ಚಮಚಗಳನ್ನು ದೂರವಿಟ್ಟು ಕೆಲಸ ಮಾಡಿ; ನೂತನ ಸಿಎಂಗೆ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇಡೀ ರಾಜ್ಯ ಉತ್ತಮ ಕೆಲಸದ ನಿರೀಕ್ಷೆಯಲ್ಲಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಜಕೀಯ ಗಣ್ಯರು ಮಾತ್ರವಲ್ಲದೇ ಸಿನಿಮಾರಂಗದವರೂ ಶುಭಾಶಯ ತಿಳಿಸಿ ಉತ್ತಮ ಕೆಲಸ ಮಾಡಿ ಎಂದು ಹೇಳುತ್ತಿದ್ದಾರೆ.
ಇದೀಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೂತನ ಸಿಎಂ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹೈಕಮಾಂಡ್, ಲೋ ಕಮ್ಯಾಂಡ್ ಹಂಗು ಮೀರಿ ಅದ್ಭುತ ಕೆಲಸಮಾಡಿ. ಚಮಚೆಗಳನ್ನು ದೂರವಿಟ್ಟು ಕೆಲಸ ಮಾಡಿ ಎಂದು ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಜೊತೆಗೆ ಬಸವರಾಜ ಬೊಮ್ಮಾಯಿ ಅವರ ಮನುಷ್ಯ ಪ್ರೀತಿ, ಸಾಹಿತ್ಯ ಪ್ರೀತಿ, ಪ್ರಾಣಿ ಪ್ರೀತಿಗೆ ಫಿದಾ ಆಗಿದ್ದಾರೆ. ಅಲ್ಲದೆ ತಾವು ನನ್ನಂಥವರಿಗೆ ಆಸೆ ಹುಟ್ಟಿಸಿದ್ದೀರಿ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಚಂದ್ರಶೇಖರ್, "ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮನುಷ್ಯ ಪ್ರೀತಿ; ಸಾಹಿತ್ಯ ಪ್ರೀತಿ; ಪ್ರಾಣಿ ಪ್ರೀತಿ ಉಳ್ಳ ನೀವು ನನ್ನಂಥವರಿಗೆ ಆಸೆ ಹುಟ್ಟಿಸಿದ್ದೀರಿ. ಹೈ ಕಮಾಂಡ್, ಲೋ ಕಮ್ಯಾಂಡ್ ಹಂಗು ಮೀರಿ ಅದ್ಭುತ ಕೆಲಸ ಮಾಡಿ. ಚಮಚೆಗಳನ್ನು ದೂರವಿಡಿ. ಸಮಾಜದ ಕಟ್ಟ ಕಡೆಯ ಜೀವರ ಬಗ್ಗೆ ಕಾಳಜಿ ಇರಲಿ. ಅಧಿಕಾರವು ಅಲ್ಪಕಾಲೀನ. ಒಳಿತಾಗಲಿ" ಎಂದು ಹೇಳಿದ್ದಾರೆ.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಇಂಡಿಯ ವರ್ಸಸ್ ಇಂಗ್ಲೆಡ್ ಸಿನಿಮಾ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ನಾಗತಿಹಳ್ಳಿ ಮುಂದಿನ ಸಿನಿಮಾದ ಮೇಲೆ ಯಾವುದು ಎನ್ನುವ ಕುತೂಹಲ ಮೂಡಿಸಿದೆ. ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿರುವ ನಾಗತಿಹಳ್ಳಿ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಕಿಚ್ಚ ಸುದೀಪ್ ಸಹ ಅಭಿನಂದನೆ ಸಲ್ಲಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಕಿಚ್ಚ ವೃತ್ತಿ ಜೀವನದ ಪ್ರಾರಂಭದಲ್ಲಿ ತುಂಬ ದೊಡ್ಡ ಬೆಂಬಲ ನೀಡಿದ್ದರು ಎಂದು ಬಹಿರಂಗ ಪಡಿಸಿದ್ದರು. ಬೊಮ್ಮಾಯಿ ಕುಟುಂಬದ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಕಿಚ್ಚ ಒಳ್ಳೆಯದಾಗಲಿ ಮಾಮಾ ಎಂದು ವಿಶ್ ಮಾಡಿದ್ದರು.
"ಸರಳತೆಯನ್ನು ನೋಡಿ ಬೆಳೆದವನು ನಾನು. ನನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅವರು ನನಗೆ ವೈಯಕ್ತಿಕವಾಗಿ ನನಗೆ ದೊಡ್ಡ ಬೆಂಬಲ ನೀಡಿದ್ದಾರೆ. ನಿಮಗೆ ಒಳ್ಳೆಯದಾಗಲಿ ಮಾಮಾ" ಎಂದು ಟ್ವೀಟ್ ಮಾಡಿದ್ದರು.
ಜುಲೈ 26ರ ವರೆಗೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಬಿ.ಎಸ್ ಯಡಿಯೂರಪ್ಪ ಜುಲೈ 26ರಂದು ಸಿಎಂ ಸ್ಥಾನದಿಂದ ಕೆಳಗಿಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷದ ತುಂಬಿದ ದಿನವೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಅಚ್ಚರಿಯ ರಾಜಕೀಯ ಬೆಳವಣಿಗೆ ನಾಂದಿಹಾಡಿದ್ದರು. ಬಿಜೆಪಿಯಲ್ಲಿ 75 ವರ್ಷ ದಾಟಿದ ಯಾರಿಗೂ ಯಾವುದೇ ಹುದ್ದೆಯ ಸ್ಥಾನಮಾನ ನೀಡಲ್ಲ. ಆದರೆ 75 ವರ್ಷ ದಾಟಿದ್ದರೂ ಆಡಳಿತ ನಡೆಸಲು ಯಡಿಯೂರಪ್ಪ ಅವರಿಗೆ ಅವಕಾಶ ನೀಡಲಾಗಿತ್ತು. ಈ ಮಾತನ್ನು ಹೇಳುತ್ತ ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ರಾಜ್ಯದ ಮುಂದಿನ ಸಿಎಂ ಯಾರು ಎನ್ನುವ ರೋಚಕ ಚರ್ಚೆ ಪ್ರಾರಂಭವಾಗಿತ್ತು. ಸಿಎಂ ಯಾರಾಗಬಹುದು ಎನ್ನುವ ಕುತೂಹಲ ರಾಜ್ಯದ ಜನರಲ್ಲಿ ಮನೆಮಾಡಿತ್ತು. ಕೊನೆಗೆ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಏರಿಸುವ ಮೂಲಕ ಕುತೂಹಲಕ್ಕೆ ಎಳೆದರು.
ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬೊಮ್ಮಾಯಿ ಈಗ ರಾಜ್ಯದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ 61 ವರ್ಷದ ಬಸವರಾಜ ಬೊಮ್ಮಾಯಿಯವರು ಬಿ ಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಶಿಗ್ಗಾಂವ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಿರುವ ಬೊಮ್ಮಾಯಿಯವರು ಎರಡು ಬಾರಿ ವಿಧಾನಪರಿಷತ್ ಸದಸ್ಯರು ಕೂಡ ಆಗಿದ್ದಾರೆ.
ಇದೀಗ ಕರ್ನಾಟಕ ರಾಜ್ಯದ ಸಾರಥಿಯಾಗಿರುವ ಬಸವರಾಜ ಬೊಮ್ಮಾಯಿ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಎಲ್ಲರ ನಿರೀಕ್ಷೆಗು ಮೀರಿ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











