'ಕಸ್ತೂರಿ ನಿವಾಸ' ಟೈಟಲ್ ವಿವಾದ: ಅನುಮತಿಯೇ ಕೇಳಿಲ್ಲವೆಂದ ಭಗವಾನ್
'ಕಸ್ತೂರಿ ನಿವಾಸ' ಕನ್ನಡ ಜನಮಾನಸದಲ್ಲಿ ಬೆರೆತು ಹೋದ ಹೆಸರು. ದೊರೈ-ಭಗವಾನ್ ನಿರ್ದೇಶಿಸಿ ಡಾ.ರಾಜ್ಕುಮಾರ್ ನಟಿಸಿದ್ದ ಈ ಸಿನಿಮಾ ಸಿನಿಪ್ರಿಯರ ಸ್ಮೃತಿಪಟಲದಲ್ಲಿ ಹಾಗೆಯೇ ಉಳಿದುಬಿಟ್ಟಿದೆ.
Recommended Video
ಇದೀಗ ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರು ಇದೇ ಹೆಸರಿನ ಸಿನಿಮಾವನ್ನು ಘೋಷಿಸಿದ್ದಾರೆ. ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾಕ್ಕೆ 'ಕಸ್ತೂರಿ ನಿವಾಸ' ಎಂದೇ ಹೆಸರಿಡಲಾಗಿದೆ. ಇಂದು ಪೋಸ್ಟರ್ ಸಹ ಬಿಡುಗಡೆ ಆಗಿದೆ.
ಮೂಲ ಸಿನಿಮಾದ ನಿರ್ದೇಶಕರುಗಳಾದ ದೊರೈ-ಭಗವಾನ್ ಅವರಲ್ಲಿ ಎಸ್.ಕೆ.ಭಗವಾನ್ ಅವರು ಹೊಸ 'ಕಸ್ತೂರಿ ನಿವಾಸ' ಸಿನಿಮಾದ ಬಗ್ಗೆ ತುಸು ಅಸಮಾಧಾನಗೊಂಡೇ 'ಫಿಲ್ಮೀಬೀಟ್' ಜೊತೆ ಮಾತನಾಡಿ, 'ನಮ್ಮ ಸಿನಿಮಾದ ಹೆಸರನ್ನಿಟ್ಟಿರುವ ಅವರು ನನ್ನ ಅನುಮತಿಯನ್ನೇ ಪಡೆದಿಲ್ಲ' ಎಂದಿದ್ದಾರೆ.

ಫಿಲಂ ಛೇಂಬರ್ ಬಳಿ ವಿಚಾರಿಸುತ್ತೇನೆ: ಭಗವಾನ್
'ದಿನೇಶ್ ಬಾಬು ಅವರು 'ಕಸ್ತೂರಿ ನಿವಾಸ' ಸಿನಿಮಾ ಮಾಡುತ್ತಿರುವ ವಿಚಾರ ಈಗಷ್ಟೆ ಗೊತ್ತಾಗಿದೆ. ಅದು ಹೇಗೆ ಅವರು ಆ ಹೆಸರು ಇಟ್ಟಿದ್ದಾರೆ? ಹೆಸರನ್ನು ಹೇಗೆ ಬೇರೆಯವರಿಗೆ ಕೊಟ್ಟರು ಎಂಬುದನ್ನು ನಾನು ಫಿಲಂ ಛೇಂಬರ್ ನಲ್ಲಿ ವಿಚಾರಿಸುತ್ತೇನೆ' ಎಂದು ಹೇಳಿದರು ನಿರ್ದೇಶಕ ಭಗವಾನ್.

ಸೌಜನ್ಯಕ್ಕಾದರೂ ನನ್ನನ್ನು ಕೇಳಬೇಕಿತ್ತು: ಭಗವಾನ್
'ದಿನೇಶ್ ಬಾಬು ಅವರು ವಿದ್ಯಾವಂತರು, ತಿಳಿದವರು, ಸೌಜನ್ಯಕ್ಕಾದರೂ ನಮ್ಮನ್ನೊಮ್ಮೆ ಕೇಳಬೇಕಿತ್ತು. ಅವರು ಒಂದೊಮ್ಮೆ ನನ್ನನ್ನು ಅನುಮತಿ ಕೇಳಿದರೆ ಕೊಟ್ಟುಬಿಡುತ್ತೇನೆ. ಈ ವಯಸ್ಸಿನಲ್ಲಿ ಯಾರೊಂದಿಗೆ ನಾನು ಯುದ್ಧ ಮಾಡಲಿ, ಕೋರ್ಟು, ಕಚೇರಿ ಅಲೆಯುವ ವಯಸ್ಸು ನನ್ನದಲ್ಲ, ಅಷ್ಟೆ ಅಲ್ಲದೆ, ಸಿನಿಮಾ ಮಾಡುವವರಿಗೆ ಅಡ್ಡವಾಗಲು ನನಗೆ ಇಷ್ಟವಿಲ್ಲ' ಎಂದಿದ್ದಾರೆ 87 ವರ್ಷ ವಯಸ್ಸಿನ ಭಗವಾನ್.

