ಪಾಶ್ ಕಮಿಟಿ ರಚನೆಯಾದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಶುರುವಾಯ್ತಾ ಕಂಪನ ? ಎದ್ದಿದೆ ಅಪಸ್ವರದ ಕೂಗು..!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ .. ಕಿರುಕುಳ .. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ನಿರ್ಮಾಪಕರು ನಿರ್ದೇಶಕರಿಂದ ಹಿಡಿದು ಸ್ಟಾರ್ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.
ಆದರೂ ಕೂಡ ಕಾಮಾಂಧರ ಧೈರ್ಯ ಕಡಿಮೆಯಾಗಿಲ್ಲ. ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಮುಕ್ತಾಯವಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮಲಯಾಳಂ ಚಿತ್ರರಂಗದ ಕಾಮಕಾಂಡ ಜಗಜ್ಜಾಹೀರಾಗಿದೆ. ಹೇಮಾ ಆಯೋಗದ ವರದಿಯಿಂದ ಅಲ್ಲೋಲ.. ಕಲ್ಲೋಲವಾಗಿದೆ. ಇನ್ನೂ ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಎಲ್ಲ ಭಾಷೆಯ ಚಿತ್ರರಂಗದಲ್ಲಿ ಕೂಡ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ ಎನ್ನುವ ವಾದವನ್ನು ಈ ಹಿಂದೆ ಅನೇಕರು ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಂತೆ ನಮ್ಮಲ್ಲಿ ಕೂಡ ಒಂದು ಆಯೋಗ ರಚನೆಯಾಗಬೇಕೆಂದು ಪಟ್ಟನ್ನೂ ಹಿಡಿದಿದ್ದಾರೆ.

ಆದರೆ.. ಈ ವಾದಕ್ಕೆ ಮನ್ನಣೆ ನಿನ್ನೆಯಷ್ಟೇ. ಮಹಿಳಾ ಆಯೋಗ ಖಡಕ್ ಎಚ್ಚರಿಕೆಯನ್ನು ನೀಡಿದ ಬೆನ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಹನ್ನೊಂದು ಜನರ ಸದಸ್ಯರನ್ನೊಳಗೊಂಡ ಪಾಶ್ ಕಮಿಟಿಯನ್ನು ಫಿಲ್ಮ್ ಚೆಂಬರ್ ನಿನ್ನೆ ರಚಿಸಿದೆ. ಆದರೆ ಈಗ ಈ ಕಮಿಟಿ ರಚನೆಯಾಗಿ ಇನ್ನು 24 ಘಂಟೆಗಳಾಗಿಲ್ಲ. ಅಷ್ಟರಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಕಂಪನ ಶುರುವಾಗಿದೆ. ಪಾಶ್ ಕಮಿಟಿಯ ವಿರುದ್ಧ ಅಪಸ್ವರದ ಅಲೆ ಎದ್ದಿದೆ.
ಹೌದು, ಅಸಲಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧಿಕಾರ ಹಿಡಿದು ಕೂರಲು ಅನೇಕ ವರ್ಷಗಳಿಂದ ಅನೇಕರು ಕಸರತ್ತು ನಡೆಸುತ್ತಾನೇ ಬಂದಿದ್ದಾರೆ. ಈ ಕಸರತ್ತು ಈ ವರ್ಷ ಕೂಡ ಮತ್ತೆ ಆರಂಭವಾಗಿದೆ. ಇದೇ 14ರಂದು ಚುನಾವಣೆ ನಡೆಯಲಿದೆ. ನಾಮ ಪತ್ರ ಕೂಡ ಸಲ್ಲಿಕೆಯಾಗುತ್ತಿದೆ. ಹೀಗಿರುವಾಗ ಅಧಿಕಾರ ಇಲ್ಲದಿರುವಂತಹ ಪದಾಧಿಕಾರಿಗಳು ವಿಶೇಷವಾಗಿ ಅಧ್ಯಕ್ಷರಾದ ಎನ್.ಎಮ್.ಸುರೇಶ್ ತರಾತುರಿಯಲ್ಲಿ ಈ ಆಯೋಗವನ್ನು ರಚನೆ ಮಾಡಿದ್ದೇಕೆ ಎನ್ನುವ ಪ್ರಶ್ನೆಯನ್ನು ಈಗ ಬೆಂಗಳೂರ್ ಬಂದ್, ಮೊಂಡ, ಬೆಸ್ಟ್ ಫ್ರೆಂಡ್, ಒಲವಿನ ಓಲೆಯಂಥಾ ಚಿತ್ರಗಳನ್ನು ಮಾಡಿರುವ ಟೇಶಿ ವೆಂಕಟೇಶ್ ಕೇಳುತ್ತಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ಈ ಕುರಿತು ನಿರ್ಣಯವಾಗಿದೆಯಾ, ವಾಣಿಜ್ಯ ಮಂಡಳಿಯಲ್ಲಿರುವ ಸದಸ್ಯರಿಗೆ ಗೊತ್ತಾಗದಂತೆ ಈ ಸಮಿತಿಯನ್ನು ರಚನೆ ಮಾಡಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಟೇಶಿ ವೆಂಕಟೇಶ್ ಅವರದ್ದೆನ್ನಲಾದ ಆಡಿಯೋ ವಾಟ್ಸಾಫ್ನಲ್ಲಿ ಹರಿದಾಡುತ್ತಿದೆ.

