ಎಷ್ಟೋ ವರ್ಷಗಳ ಹಿಂದಿನ ತಪ್ಪಿಗೆ ಇಂದು ಬಹಿರಂಗವಾಗಿ ಕ್ಷಮೆ ಕೇಳಿದ ನಿರ್ದೇಶಕ ಅಶೋಕ್ ಕಶ್ಯಪ್ ಪತ್ನಿ
ಲೇಖಕಿ ಹಾಗೂ ನಿರ್ದೇಶಕಿ ರೇಖಾರಾಣಿ ಸಾಮಾಜಿಕ ಜಾಲತಾಣದಲ್ಲಿ ಪತಿಗೆ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಸುದ್ದಿಯಲ್ಲಿದ್ದಾರೆ. ಬರವಣಿಗೆ, ಸಿನಿಮಾ ಅಂತ ಬ್ಯುಸಿ ಇರುತ್ತಿದ್ದ ರೇಖಾರಾಣಿ ಎಷ್ಟೋ ವರ್ಷಗಳ ಹಿಂದೆ ಮಾಡಿದ ತಪ್ಪಿಗೆ ಇಂದು ಬಹಿರಂಗವಾಗಿ ಪತಿ ಅಶೋಕ್ ಕಶ್ಯಪ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಅಂದು ಆ ಒಂದು ತಪ್ಪು ಮಾಡದಿದ್ದರೆ ಪತಿ ಅಶೋಕ್ ಕಶ್ಯಪ್ ಇಂದು ದೊಡ್ಡ ನಟನಾಗುತ್ತಿದ್ದರೇನೊ ಎಂದು ಕೊರಗುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಮತ್ತು ನಟ ಅಶೋಕ್ ಕಶ್ಯಪ್ ಇತ್ತೀಚಿಗೆ ಧ್ವಜ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪತಿಯ ಪ್ರತಿಭೆ ಮತ್ತು ಅದೃಷ್ಟವನ್ನು ಕಟ್ಟಿಹಾಕಿದ್ದಕ್ಕಾಗಿ ಪದೇಪದೇ ಕ್ಷಮೆ ಕೇಳುತ್ತಿರುವುದಾಗಿ ರೇಖಾರಾಣಿ ಹೇಳಿದ್ದಾರೆ. ಅಂದು ಮಾಡಿದ ತಪ್ಪಿಗೆ ಈಗ ಬೇಸರಪಟ್ಟುಕೊಳ್ಳುತ್ತಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಅಷ್ಟಕ್ಕೂ ರೇಖಾರಾಣಿ ಮಾಡಿದ ತಪ್ಪಾದರೂ ಏನು? ಪೋಸ್ಟ್ ನಲ್ಲಿ ಏನಿದೆ? ಮುಂದೆ ಓದಿ...

ರೇಖಾರಾಣಿ ಮತ್ತು ಅಶೋಕ್ ಕಶ್ಯಪ್ ಅವರದ್ದು ಪ್ರೇಮ ವಿವಾಹ
ರೇಖಾರಾಣಿ ಮತ್ತು ಅಶೋಕ್ ಕಶ್ಯಪ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು. ಇಬ್ಬರ ನಡುವೆ ಆಗಾಧವಾದ ಪ್ರೀತಿ. ಒಬ್ಬರಿಗೊಬ್ಬರು ಪ್ರಾಣ ಕೊಡಲು ತಯಾರಾಗಿದ್ದರು. ಆ ಸಮಯದಲ್ಲಿ ಅಶೋಕ್ ಕಶ್ಯಪ್ ಅವರಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತೆ. ಆದರೆ ಪತ್ನಿ ರೇಖಾ ಅವರಿಗೆ ಇಷ್ಟ ಇರುವುದಿಲ್ಲ. ಪತಿ ಎಲ್ಲಿ ಕೈತಪ್ಪಿ ಹೋಗುತ್ತಾರೆ ಎನ್ನುವ ಆತಂಕದಲ್ಲಿ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ರೇಖಾ ಒಪ್ಪಿಕೊಳ್ಳುವುದಿಲ್ಲ. ಪತ್ನಿಯ ಹಠ ನೋಡಿ ಅಶೋಕ್ ಕೂಡ ಸಿನಿಮಾ ಮಾಡದಿರಲು ನಿರ್ಧರಿಸುತ್ತಾರೆ. ಈ ಘಟನೆಯ ಬಗ್ಗೆ ರೇಖಾರಾಣಿ ಬೇಸರದಿಂದ ಬರೆದುಕೊಂಡಿದ್ದಾರೆ.

