ಶಿವಣ್ಣನ 'ಮಾಸ್ ಲೀಡರ್'ಗೆ ರಿಲೀಸ್ ಕಂಟಕ: ಬಿಡುಗಡೆ ಮಾಡುವಂತಿಲ್ಲ.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಮಾಸ್ ಲೀಡರ್' ಚಿತ್ರ ಆಗಸ್ಟ್ 11ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ 'ಮಾಸ್ ಲೀಡರ್'ಗಾಗಿ ಚಿತ್ರಮಂದಿರಗಳನ್ನ ಕಾಯ್ದಿರಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಡಲಿದೆ.
ಆದ್ರೆ, 'ಮಾಸ್ ಲೀಡರ್' ಸಿನಿಮಾ ಆಗಸ್ಟ್ 11 ಕ್ಕೆ ಬಿಡುಗಡೆ ಆಗದಂತೆ ನಿರ್ದೇಶಕ ಎ.ಎಂ.ಆರ್. ರಮೇಶ್ ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಮೂಲಕ ಶಿವಣ್ಣನ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಅನುಮಾನ.
ಎ.ಎಂ.ಆರ್. ರಮೇಶ್ ಅವರ ಬಳಿ ಇರುವುದು 'ಲೀಡರ್' ಟೈಟಲ್. ಈ ಸಮಸ್ಯೆ ಈ ಹಿಂದೆಯೇ ಬಗೆಹರಿದಿತ್ತು. ಆದ್ರೂ, ದಿಢೀರ್ ಅಂತ ಎ.ಎಂ.ಆರ್. ರಮೇಶ್ ತಡೆಯಾಜ್ಞೆ ತಂದಿದ್ದು ಯಾಕೆ? ಮುಂದೆ ಓದಿ......

'ಮಾಸ್ ಲೀಡರ್' ಬಿಡುಗಡೆಗೆ ಕಂಟಕ
ಆಗಸ್ಟ್ 11ಕ್ಕೆ 'ಮಾಸ್ ಲೀಡರ್' ರಿಲೀಸ್ ಆಗುತ್ತೆ ಎಂದು ಶಿವಣ್ಣ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರದ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ ನಿರ್ದೇಶಕ ಎ.ಎಂ.ಆರ್ ರಮೇಶ್. ಸಿನಿಮಾ ರಿಲೀಸ್ ಆಗದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟಿನಿಂದ ತಡೆ ತಂದಿದ್ದಾರೆ.

ತಡೆ ತಂದಿರುವುದು ಎ.ಎಂ.ಆರ್ ರಮೇಶ್ ಪತ್ನಿ
ನ್ಯಾಯಾಲಯದಿಂದ 'ಮಾಸ್ ಲೀಡರ್' ಚಿತ್ರಕ್ಕೆ ತಡೆ ತಂದಿರುವುದು ನಿರ್ದೇಶಕ ಎ.ಎಂ.ಆರ್ ರಮೇಶ್ ಅವರಲ್ಲ. ಅವರ ಪತ್ನಿ ಇಂದುಮತಿ. ಚಿತ್ರದ ನಿರ್ಮಾಪಕರಾಗಿ ಇಂದುಮತಿ ಅವರು ಪ್ರಕರಣ ದಾಖಲು ಮಾಡಿದ್ದು, ಅವರೇ ತಡೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸಿನಿಮಾವನ್ನ ಬಿಡುಗಡೆ ಮಾಡುವಂತಿಲ್ಲ
ಕೋರ್ಟ್ ಆದೇಶದ ಪ್ರಕಾರ ''ಈ ಪ್ರಕರಣ ಇತ್ಯಾರ್ಥವಾಗುವವರೆಗೂ 'ಮಾಸ್ ಲೀಡರ್' ಹಾಗೂ 'ಲೀಡರ್' ಹೆಸರಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗುವಂತಿಲ್ಲ ಎನ್ನಲಾಗಿದೆ.

'ಮಾಸ್ ಲೀಡರ್' ನಿರ್ಮಾಪಕ ಏನಂದ್ರು?
ಈ ಬಗ್ಗೆ ಮಾತನಾಡಿರುವ 'ಮಾಸ್ ಲೀಡರ್' ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ''ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ನ್ಯಾಯಾಲಯದಿಂದ ಬಿಡುಗಡೆ ನಿಲ್ಲಿಸುವಂತೆ ಯಾವುದೇ ಪತ್ರ ಬಂದಿಲ್ಲ. ಹಾಗಾಗಿ ಮಾತನಾಡುವುದು ಸಮಂಜಸವಲ್ಲ. ಪತ್ರ ಬಂದ ನಂತರ ಮಾತನಾಡುತ್ತೇನೆ'' ಎಂದರು.

ಆಗಸ್ಟ್ 11 'ಮಾಸ್ ಲೀಡರ್' ಬರಲ್ವಾ!
ಚಿತ್ರದ ಟೈಟಲ್ ವಿವಾದಕ್ಕೆ ಸಂಬಂಧಪಟ್ಟಂತೆ ಈಗ ಕಾನೂನ ಸಮರ ನಡೆಯುತ್ತಿದ್ದು, ಹೇಳಿದ ದಿನಾಂಕಕ್ಕೆ 'ಮಾಸ್ ಲೀಡರ್' ಬರುವುದು ಬಹುತೇಕ ಅನುಮಾನವಾಗಿದೆ. ಈ ಮಧ್ಯೆ 'ಮಾಸ್ ಲೀಡರ್' ಚಿತ್ರತಂಡ ಎ.ಎಂ.ರಮೇಶ್ ಅವರೊಂದಿಗೆ ಮಾತಿನ ಮೂಲಕ ಸಮಸ್ಯೆ ಬಗೆಹರಿಸಿಕೊಂಡರೇ ಸಿನಿಮಾ ರಿಲೀಸ್ ಆಗಬಹುದು.

ಟೈಟಲ್ ವಿವಾದ ಹಿನ್ನೋಟ
2011ರಲ್ಲೇ 'ಲೀಡರ್' ಟೈಟಲ್ ಹೊಂದಿದ್ದ ಎ.ಎಂ.ಆರ್. ರಮೇಶ್ ಮತ್ತು ತರುಣ್ ಶಿವಪ್ಪ ಅವರ ಮಧ್ಯೆ ಹಲವು ತಿಂಗಳುಗಳಿಂದ ಜಟಾಪಟಿ ನಡೆಯುತ್ತಲೇ ಇದೆ. ಈ ವಿಚಾರವಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಎ.ಎಂ.ಆರ್. ರಮೇಶ್ ಮತ್ತು ಚಿತ್ರತಂಡ ಪ್ರತಿಭಟನೆ ನಡೆಸಿದ್ದರು. ನಂತರ ಫಿಲ್ಮ್ ಚೇಂಬರ್ ನಲ್ಲಿ ಮಾತುಕತೆ ನಡೆಯಿತು. ಎಲ್ಲ ಮುಗಿದು ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲಿ ಈಗ ಮತ್ತೆ ವಿವಾದ ಭುಗಿಲೆದ್ದಿದೆ.


Click it and Unblock the Notifications