ಅಂದ್ಹಾಗೇ ವಿಚಾರ ಯಾವುದೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವ ಮಾತು ಮೊದಲಿಂದ ಇದೆ. ಈ ಮಾತಿಗೆ ಒಂದು ಉದಾಹರಣೆ ಎನ್ನುವಂತೆ ಸೆಪ್ಟೆಂಬರ್ನಲ್ಲಿ ಇದೇ ವಾಣಿಜ್ಯ ಮಂಡಳಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರ ಸಮ್ಮುಖದಲ್ಲಿ ಚರ್ಚೆ ಮಾಡಲಾಗಿತ್ತು. ನಿರ್ದೇಶಕಿ ನಿರ್ಮಾಪಕಿ ಕವಿತಾ ಲಂಕೇಶ್, ನಟಿ ನೀತು ಸೇರಿ ಒಂದು ಬಣ ಸಮಿತಿ ರಚನೆಯಾಗಲೇಬೇಕೆನ್ನುವ ವಾದ ಮಾಡಿತ್ತು. ವಿಪರ್ಯಾಸ ಅಂದರೆ ಭಾವನಾ ರಾಮಣ್ಣ ಸೇರಿ ಕನ್ನಡ ಚಿತ್ರರಂಗದ ಹಿರಿಯ ನಾಯಕಿಯರಿಂದನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಹಲವು ನಿರ್ಮಾಪಕರು ಧ್ವನಿಗೂಡಿಸಿದ್ದರು. ಹಿರಿಯ ನಿರ್ಮಾಪಕ ಸಾ.ರಾ,ಗೋವಿಂದು ಕೂಡ ನಮ್ಮಲ್ಲಿ ಎಲ್ಲವೂ ಸರಿ ಇದೆ ಎಂದು ಮಾತನಾಡಿದ್ದರು.ಹೀಗೆ ವಿರೋಧ ಮಾಡಿದವರಲ್ಲಿ ಈ ಟೇಶಿ ವೆಂಕಟೇಶ್ ಕೂಡ ಒಬ್ಬರು.
ಹೀಗಾಗಿಯೇ ಟೇಶಿ ವೆಂಕಟೇಶ್ ಅವರ ಈ ನಡಾವಳಿ ಈಗ ಅನೇಕರ ಅನುಮಾನಕ್ಕೆ ಕಾರಣವಾಗಿದೆ. ಅವತ್ತು ಪಾಶ್ ಕಮಿಟಿಯ ವಿರೋಧವನ್ನೂ ಮಾಡಿ, ಇವತ್ತು ಆಯೋಗ ರಚನೆಯಾಗಿದ್ದಕ್ಕೆ ಕೆಂಡವನ್ನು ಕಾರುತ್ತಿರುವ
ಟೇಶಿ ವೆಂಕಟೇಶ್ ಅವರಿಗೆ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಚಿಂತೆ ಇಲ್ಲವಾ ಅನ್ನುವ ಪ್ರಶ್ನೆ ಕೂಡ ಈಗ ಕೇಳಿ ಬರುತ್ತಿದೆ. ಅವರೇ ಈ ಹಿಂದೆ ಹಾಗೂ ಈಗ ಹೇಳುವಂತೆ ಚಿತ್ರರಂಗದಲ್ಲಿ ಯಾವುದೇ ಲೈಂಗಿಕ ಕಿರುಕುಳದ ಸಮಸ್ಯೆ ಇಲ್ಲ. ಹಾಗಿದ್ದ ಮೇಲೆ ಆಯೋಗ ರಚನೆಯಾಗಿದ್ದಕ್ಕೆ ಭಯ ಪಡುವ ಅವಶ್ಯಕತೆಯಾದರೂ ಏನಿದೆ ಟೇಶಿ ವೆಂಕಟೇಶ್ ಸಾಹೇಬ್ರೇ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಇನ್ನು, ಟೇಶಿ ವೆಂಕಟೇಶ್ ಈ ಆಯೋಗದಲ್ಲಿ ಇಲ್ಲದಿರಬಹುದು ಆದರೆ ಅವತ್ತು ಟೇಶಿ ವೆಂಕಟೇಶ್ ಅವರ ಜೊತೆ ವಿರೋಧ ಮಾಡಿದ್ದ ಸಾ.ರಾ.ಗೋವಿಂದು ಈ ಹನ್ನೊಂದು ಜನರ ಸದಸ್ಯರಲ್ಲಿದ್ದಾರೆ. ಇದು ಕೂಡ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಎಲ್ಲೆಲ್ಲಿ ಯಾರ ಬಗ್ಗೆ ಈ ಆಯೋಗ ಮಾಹಿತಿ ಕಲೆ ಹಾಕುತ್ತಿದೆ ಎನ್ನುವ ವಿಚಾರ ಗೊತ್ತಾಗಬೇಕೆಂಬ ಇರಾದೆಯೊಂದಿಗೆ ಸಾರಾ ಗೋವಿಂದು ಅವರ ಹೆಸರನ್ನು ಈ ಹನ್ನೊಂದು ಜನರಲ್ಲಿ ಸೇರಿಸಲಾಗಿದೆಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.



Click it and Unblock the Notifications











