ರೂಪಾ ಅಯ್ಯರ್ ಗೆ ಬ್ಲ್ಯಾಕ್ ಮೇಲ್ ; ಅಷ್ಟರಲ್ಲೇ ಜಸ್ಟ್ ಮಿಸ್ ಆಗಿದ್ಹೇಗೆ ನಿರ್ದೇಶಕಿ..?
ರೂಪಾ ಅಯ್ಯರ್ ಗೊತ್ತಲ್ಲವಾ..? ಕನ್ನಡ ಚಿತ್ರರಂಗದ ನಿರ್ದೇಶಕಿ. ಆರ್.ಚಂದ್ರು ಅವರಿಗಿಂತ ಮುನ್ನ, ಶ್ರೇಯಾ ಸರಣ್ ಅವರನ್ನ ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ. ಇಂಥ ರೂಪಾ ಅಯ್ಯರ್ ವಂಚನೆಗೊಳಗಾಗುವುದರಿಂದ ಸ್ವಲ್ಪದಲ್ಲಿರಲ್ಲಿಯೇ ತಪ್ಪಿಸಿಕೊಂಡಿದ್ದಾರೆ. ಸುತ್ತ ಮುತ್ತ ಮೋಸದ ಜಾಲ ಇದೆ ಹುಶಾರಾಗಿರಿ ಎಂಬ ಮನವಿಯನ್ನೂ ರೂಪಾ ಮಾಡಿಕೊಂಡಿದ್ದಾರೆ.
ಹೌದು, ಅಸಲಿಗೆ... ಜೆಟ್ ಏರ್ ವೇಸ್ʻನ ನರೇಶ್ ಗೋಯಲ್ ಅವರ ಮನಿಲಾಂಡ್ರಿಂಗ್ ಕೇಸಿನಲ್ಲಿ ವಿಚಾರಣೆಯ ನೆಪದಲ್ಲಿ ಕಿರಾತಕರ ಗುಂಪು ಒಂದು ರೂಪಾ ಅವರನ್ನ ಸಂಪರ್ಕಿಸಿತ್ತು. ಎಲ್ಲಿಯ ನರೇಶ್ ಗೋಯಲ್.. ಎಲ್ಲಿಯ ರೂಪಾ ಅಯ್ಯರ್.. ಅನುಮಾನ ಬರುವುದು ಸಹಜ. ಈ ಕಾರಣಕ್ಕೆ.. ಸುಳ್ಳಿನ ಮೇಲೆ ಇನ್ನೊಂದು ಸುಳ್ಳು ಹೇಳಿದ್ದ ಈ ತಂಡ ದೇಶದಲ್ಲಿ 247 ಜನರನ್ನು ಗುರುತಿಸಲಾಗಿದೆ. ನಿಮ್ಮ ಸಿಮ್ ಬಳಸಿ ದೇಶದ್ರೋಹಿ ದಂಧೆ ಮಾಡ್ತಿದ್ದಾರೆ ಎಂದು ಇವರನ್ನ ನಂಬಿಸಿತ್ತು.

