ಅಖಿಲಾ ಜೊತೆ ಸಪ್ತಪದಿ ತುಳಿದ ರಾಷ್ಟ್ರಪ್ರಶಸ್ತಿ ನಿರ್ದೇಶಕ ಮಂಸೋರೆ
'ರಾಷ್ಟ್ರ ಪ್ರಶಸ್ತಿ' ವಿಜೇತ ನಿರ್ದೇಶಕ ಮಂಸೋರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಂಸೋರೆ ಸ್ವಾತಂತ್ರ್ಯ ದಿನಾಚರಣೆಯ ದಿನ ಅಖಿಲಾ ಜೊತೆ ಸಪ್ತಪದಿ ತುಳಿದರು. ಸರಳವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಅಖಿಲಾ ಜೊತೆ ಮಂಸೋರೆ ವೈವಾಹಿಕ ಬದುಕಿನ ಪಯಣ ಆರಂಭಿಸಿದ್ದಾರೆ.
ಕೋವಿಡ್ ಕಾರಣದಿಂದ ಕೇವಲ ಕುಟುಂಬಸ್ಥರು, ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಜುಲೈ 4 ರಂದು ನಿರ್ದೇಶಕ ಮಂಸೋರೆ ಮತ್ತು ಅಖಿಲಾ ನಿಶ್ಚಿತಾರ್ಥ ನಡೆದಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡಿದ್ದರು. ಅಗಸ್ಟ್ 15ಕ್ಕೆ ವಿವಾಹ ನಿಶ್ಚಯವಾಗಿರುವುದಾಗಿ ಈ ಹಿಂದೆಯೇ ವರದಿಯಾಗಿತ್ತು.

2014ರಲ್ಲಿ ಮಂಸೋರೆ ನಿರ್ದೇಶನದಲ್ಲಿ ತೆರೆಕಂಡಿದ್ದ 'ಹರಿವು' ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. 'ಹರಿವು' ಸಿನಿಮಾದಲ್ಲಿ ಸಂಚಾರಿ ವಿಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ನಂತರ 2018ರಲ್ಲಿ 'ನಾತಿಚರಾಮಿ' ಸಿನಿಮಾ ಬಿಡುಗಡೆಯಾಗಿತ್ತು. ಶ್ರುತಿ ಹರಿಹರನ್, ಸಂಚಾರಿ ವಿಜಯ್, ಶರಣ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೂ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಜೊತೆಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಶ್ರುತಿ ಹರಿಹರನ್ಗೆ ಲಭಿಸಿತ್ತು.
ಇತ್ತೀಚಿಗಷ್ಟೆ 'ಆಕ್ಟ್ 1978' ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ಶ್ರುತಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ಇನ್ನು ಮಂಸೋರೆ ನಿರ್ದೇಶನದಲ್ಲಿ 'ರಾಣಿ ಅಬ್ಬಕ್ಕ' ಕುರಿತು ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರಮುಖ ಪಾತ್ರ ಸದ್ಯಕ್ಕೆ ಪ್ರಕಟವಾಗಿಲ್ಲ.


Click it and Unblock the Notifications











