ನಿರ್ದೇಶಕ ನಾಗಶೇಖರ್ಗೆ 50 ಲಕ್ಷ ವಂಚನೆ
ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ನಾಗಶೇಖರ್ ತಮಗೆ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮನೆ ಖರೀದಿ ವಿಚಾರದಲ್ಲಿ ನಾಗಶೇಖರ್ ಅವರಿಗೆ ವಂಚನೆ ಆಗಿದೆಯಂತೆ. ಮನೆ ಖರೀದಿಗೆ ನಾಗಶೇಖರ್ ಮುಂಗಡ ಹಣವನ್ನು ನೀಡಿದ್ದರು. ಆದರೆ ಮುಂಗಡ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಅವರು ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ತಮಗೆ 50 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆಗೆ ನಿರ್ದೇಶಕ ದೂರು ನೀಡಿದ್ದಾರೆ. ಆರ್.ಆರ್ ನಗರದ ಮೀನಾ ಹಾಗೂ ರಾಜ್ಕುಮಾರ್ ಎನ್ನುವವರ ವಿರುದ್ಧ ದೂರು ನೀಡಲಾಗಿದೆ.
ಮನೆ ಖರೀದಿಗೆ ಸಲುವಾಗಿ ಮೀನಾ ಹಾಗೂ ರಾಜ್ಕುಮಾರ್ ಎನ್ನುವವರ ಮಾತನಾಡಿ, ನಾಗಶೇಖರ್ ಹಣ ನೀಡಿದ್ದರು. ಇದೀಗ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇತ್ತ ಹಣವೂ ಇಲ್ಲ, ಮನೆಯೂ ಇಲ್ಲ, ತಮಗೆ ವಂಚನೆಯಾಗಿದೆ ಎಂದು ನಾಗಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಆರ್.ಆರ್.ನಗರದ ಜಯಣ್ಣ ಲೇಔಟ್ನಲ್ಲಿ ಮನೆ ಖರೀದಿ ಮಾಡಲು ಮುಂದಾಗಿದ್ದರು ನಿರ್ದೇಶಕ ನಾಗಶೇಖರ್. ಅದಕ್ಕಾಗಿ ಅವರು 2 ಕೋಟಿ 70 ಲಕ್ಷ ರೂ.ಗೆ ಮೀನಾ ಎಂಬುವವರ ಬಳಿ ಮಾತುಕತೆ ನಡೆಸಿದ್ದರು. 2020ರ ಆಗಸ್ಟ್ನಲ್ಲಿ ಮಾರಾಟದ ಕುರಿತಾಗಿ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಬಳಿಕ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿರುವ ನಾಗಶೇಖರ್, ಒಟ್ಟು ₹ 50 ಲಕ್ಷ ಹಣವನ್ನು ಮೀನಾ ಅವರಿಗೆ ನೀಡಿದ್ದಾರಂತೆ.
ಆದರೆ ಈಗ ಅದೇ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ನಿರ್ದೇಶಕ ನಾಗಶೇಖರ್ ದೂರು ನೀಡಿದ್ದಾರೆ. ಅಲ್ಲದೇ ಸೇಲ್ ಅಗ್ರಿಮೆಂಟ್ ಬಳಿಕ ಪಡೆದಿದ್ದ 50 ಲಕ್ಷ ರೂ ಹಣವನ್ನು ವಾಪಸ್ ನೀಡಿಲ್ಲ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದುಡ್ಡು, ಮನೆ ಎರಡೂ ಇಲ್ಲದೇ ಕಂಗಾಲಾಗಿರುವ ನಿರ್ದೇಶಕ, ಮೀನಾ ಹಾಗೂ ರಾಜ್ಕುಮಾರ್ ವಿರುದ್ಧ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ಮನೆ ಖರೀದಿ ಮಾಡುವ ಸಲುವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಅಕೌಂಟ್ ಮೂಲಕ ಇಪತ್ತು ಲಕ್ಷ ಹಾಗು ನಗದು ರೂಪದಲ್ಲಿ ಉಳಿದ ಹಣ ಸೇರಿ ಒಟ್ಟು ಐವತ್ತು ಲಕ್ಷ ಹಣ ನೀಡಿದ್ದಾರೆ. ಕೋವಿಡ್ ಹಿನ್ನಲೆ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮನೆ ರಿಜಿಸ್ಟರ್ ಮಾಡಿಕೊಳ್ಳಲು ಹೋದಾಗ ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ನಾಗಶೇಖರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ" ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ನಿರ್ದೇಶಕ ನಾಗಶೇಖರ್ ನಿರ್ದೇಶನದ ಚಿತ್ರ ಇತ್ತೀಚೆಗೆ ರಿಲೀಸ್ ಆಗಿತ್ತು. ಆದರೆ ಅಂದು ಕೊಂಡ ಮಟ್ಟಿಗೆ ಚಿತ್ರ ಯಶಸ್ಸು ಕಂಡಿಲ್ಲ. ಸದ್ಯ ನಾಗಶೇಖರ್ ಮುಂದಿನ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ.


Click it and Unblock the Notifications