ಮೊದಲೇ ಗಾಬರಿಯಾಗಿದ್ದ ರೂಪಾ ಈ ಮಾತನ್ನ ನಂಬಿದ್ದರು ಕೂಡ. ಯಾಕೆಂದರೆ ಇದೆಲ್ಲದರ ಜೊತೆಯಲ್ಲಿ ಕಾಲ್ʻನಲ್ಲಿ ಮಾತನಾಡುತ್ತಿರುವಾಗಲೇ ರೂಪಾ ಅಯ್ಯರ್ ಅವರಿಗೆ ಸಿಬಿಐ ಹಾಗೂ ಇಡಿಯಿಂದ ನೋಟಿಸ್ ಕೂಡಾ ಆ ತಂಡ ಕಳಿಸಿತ್ತು. ಇದು ಸಾಲದು ಎಂಬಂತೆ..ನಕಲಿ ಪೊಲೀಸ್ನನ್ನ ವಿಡಿಯೋ ಕಾಲ್ ಮೂಲಕ ರೂಪಾ ಅಯ್ಯರ್ ಅವರ ಜೊತೆ ಈ ತಂಡ ಮಾತನಾಡಿಸಿತ್ತು. ಈ ಎಲ್ಲ ಕಾರಣಗಳಿಂದ ಹೆಚ್ಚು ಕಡಿಮೆ 06-08 ಗಂಟೆ ದಿಕ್ಕೆಟ್ಟು ರೂಪಾ ಅಯ್ಯರ್ ಕುಳಿತಾಗ ಕೂಡಲೇ 30 ಲಕ್ಷ ಹಣ ಪಾವತಿ ಮಾಡಿ ಎಂಬ ಫರ್ಮಾನನ್ನ ಈ ಕಿಡಿಗೇಡಿಗಳ ಗುಂಪು ಹೊರಡಿಸಿತ್ತು. ರೂಪಾ ಅಯ್ಯರ್ ಗೆ ಅನುಮಾನ ಬಂದಿದ್ದು ಇಲ್ಲಿಯೇ.
ಕೂಡಲೇ ತನ್ನನ್ನ ಖೆಡ್ಡಾಗೆ ಬೀಳಿಸುವ ಯತ್ನ ನಡೆಯುತ್ತಿದೆ ಅನ್ನುವುದನ್ನ ಅರಿತ ರೂಪಾ ಅಯ್ಯರ್, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೆಸರನ್ನ ತೆಗೆದುಕೊಂಡರು. ಇನ್ನೇನು ಬಣ್ಣ ಬಯಲಾಯಿತು ಎಂದುಕೊಂಡ ಆ ಸೈಬರ್ ಕಳ್ಳರ ಗುಂಪು ಕಾಲ್ ಕಟ್ ಮಾಡಿ ಪೇರಿ ಕಿತ್ತಿದೆ.

ಸದ್ಯಕ್ಕೆ ಆನ್ಲೈನ್ ವಂಚಕರು ಪ್ರಭಾವಿಗಳನ್ನು ಯಾಮಾರಿಸಿ ಹಣ ದೋಚಲು ಮುಂದಾಗಿದ್ದಾರೆ. ವಂಚಕರು ನನ್ನನ್ನು ನಂಬಿಸಲು ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕೂಡ ಕಳುಹಿಸಿದ್ದಾರೆ. ಒಂದು ವೇಳೆ ಅವರ ಮಾತನ್ನು ನಂಬಿದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗಿತ್ತು ಎಂದು ರೂಪಾ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಇಂತಹ ಕರೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳು ಸಾವರ್ಜನಿಕರು, ಸೆಲೆಬ್ರಿಟಿಗಳಲ್ಲಿ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಸೈಬರ್ ಕ್ರೈಂಗೆ ದೂರನ್ನೂ ದಾಖಲಿಸಿದ್ದಾರೆ ರೂಪಾ ಅಯ್ಯರ್.
ಒಟ್ನಲ್ಲಿ ಸಿನಿಮಾ ನಟ-ನಟಿಯರ ಫೇಸ್ ಬುಕ್ ಪೇಜುಗಳನ್ನು ಕಬಳಿಸಲು ಮತ್ತು ಸಾಧ್ಯವಾದರೆ ಅವರನ್ನ ಯಾಮಾರಿಸಲು ಕಳ್ಳಗಣ್ಣುಗಳು ಸದಾ ಜಾಗೃತವಾಗಿರುತ್ತವೆ. ಇದಕ್ಕೆ ರೂಪಾ ಅಯ್ಯರ್ ಅವರ ಈ ಪ್ರಕರಣ ಮತ್ತೊಂದು ಸಾಕ್ಷಿ


Click it and Unblock the Notifications










