'ಅಮರ್' ಚಿತ್ರಕ್ಕಾಗಿ ತೆಲುಗಿನ ದೊಡ್ಡ ಸಿನಿಮಾವನ್ನು ಮುಂದಕ್ಕೆ ಹಾಕಿದ ನಾಗಶೇಖರ್
ನಿರ್ದೇಶಕ ನಾಗಶೇಖರ್ ಈಗ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಅಂಬಿ ಮಗನ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುವುದು ನನ್ನ ಭಾಗ್ಯ ಎನ್ನುವ ನಾಗಶೇಖರ್ ಈ ಚಿತ್ರಕ್ಕಾಗಿ ತೆಲುಗಿನ ಒಂದು ದೊಡ್ಡ ಸಿನಿಮಾವನ್ನು ಮುಂದಕ್ಕೆ ಹಾಕಿದ್ದಾರಂತೆ.
ನಿರ್ದೇಶನ ನಾಗಶೇಖರ್ ಟಾಲಿವುಡ್ ನಟ ರಾಜ್ ಶೇಖರ್ ಹಾಗೂ ನಟಿ ಜೀವಿತಾ ಅವರ ಪುತ್ರಿ ಶಿವಾನಿ ಅವರ ಮೊದಲ ಸಿನಿಮಾಗೆ ಸಹ ಆಕ್ಷನ್ ಕಟ್ ಹೇಳಬೇಕಿತ್ತಂತೆ. ಹೈದರಾಬಾದ್ ನಲ್ಲಿ ಆ ಸಿನಿಮಾದ ಕೆಲಸದಲ್ಲಿ ತೊಡಗಿದ್ದ ನಾಗಶೇಖರ್ ಗೆ ಇದ್ದಕ್ಕಿದ್ದ ಹಾಗೆ 'ಅಮರ್' ಸಿನಿಮಾ ಆಫರ್ ಸಿಕ್ಕಿದೆ.
ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಸೂಚನೆಯ ಮೆರೆಗೆ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡಿ 'ಅಮರ್' ಟೈಟಲ್ ಗೆ ಸರಿ ಹೊಂದುವ ಕಥೆಯನ್ನು ನಾಗಶೇಖರ್ ಹೇಳಿದ್ದಾರೆ. ಆ ಕಥೆ ಎಲ್ಲರಿಗೆ ಇಷ್ಟ ಆಗಿ ಸಿನಿಮಾ ಶುರು ಆಗಿದೆ. ಈ ಸಿನಿಮಾ ಮಾಡುವ ದೃಷ್ಟಿಯಿಂದ ತೆಲುಗಿನ ಆ ಚಿತ್ರಕ್ಕೆ ಸದ್ಯಕ್ಕೆ ನಾಗಶೇಖರ್ ಬ್ರೇಕ್ ಹಾಕಿದ್ದಾರೆ.

ಅಂದಹಾಗೆ, 'ಅಮರ್' ಸಿನಿಮಾದ ಮುಹೂರ್ತ ನಿನ್ನೆ ನಡೆದಿದೆ. ಚಿತ್ರದಲ್ಲಿ ಅಭಿಷೇಕ್ ಜೊತೆಗೆ ತಾನ್ಯ ಹೋಪೆ ನಾಯಕಿ ಆಗಿದ್ದಾರೆ. ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರು ಬೈಕ್ ರೇಸರ್ಸ್ ಆಗಿದ್ದಾರೆ.


Click it and Unblock the Notifications