ಇಬ್ಬರೂ ಒಬ್ಬರಿಗೊಬ್ಬರು ಪ್ರಾಣ ಕೊಡಲು ತಯಾರಾಗಿದ್ದೆವು
"ನನ್ನನ್ನು ಕ್ಷಮಿಸಿಬಿಡಿ ಅಶೋಕ್. ನಾನೀಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ. ನಾನು ಮತ್ತು ಅಶೋಕ್ ಕಶ್ಯಪ್ ಇಬ್ಬರೂ ಪ್ರೀತಿಸಲು ಕಾರಣ. ನಾವಿಬ್ಬರೂ ಸಮಾನಾಂತರ ದುಃಖಿಗಳೆಂದು. ವೈಯಕ್ತಿಕ ಜೀವನದಲ್ಲಿ ಬಹಳ ದುರಂತ, ಸೋಲು ಮತ್ತು ನೋವು ಅನುಭವಿಸಿದ್ದ ನಾವಿಬ್ಬರೂ ಆ ಸೋಲಿನ ಮೇಲೇ ಗೆಲುವಿನ ಹೆಜ್ಜೆ ಹಾಕಲು ನಿರ್ಧರಿಸಿ ಮದುವೆಯಾದೆವು. ಬಹುಶಃ ಹಿಂದಿನ ಬದುಕಿನ ಕಹಿ ಘಟನೆಗಳಿಂದಿರಬಹುದು ಇಬ್ಬರೂ ತುಂಬಾ ಪೊಸೆಸಿವ್ ಆಗಿದ್ದೆವು. ಇಬ್ಬರೂ ಒಬ್ಬರಿಗೊಬ್ಬರು ಪ್ರಾಣ ಕೊಡಲು ತಯಾರಾಗಿದ್ದೆವು. ನಮ್ಮಿಬ್ಬರನ್ನು ಬಿಟ್ಟು ಮೂರನೆಯವರ ಬಳಿ ನಮ್ಮಿಬ್ಬರಲ್ಲಿ ಯಾರೇ ಸ್ನೇಹದಿಂದ ನಗುತ್ತಾ ಮಾತನಾಡಿದರೂ ಮನೆಯಲ್ಲಿ ಬೆಂಕಿ ಭುಗಿಲೇಳುತ್ತಿತ್ತು."

