ಅಪ್ಪು ಆಶಿರ್ವಾದದೊಂದಿಗೆ ದಿನಕರ್ ಸಿನಿಮಾ: ಅಶ್ವಿನಿ ಪುನೀತ್ ರಾಜ್ಕುಮಾರ್ ಟೈಟಲ್ ರಿವೀಲ್
ಎಲ್ಲ ಅಂದುಕೊಂಡಂತೆ ಆಗಿದ್ದರೆ ದಿನಕರ್ ತೂಗುದೀಪ ನಿರ್ದೇಶನದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟಿಸಬೇಕಿತ್ತು. ಅಪ್ಪು ಕಥೆ ಕೂಡ ಕೇಳಿ ನಟಿಸೋಕೆ ಒಪ್ಪಿಕೊಂಡಿದ್ದರು. ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಬೇಕಿತ್ತು. ಆದರೆ ಆ ಸಿನಿಮಾ ಸೆಟ್ಟೇರೋಕು ಮುನ್ನ ಅಪ್ಪು ಬಾರದ ಲೋಕಕ್ಕೆ ಹೊರಟುಬಿಟ್ಟರು.
ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ದಿನಕರ್ ಸಿನಿಮಾ ನಿಂತು ಹೋಗಿತ್ತು. ಸದ್ಯ ವಿರಾಟ್ ಹೀರೋ ಆಗಿ ದಿನಕರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇದು ಅಪ್ಪುಗಾಗಿ ಮಾಡಿದ್ದ ಕಥೆನಾ? ಬೇರೆ ಕಥೆನಾ? ಎನ್ನುವುದರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಅಪ್ಪು ಸರ್ ಆಶೀರ್ವಾದದೊಂದಿಗೆ ಶುರುವಾಗಲಿರುವ ಈ ಚಿತ್ರದ ಟೈಟಲ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ರಿವೀಲ್ ಮಾಡಲಿದ್ದಾರೆ.

ಫೆಬ್ರವರಿ 6ರಂದು ಬೆಳಗ್ಗೆ 9.23 ನಿಮಿಷಕ್ಕೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ವಿಜಯ್ ಕಿರಗಂದೂರ್ ಪ್ರೊಡಕ್ಷನ್ ನಂಬರ್ 23 ಸಿನಿಮಾ ಟೈಟಲ್ ರಿವೀಲ್ ಮಾಡಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಮುಹೂರ್ತ ಸಮಾರಂಭ ಕೂಡ ನಡೆಯಲಿದೆ. ಇದು ಜಯಣ್ಣ ಕಂಬೈನ್ಸ್ ಬ್ಯಾನರ್ನ 23ನೇ ಸಿನಿಮಾ. ಹಾಗಾಗಿ ಸದ್ಯ ಪ್ರೊಡಕ್ಷನ್ ನಂಬರ್ 23 ಎನ್ನುವ ಟೆಂಟಿಟಿವ್ ಟೈಟಲ್ನಲ್ಲಿ ಕರೆಯಲಾಗ್ತಿದೆ. 'ಡ್ರಾಮಾ', 'ಗೂಗ್ಲಿ', 'ಮಿ & ಮಿ ರಾಮಾಚಾರಿ', 'ಮಫ್ತಿ' ರೀತಿಯ ಹಿಟ್ ಸಿನಿಮಾಗಳನ್ನು ನೀಡಿದ ಸಂಸ್ಥೆ ಮತ್ತೊಂದು ಅದ್ಭುತ ಚಿತ್ರಕ್ಕೆ ಕೈ ಹಾಕಿದೆ.

ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾಗಳ ನಂತರ ದಿನಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ದಿನಗಳಿಂದ ದರ್ಶನ್ ಹಾಗೂ ದಿನಕರ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಎಂದು ಅಭಿಮಾನಿಗಳು ಕಾಯತ್ತಿದ್ದರು. ಆದರೆ ಅಪ್ಪು ಜೊತೆ ದಿನಕರ್ ಸಿನಿಮಾ ಘೋಷಿಸಿದ್ದು ಅಚ್ಚರಿ ತಂದಿತ್ತು. ಆದರೆ ಆ ಸಿನಿಮಾ ಸಾಧ್ಯವಾಗಲೇ ಇಲ್ಲ. ಇದೀಗ 'ಕಿಸ್' ಸಿನಿಮಾ ಖ್ಯಾತಿಯ ವಿರಾಟ್ ಹೀರೊ ಆಗಿ ನಟಿಸಲಿರುವ ಚಿತ್ರಕ್ಕೆ ದಿನಕರ್ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.


Click it and Unblock the Notifications











