ಹಿಂದಿ ಹೇರಿಕೆಗೆ ಖಂಡನೆ: 'ಹುಟ್ಟಿದಾಗಿನಿಂದ ಗೊತ್ತಿರುವುದು ಕನ್ನಡ ಒಂದೇ' ಎಂದ ವಿಜಯ್
ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್ ಆಚರಣೆಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾ ನಟ ಹಾಗು ನಿರ್ದೇಶಕರು ಸೇರಿದಂತೆ ಅನೇಕರು ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.
'ಆ ದಿನಗಳು' ಖ್ಯಾತಿಯ ಚೇತನ್, ಪ್ರಕಾಶ್ ರಾಜ್, ಧನಂಜಯ್, ಕವಿರಾಜ್, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಿ ಟ್ವೀಟ್ ಮಾಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಟ್ವೀಟ್ ಮಾಡಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದಿದ್ದಾರೆ. 'ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ' ಎನ್ನುವ ಮೂಲಕ ಕನ್ನಡ ಪರ ನಿಂತಿದ್ದಾರೆ. ಇದೀಗ ನಟ ದುನಿಯ ವಿಜಯ್ ಸಾಮಾಜಿಕ ಜಾಲತಾಣದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

ಹುಟ್ಟಿದಾಗಿನಿಂದಲೂ ಗೊತ್ತಿರುವುದು ಕನ್ನಡ ಒಂದೆ
"ಹಿಂದಿ ದಿವಸ್ ಆಚರಿಸಲು ನಾವು ಹಿಂದಿ ಭಾಷಿಕರಲ್ಲ, ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಹಿಂದಿಯೂ ಅಲ್ಲ. ನನಗೆ ಹುಟ್ಟಿದಾಗಿನಿಂದಲೂ ಗೊತ್ತಿರುವುದು ಕನ್ನಡ ಒಂದೆ. ಆಗಿನಿಂದಲೂ ನಾನು ನಮ್ಮ ಕನ್ನಡದ ಮೇಲೆ ಬೇರೆ ಭಾಷೆಗಳ ಆಕ್ರಮಣ ನಮ್ಮ ಮೇಲೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮಾತೃಭಾಷೆ, ಜೀವನ ಮತ್ತು ಜೀವನ ಶೈಲಿಯನ್ನು ಕಲಿಸುತ್ತದೆ."

ಕನ್ನಡದ ಮೇಲಿನ ಶ್ರದ್ಧೆ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ
"ಹಾಗಂತ ನಾನು ಹಿಂದಿ ಕಲಿಯುವುದೇ ಇಲ್ಲ ಎಂದು ಹೇಳುತ್ತಿಲ್ಲ. ಕಲಿಯುತ್ತೇನೆ, ಅದರ ಅವಶ್ಯಕತೆ ನನಗೆ ಎಷ್ಟಿದಿಯೋ ಅಷ್ಟನ್ನು ಮಾತ್ರ. ಅದನ್ನು ಬಿಟ್ಟು ಸಂಪೂರ್ಣವಾಗಿ ನಮ್ಮ ಮೇಲೆ ಹೇರಲು ಬಂದರೆ ನಾವೆಂದು ಸುಮ್ಮನೆ ಕೂರುವುದಿಲ್ಲ. ಕನ್ನಡದ ಬಗೆಗಿನ ಶ್ರದ್ಧೆ ಇಂದು ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ."

ನಮ್ಮನ್ನು ಬದುಕಲು ಬಿಡಿ
"ಪ್ರತಿಯೊಬ್ಬ ಮನುಷ್ಯ ಜೀವನ ಪ್ರೀತಿಗಾಗಿ ಹಾತೋರೆಯುತ್ತಾನೆ. ಅದೇ ರೀತಿ ತನ್ನ ಅಸ್ಮಿತೆಗಾಗಿಯೂ ಆತ ಹಂಬಲಿಸುತ್ತಾನೆ. ನಾವು ಕನ್ನಡಿಗರು ಯಾವಾಗಲೂ ನಮ್ಮ ಕನ್ನಡತನದ ಅಸ್ಮಿತೆಗಾಗಿ ಹಂಬಲಿಸೋಣ. ನಮ್ಮ ಸಂವಿಧಾನದಂತೆ ನಾವು ಬದುಕುತ್ತಿದ್ದೇವೆ, ಬದುಕಲು ಬಿಡಿ, ಹಿಂದಿ ಹೇರಿಕೆಯನ್ನು ಎಂದಿಗೂ ಸಹಿಸುವುದಿಲ್ಲ. ಜೈ ಕರ್ನಾಟಕ ಮಾತೆ. ದಿನವೂ ಕನ್ನಡ. ಅನುದಿನವೂ ಕನ್ನಡ"
Recommended Video

ರಿಷಬ್ ಶೆಟ್ಟಿ ಟ್ವೀಟ್
ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ, "ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ‘ಅಮ್ಮ' ಪದದಿಂದ ‘ಅ' ತೆಗೆದು ‘ಮಾ' ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ." ಎಂದು ಹೇಳುವ ಮೂಲಕ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.


Click it and Unblock the Notifications











