ದರ್ಶನ್ಗೆ ಹಣ ನೀರಿನಂತೆ ಹರಿದು ಬಂದಿದ್ದೇಗೆ? ಆ ಸೀಕ್ರೆಟ್ ಬಿಚ್ಚಿಟ್ಟ ದಿನಕರ್ ತೂಗುದೀಪ
ದರ್ಶನ್- ದಿನಕರ್. ಕನ್ನಡ ಚಿತ್ರರಂಗ ಸ್ಟಾರ್ ಸಹೋದರರು. ಒಬ್ಬರು ನಟನಾಗಿ ಗೆದ್ದರೆ, ಮತ್ತೊಬ್ಬರು ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿ ದರ್ಶನ್ ಸಂಕಷ್ಟ ಎದುರಿಸುವಂತಾಗಿತ್ತು. ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ವಿರಾಕ್ ಹಾಗೂ ಸಂಜನಾ ಆನಂದ್ ನಟನೆಯ 'ರಾಯಲ್' ಸಿನಿಮಾ ಜನವರಿ 24ಕ್ಕೆ ತೆರೆಗೆ ಬರಲಿದೆ. ಗಣರಾಜ್ಯೋತ್ಸವ ವೀಕೆಂಡ್ ಚಿತ್ರಕ್ಕೆ ಸಕ್ಸಸ್ ತಂದುಕೊಡುವ ನಿರೀಕ್ಷೆಯಿದೆ. ಚಿತ್ರದ ಪ್ರಚಾರದ ಭಾಗವಾಗಿ ನಿರ್ದೇಶಕ ದಿನಕರ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಈ ವೇಳೆ ತಮ್ಮ ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ.

ಖ್ಯಾತ ಖಳನಟ ತುಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಬಂದು ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಬಳಿಕ ಹೀರೊ ಆದರು. 'ಮೆಜೆಸ್ಟಿಕ್' ಚಿತ್ರದ ನಂತರ ದರ್ಶನ್ ಹಿಂತಿರುಗಿ ನೋಡಲಿಲ್ಲ. ಆದರೂ ಸಾಕಷ್ಟು ಏಳುಬೀಳು ಕಾಣುವಂತಾಯಿತು.
ಒಂದ್ಕಾಲದಲ್ಲಿ ಮೈಸೂರಿನಲ್ಲಿ ಹಸು ಕಟ್ಟಿ ಹಾಲು ಮಾರುತ್ತಿದ್ದ ದರ್ಶನ್ ಬಳಿಕ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು. ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಸಹೋದರ ದಿನಕರ್ ಕೂಡ ನಿರ್ದೇಶಕರಾಗಿ ಗೆದ್ದರು. 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ', 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಗಮನ ಸೆಳೆದರು. ನಿರ್ಮಾಪಕರಾಗಿಯೂ ಯಶಸ್ವಿ ಆಗಿದ್ದಾರೆ.
ತಂದೆ ಚಿತ್ರರಂಗದಲ್ಲಿ ಖಳನಟನಾಗಿ ಹೆಸರು ಮಾಡಿದರೂ ದೊಡ್ಡದಾಗಿ ಹಣ ಸಂಪಾದಿಸಲಿಲ್ಲ. ಆದರೆ ದರ್ಶನ್ ಹಾಗೂ ದಿನಕರ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಹೀಗೆ ತಮ್ಮಮಿಬ್ಬರಿಗೆ ಹಣ ಹರಿದು ಬರೋಕೆ ಕಾರಣ ಏನು ಎಂದು ದಿನಕರ್ ಹೇಳಿದ್ದಾರೆ. ಚಿಕ್ಕಂದಿನಿಂದ ತನಗೆ ಹಾಗೂ ಸಹೋದರ ದರ್ಶನ್ಗೆ ಇದ್ದ ಒಂದು ನಂಬಿಕೆ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ದಿನಕರ್ ಹಾಗೂ ವಿರಾಟ್ ರಸ್ತೆ ಮಾರ್ಗವಾಗಿ ಕಾರ್ ಏರಿ ಪ್ರಯಾಣಿಸಿದ್ದಾರೆ. ಈ ಹಾದಿಯಲ್ಲಿ 'ರಾಯಲ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ರಸ್ತೆ ಮಧ್ಯೆ ಕಾರ್ ನಿಲ್ಲಿಸಿದ ದಿನಕರ್ ಹರಿಯುವ ಕಾವೇರಿ ನದಿಗೆ ನೀರಿಗೆ ಕಾಸು ಹಾಕಿದ್ದಾರೆ. ಇದು ಯಾಕೆ ಎಂದು ವಿರಾಟ್ ಕೇಳಿದ್ದಾಗ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ನಮ್ಮ ತಂದೆ ಬೆಂಗಳೂರಿನಿಂದ ಮೈಸೂರಿಗೆ ಓಡಾಡುವಾಗ ಕಾವೇರಿ ನದಿಗೆ ಕಾಸು ಹಾಕುತ್ತಿದ್ದರು. ನಮ್ಮಪ್ಪನಿಗೆ ಒಂದು ನಂಬಿಕೆ. ಹರಿಯುವ ನೀರಿಗೆ ಕಾಸು ಹಾಕಿದರೆ ನಮಗೂ ಕಾಸು ಹರಿದು ಬರುತ್ತದೆ ಅಂತ. ನಾನು ಹಾಗೂ ದರ್ಶನ್ ಕೂಡ ಅದನ್ನೇ ಫಾಲೋ ಮಾಡ್ತಿರ್ತೀವಿ ಎಂದಿದ್ದಾರೆ. ಈ ಮಾತು ಕೇಳಿ ನಟ ವಿರಾಟ್ ಕೂಡ ಕಾಸು ತಂದು ಕಾವೇರಿ ನದಿ ನೀರಿಗೆ ಹಾಕಿದ್ದಾರೆ.
ನಮ್ಮ ರಾಯಲ್ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾ ಚಿತ್ರಮಂದಿರಗಳಿಂದ ಹೀಗೆ ಹಣ ಹರಿದು ಬರಲಿ ಎಂದು ಹೇಳಿ ಇಬ್ಬರೂ ಕಾಸು ನೀರಿಗೆ ಹಾಕಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ಬಳಿಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹನುಮಂತು ಪಲಾವ್ ಹೋಟೆಲ್ಗೆ ಹೋಗಿ ಇಬ್ಬರು ಬಿರಿಯಾನಿ ಸವಿದಿದ್ದಾರೆ.
ದಿನಕರ್ ತಮ್ಮ ಮೈಸೂರಿನ ಮನೆಗೆ ವಿರಾಟ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ತಾಯಿ ಮೀನಮ್ಮ ಇಬ್ಬರಿಗೂ ಕಾಫಿ ಮಾಡಿಕೊಟ್ಟಿದ್ದಾರೆ. 41 ವರ್ಷಗಳ ಹಿಂದೆ ಆ ಮನೆ ಕಟ್ಟಿದ ವಿಚಾರವನ್ನು ದಿನಕರ್ ವಿವರಿಸಿದ್ದಾರೆ. ಕೊನೆಗೆ ಮೈಸೂರಿನ ಲೈಟಿಂಗ್ ಅಂದಚೆಂದ ಕಣ್ತುಂಬಿಕೊಂಡಿದ್ದಾರೆ.


Click it and Unblock the Notifications