ಅಶೋಕ್ ನನ್ನ ಕೈತಪ್ಪಿ ಹೋಗೇಬಿಡುತ್ತಾರೆ ಎಂಬ ಆತಂಕ
"ಅಂತಹ ಸಮಯದಲ್ಲಿಯೇ ಕನ್ನಡದ ಪ್ರಖ್ಯಾತ ನಿರ್ಮಾಪಕ ವಿತರಕರಾದ ಕೆ.ಆರ್.ಪ್ರಭು (ಕನ್ನಡದಲ್ಲಿ ಉಲ್ಟಾಪಲ್ಟಾ ಸಿನೆಮಾದ ವಿತರಕರು) ಅಶೋಕ್ ಗೆ ತಮಿಳು ಸಿನೆಮಾ ನಿರ್ದೇಶಿಸುವ-ನಟಿಸುವ ಅವಕಾಶ ನೀಡಿದರು. ಸಿನೆಮಾದ ಟೈಟಲ್ 'ಅಂಬುಟ್ಟು ಇಂಬುಟ್ಟು ಎಂಬುಟ್ಟು' (ಅಷ್ಟು, ಇಷ್ಟು, ಎಷ್ಟು ಎಂದರ್ಥ). ಉಲ್ಟಾಪಲ್ಟಾ ಅಭೂತಪೂರ್ವ ಯಶಸ್ವಿಯಾದ್ದರಿಂದ ಅದೇ ಹಂದರದಲ್ಲಿ ಮತ್ತೊಂದು ಹೊಸ ಕಥೆ ಬರೆಸಿ ತಮಿಳಿನಲ್ಲಿ ನಿರ್ಮಿಸಲು ಮುಂದಾದರು. ಅಶೋಕ್ ಕಶ್ಯಪ್ ನಿರ್ದೇಶನ ಎಂದಷ್ಟೇ ಖುಷಿಯಾಗಿದ್ದ ನನಗೆ ಕಡೆಗೆ ಅವರೇ ಹೀರೋ ಆಗಿ ನಟಿಸಲಿ ಎಂದು ನಿರ್ಮಾಪಕರು ಹೇಳಿದಾಗ ಮಾತ್ರ .ಅದೇಕೋ ಅಂದು. ಆ ಘಳಿಗೆಯಿಂದಲೇ ಅಶೋಕ್ ನನ್ನ ಕೈತಪ್ಪಿ ಹೋಗೇಬಿಡುತ್ತಾರೆ ಎಂದೆನಿಸಿ ಸಿನೆಮಾ ಸಹವಾಸವೇ ಬೇಡ ಎಂದು ಅತ್ತು ಹಠಮಾಡಲು ಪ್ರಾರಂಭಿಸಿದೆ."

ನನ್ನ ವರ್ತನೆ ಬಹಳ ನೀಚವಾಗಿ ಕಾಣಲು ಪ್ರಾರಂಭವಾಯ್ತು
"ಅಶೋಕ್ ಕೂಡಾ ನನ್ನನ್ನು ನೋಯಿಸದಿರಲು ಸಿನೆಮಾದಲ್ಲಿ ನಟಿಸೊಲ್ಲ ಎಂದರು. ಅದೇನು ಅದೃಷ್ಟವೋ ದುರಾದೃಷ್ಟವೋ ಹೀರೋ ಆಗಲು ಬಂದವರೆಲ್ಲಾ ಯಾವ್ಯಾವುದೋ ವಿಚಿತ್ರ ಕಾರಣಗಳಿಂದ ಕಳಚಿಕೊಂಡರು. ಮತ್ತೆ ಸಿನೆಮಾದಲ್ಲಿ ನಟಿಸುವ ಅವಕಾಶ ಅಶೋಕ್ ಪಾಲಿಗೇ ಬಂತು. ಇಡೀ ಸಿನೆಮಾ ಅಶೋಕ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದೇ( ಕಾಡಿದ್ದೇ) ಆಯ್ತು. ನನ್ನ ವರ್ತನೆ, ಪೊಸೆಸಿವ್ ನೆಸ್ ಇವೆಲ್ಲಾ ನನಗೇ ಬಹಳ ನೀಚವಾಗಿ ಕಾಣಲು ಪ್ರಾರಂಭವಾಯ್ತು."