'ಐಕಾನಿಕ್ ಸಿನಿಮಾಗಳ ಹೆಸರು ಬಳಿಸಿಕೊಳ್ಳುವುದು ಅಪಾಯಕಾರಿ'
'ಕಸ್ತೂರಿ ನಿವಾಸ, ಎರಡು ಕನಸು, ಜೀವನ ಚೈತ್ರ ಇಂಥಹಾ ಐಕಾನಿಕ್ ಸಿನಿಮಾಗಳ ಹೆಸರುಗಳನ್ನು ಇಟ್ಟು ಸಿನಿಮಾ ಮಾಡುವುದು ಸ್ವತಃ ನಿರ್ದೇಶಕ, ನಿರ್ಮಾಪಕರಿಗೆ ಅಪಾಯಕಾರಿ. ಸಿನಿಮಾ ಟೈಟಲ್ ನೋಡಿ ಬರುವ ಜನ ಮೂಲ ಸಿನಿಮಾದೊಂದಿಗೆ ಹೋಲಿಸಿ ನೋಡಿ, ಒಮ್ಮೆಗೆ ಸಿನಿಮಾ ಚೆನ್ನಾಗಿಲ್ಲ ಎಂದು ಬಿಡುತ್ತಾರೆ, ಒಂದೊಮ್ಮೆ ದಿನೇಶ್ ಬಾಬು ನನ್ನನ್ನು ಭೇಟಿಯಾದರೆ ಇದೇ ಸಲಹೆಯನ್ನು ಅವರಿಗೆ ಕೊಡುತ್ತೇನೆ' ಎಂದು ಕಾಳಜಿಯುಕ್ತವಾಗಿಯೇ ಮಾತನಾಡಿದರು ಭಗವಾನ್.

ಪೂಜಾ ಗಾಂಧಿ ಅನುಮತಿ ಕೇಳಿದ್ದರು: ಭಗವಾನ್
ಈ ಹಿಂದೆ ನಟಿ ಪೂಜಾ ಗಾಂಧಿ ಅಭಿನೇತ್ರಿ ಸಿನಿಮಾ ಮಾಡಿದಾಗ ಎರಡು ಕನಸು ಸಿನಿಮಾದ ದೃಶ್ಯ, ಹಾಡು ಬಳಸಿಕೊಳ್ಳಲು ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ಅನುಮತಿ ಕೇಳಿದರು. ಮನವಿ ಪತ್ರವನ್ನು ಸಹ ಕೊಟ್ಟಿದ್ದರು. ನಾನು ಸಂತೋಶದಿಂದಲೇ ಅನುಮತಿ ಕೊಟ್ಟಿದ್ದೆ. ಒಂದು ಸಿನಿಮಾದ ಹೆಸರು, ಹಾಡು, ದೃಶ್ಯಗಳನ್ನು ಬಳಸಿಕೊಳ್ಳುವಾಗ ಮೂಲ ನಿರ್ದೇಶಕ, ನಿರ್ಮಾಪಕರ ಅನುಮತಿ ಪಡೆಯುವುದು ಸೌಜನ್ಯ ಎಂದು ತುಸು ಬೇಸರದಿಂದಲೇ ನುಡಿದರು ಭಗವಾನ್.

ಅನುಮತಿ ಕೇಳಿದರೆ ಕೊಟ್ಟುಬಿಡುತ್ತೇನೆ: ಭಗವಾನ್
ಅಂತಿಮವಾಗಿ, ಒಂದೊಮ್ಮೆ ದಿನೇಶ್ ಬಾಬು ಅವರು ನನ್ನನ್ನು ಅನುಮತಿ ಕೇಳಿದರೆ ಸಂತೋಶದಿಂದಲೇ ಅನುಮತಿ ಕೊಡುತ್ತೇನೆ. ಸಿನಿಮಾಕ್ಕೆ ಅಡ್ಡಗಾಲು ಹಾಕುವ ಜಾಯಮಾನ ನನ್ನದಲ್ಲ, ನನ್ನ ಹಿರಿತನಕ್ಕೆ ಅದು ಸೂಕ್ತವೂ ಆಗುವುದಿಲ್ಲ. ಆದರೆ ಈ ರೀತಿಯ ಐಕಾನಿಕ್ ಸಿನಿಮಾಗಳ ಹೆಸರನ್ನು ಬಳಸುವಾಗ ಎಚ್ಚರದಿಂದ ಇರಬೇಕೆನ್ನುವುದು ನನ್ನ ಸಲಹೆ ಅಷ್ಟೆ. ಟೈಟಲ್ ನಿಂದ ಜನರನ್ನು ಸೆಳೆಯಬಹುದು ಆದರೆ ಕಂಟೆಂಟ್ ಕೆಟ್ಟದಾಗಿದ್ದರೆ ಜನ ಸೋಲಿಸಿಬಿಡುತ್ತಾರೆ ಎಂದರು ಭಗವಾನ್.


Click it and Unblock the Notifications











