ಚೆನ್ನಾಗಿದೆ. ನನ್ನ ಮುಂಬರುವ ಸಿನಿಮಾಗಳ ಬಗ್ಗೆ ಪ್ರಾರ್ಥಿಸಿದ್ದೇನೆ." ಎಂದು ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ನಟಿ ರಚಿತಾ ರಾಮ್ ಹೇಳಿದ್ದಾರೆ.
'ಕೊರಗಜ್ಜ'ನ ಮೇಲೆ ಸಿನಿಮಾ
ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ತೆರೆಕಂಡ ಬಳಿಕ ಕರಾವಳಿ ಭಾಗದ ದೈವಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಪಂಜುರ್ಲಿ ಹಾಗೂ ಗುಳಿಗ ದೈವದ ಬಗ್ಗೆ ಜನರಿಗೆ ಪರಿಚಯವಾಗಿದೆ. ಈಗ ಮತ್ತೊಂದು ದೈವ ಕೊರಗಜ್ಜ ಮೇಲೂ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
'ಕೊರಗಜ್ಜ' ಸಿನಿಮಾವನ್ನು ಸುಧೀರ್ ಅತ್ತಾರ್ ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಟಿ ಭವ್ಯಾ, ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ಬೇಡಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕಾಂತಾರ' ಬಳಿಕ ಈ ಸಿನಿಮಾ ನೋಡುವುದಕ್ಕೆ ಕುತೂಹಲ ಹೆಚ್ಚಾಗಿದೆ.


Click it and Unblock the Notifications











