ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು, ಇವತ್ತಿನ ತುರ್ತು ವಿಷಯ ಯಾವುದಾಗಬೇಕಿತ್ತು?
ಕಳೆದೊಂದು ವಾರದಿಂದ ದೇಶಾದ್ಯಂತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹಾಗಾಗಿ ಈ ಬಗ್ಗೆ ರಾಜ್ಯದಲ್ಲಿ ಭಾರ ಚರ್ಚೆ ನಡೀತಿದೆ. ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿ ಪ್ರಸಾರವಾಗುತ್ತಲೇ ಇದೆ.
ಕಳೆದ ಮಂಗಳವಾರ(ಜೂನ್ 11) ರಂದು ಮೈಸೂರಿನಲ್ಲಿ ಪೊಲೀಸರು ನಟ ದರ್ಶನ್ ವಶಕ್ಕೆ ಪಡೆದಿದ್ದರು. ಬಳಿಕ ಪವಿತ್ರಾ ಗೌಡ ಕೂಡ ಎ1 ಆಗಿ ವಿಚಾರಣೆ ಎದುರಿಸುವಂತಾಯಿತು. ಮೊದಲಿಗೆ 6 ದಿನ ಬಳಿ 5 ದಿನ 13 ಜನ ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿತ್ತು. ಹಲವು ಕೋನಗಳಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳ, ಶವ ಬಿದ್ದಿದ್ದ ಸ್ಥಳ, ಆರೋಪಿಗಳು ಓಡಾಡಿದ ಜಾಗಗಳಿಗೆ ಹೋಗಿ ಸ್ಥಳ ಮಹಜರು ನಡೆಸಲಾಗುತ್ತಿದೆ.

ಇನ್ನು ಪ್ರಕರಣದ ತನಿಖೆಯ ಬಗ್ಗೆ ತರಹೇವಾರಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಈ ಬಗ್ಗೆ ನಿರ್ದೇಶನ ಮಂಸೋರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯದ ಎರಡು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ, 'ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು' ಎಂದು ಬರೆದು ಮಾಧ್ಯಮಗಳಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.
ನಿರ್ದೇಶಕ ಮಂಸೋರೆ ಪೋಸ್ಟ್
ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು .
1. ಭೂತಕಾಲದ ಕೊಲೆ : ಈ ಕೊಲೆಯೊಂದರಲ್ಲಿ ಖ್ಯಾತ ಸಿನೆಮಾ ನಟ ಮುಖ್ಯ ಆರೋಪಿ. ಪ್ರಕರಣ ತನಿಖಾ ಹಂತದಲ್ಲಿದೆ, ಅಂತಿಮ ತೀರ್ಪನ್ನು ನ್ಯಾಯಾಲಯ ನೀಡುತ್ತದೆ. ಈ ಪ್ರಕರಣಕ್ಕೆ ಮಾಧ್ಯಮಗಳು ಇಪ್ಪತ್ತನಾಲ್ಕು ಗಂಟೆಗಳ ಸ್ಫೋಟಕ ಸಮಯವನ್ನು ನಿಗದಿಪಡಿಸಿದ್ದಾರೆ. ಭವಿಷ್ಯತ್ತಿನಲ್ಲಿ ಈ ಕೊಲೆ ಪ್ರಕರಣದಿಂದಾಗಿ ಸಮಾಜದ ಮೇಲೆ ಉಂಟಾಗಬಹುದಾದ ತೀವ್ರತೆಯನ್ನು ನೀವೇ ನಿರ್ಧರಿಸಿ.
2. ಭವಿಷ್ಯತ್ತಿನಲ್ಲಿ ನಡೆಯಲಿರುವ ಸಾಮೂಹಿಕ ಮರಣ ಹೋಮ : ಒಕ್ಕೂಟದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು, ರಾಜ್ಯದ ಲೋಕಸಭಾ ಸದಸ್ಯರೊಬ್ಬರು ಒಕ್ಕೂಟದ ಸರ್ಕಾರದಲ್ಲಿ ಮಂತ್ರಿಯಾದ ಕೂಡಲೇ, ರಾಜ್ಯದ ಸಂಡೂರಿನ ಬಳಿ ಗಣಿಕಾರಿಕೆಗೆ ಅನುಮತಿ ನೀಡುವ ಕಡತವೊಂದಕ್ಕೆ ಸಹಿ ಮಾಡಿದ್ದಾರೆ. ಇದರಿಂದ ಕೊಲೆಯಾಗುವುದು ಸಾವಿರಾರು ಮರಗಳು. ಪ್ರಕೃತಿಯ ನಾಶ.
ಇದರಿಂದಾಗಲಿರುವ ಪರಿಣಾಮ ವಾತಾವರಣದಲ್ಲಿ ಅಸಮತೋಲನ, ಮುಂದಿನ ತಲೆಮಾರಿಗೆ ಹಾನಿಕಾರಿಕ ಪರಿಸರ. ಇದಕ್ಕೆ ಮಾಧ್ಯಮಗಳು ಮೀಸಲಿಟ್ಟಿರುವ-ನಿಗಧಿಪಡಿಸಿರುವ ಸಮಯವೆಷ್ಟು? ಈ ಕೊಲೆಗಳಾದರೆ ಆಗಲಿರುವ ದುಷ್ಪರಿಣಾಮದ ತೀವ್ರತೆಯ ಬಗ್ಗೆ ಸಮಾಜದಲ್ಲಿ ಆಗುತ್ತಿರುವ ಚರ್ಚೆಗಳೆಷ್ಟು? ಮಾಧ್ಯಮ ಹಾಗೂ ಸಮಾಜ ಚಿಂತಿಸಿ ಆದ್ಯತೆ ನೀಡಬೇಕಾದ ಇವತ್ತಿನ ತುರ್ತು ವಿಷಯ ಯಾವುದಾಗಬೇಕಿತ್ತು? ಯಾವುದಾಗಿದೆ? ನೀವೇ ನಿರ್ಧರಿಸಿ" ಮಂಸೋರೆ ಬರೆದುಕೊಂಡಿದ್ದಾರೆ.
ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (KIOCL) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಹೆಚ್. ಡಿ ಕುಮಾರಸ್ವಾಮಿ ಸಹಿ ಹಾಕಿರುವ ಬಗ್ಗೆ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದೆ. 'ಸೇವ್ ಸಂಡೂರು ಫಾರೆಸ್ಟ್' ಎನ್ನುವ ಅಭಿಯಾನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಬಳ್ಳಾರಿಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣ ಅದಿರು ಗಣಗಾರಿಕೆಗೆ ವಿರೋಧ ಶುರುವಾಗಿದೆ.
ಸ್ವಾಮಿಮಲೈ ಬ್ಲಾಕ್ನ ಒಟ್ಟು 470.40 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ನಿಧಾನವಾಗಿ 99 ಸಾವಿರ ಮರಗಳನ್ನು ಕಡಿಯಬೇಕಾಬಹುದು ಎನ್ನುವ ಅಂದಾಜಿದೆ. ಇದೇ ಕಾರಣಕ್ಕೆ ಪರಸರ ಪ್ರೇಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಗಳು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.


Click it and Unblock the Notifications