ತಮಿಳು ಸಿನಿಮಾದಲ್ಲಿ ಅಶೋಕ್ ಅಭಿನಯ
"ನನ್ನ ಆತಂಕ, ಅಭದ್ರತೆ ಭಾವನೆಗಳನ್ನು ನೋಡಲಾಗದೆ ಅಶೋಕ್ ಸಿನೆಮಾದಲ್ಲಿ ನಟಿಸುವ ನಿರ್ಧಾರದಿಂದ ಸ್ವಲ್ಪ ಹಿಂದೆ ಸರಿದು, ನಾಯಕನಾಗಿ ನಟಿಸಲು ಬಂದ ಅವಕಾಶಗಳನ್ನು ನಿರಾಕರಿಸಿದರು. 'ಪ್ರಪಂಚದಲ್ಲಿ ನೀನೊಬ್ಬಳು ನನ್ನ ಜೊತೆಗಿರಮ್ಮ. ನಿನಗಾಗಿ ಏನು ಬೇಕಾದರೂ ತ್ಯಾಗಮಾಡಬಲ್ಲೆ. ನನಗೆ ನನ್ನ ಫ್ಯಾಮಿಲಿ ಮುಖ್ಯ' ಎಂದುಬಿಟ್ಟರು. ಸಿನೆಮಾ ಮುಗಿಯುವಹೊತ್ತಿಗೆ ಅಶೋಕ್ ನನ್ನ ಜೊತೆ ಬಹಳ ಪಾರದರ್ಶಕವಾಗಿ ಬದುಕುತ್ತಿದ್ದಾರೆಂದು ಅರ್ಥವಾಗಿತ್ತು. ಅಶೋಕರ ಉನ್ನತ ವ್ಯಕ್ತಿತ್ವ ಅರ್ಥವಾಗಿ ನಾನು ಮತ್ತೆ ಸಿನೆಮಾಗಳಲ್ಲಿ ನಟಿಸಿ ಎಂದು ಒಪ್ಪಿಸುವಷ್ಟರಲ್ಲಿ ನಮ್ಮ ಧಾರಾವಾಹಿ ನಂದಗೋಕುಲ ಪ್ರಾರಂಭಿಸಿದೆವು."

ಪದೇಪದೇ ಅವರಲ್ಲಿ ಕ್ಷಮೆ ಕೇಳುತ್ತಿರುತ್ತೇನೆ
"ಅದರ ಹಿಂದೆ ಕ್ಯಾನ್ಸರ್ ಬಂದು ಅದರ ಜೊತೆ ಹೋರಾಟ. ಬೇರೆ ಬೇರೆ ಪ್ರಾಜೆಕ್ಟ್ ಗಳು. ಈಗ. ಈ ತಮಿಳು ಸಿನೆಮಾ ನೋಡಿದಾಗಲೆಲ್ಲಾ ಅಶೋಕ್ ಅವರ ಪ್ರತಿಭೆ, ಅದೃಷ್ಟವನ್ನು ಕಟ್ಟಿಹಾಕಿದ್ದಕ್ಕಾಗಿ ಕೊರಗುತ್ತೇನೆ, ಪದೇಪದೇ ಅವರಲ್ಲಿ ಕ್ಷಮೆ ಕೇಳುತ್ತಿರುತ್ತೇನೆ. ಪ್ರೀತಿಯ ಹೆಸರಲ್ಲಿ ನಮ್ಮ ಸಣ್ಣತನಗಳು ಅದೃಷ್ಟದ ಬಾಗಿಲನ್ನು ಹೇಗೆ ಮುಚ್ಚಿಸುತ್ತದೆಂಬುದಕ್ಕೆ ನಾನೇ ಉದಾಹರಣೆಯಾಗಿಬಿಟ್ಟೆ. ನಮ್ಮ 'ಪ್ರೀತಿಯಿಂದ' ಧಾರಾವಾಹಿಯಲ್ಲಿ ಅಶೋಕ್ ಅವರಿಂದ ಬಹಳ ಒಳ್ಳೆಯ ಪಾತ್ರಮಾಡಿಸಿ ಅಲ್ಪಸ್ವಲ್ಪ ಸಮಾಧಾನಿಸಿಕೊಂಡೆ. ಆದರೂ ಈ ಸಿನೆಮಾ ನೋಡಿದಾಗ ಮಾತ್ರ ಇಂದಿಗೂ ಪಶ್ಚಾತ್ತಾಪದಿಂದ ಕೊರಗುತ್ತೇನೆ." ಎಂದು ಪತಿಯಲ್ಲಿ ಕ್ಷಮೆಕೇಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











