ಧ್ರುವ ಸರ್ಜಾ ಸಿನಿಮಾದಿಂದ ನಿರ್ದೇಶಕ ನಂದ ಕಿಶೋರ್ ಹೊರಕ್ಕೆ
'ಪೊಗರು' ಸಿನಿಮಾದಲ್ಲಿ ಜೊತೆಯಾಗಿದ್ದ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಕಿಶೋರ್ 'ದುಬಾರಿ' ಹೆಸರಿನ ಸಿನಿಮಾ ಘೋಷಿಸಿ ಮುಹೂರ್ತವನ್ನೂ ಮಾಡಿಯಾಗಿತ್ತು. ಆದರೆ ಅಚಾನಕ್ ಬೆಳವಣಿಗೆಯಲ್ಲಿ ನಂದ ಕಿಶೋರ್, 'ದುಬಾರಿ' ಸಿನಿಮಾದಿಂದ ಹೊರಬಿದ್ದಿದ್ದಾರೆ.
Recommended Video
ನಂದ ಕಿಶೋರ್ ಅನ್ನು ಸಿನಿಮಾದಿಂದ ಹೊರಗಿಡುವ ನಿರ್ಧಾರವನ್ನು ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
'ದುಬಾರಿ' ಸಿನಿಮಾಕ್ಕೆ ತಮಿಳಿನ ಒಬ್ಬ ಕತೆಗಾರರಿಂದ ಹೊಸದೊಂದು ಕತೆ ಬರೆಸಿದ್ದು, ಅವರಿಂದಲೇ ನಿರ್ದೇಶನ ಮಾಡಿಸುವ ಕಾರಣದಿಂದಾಗಿ ನಿರ್ದೇಶಕ ನಂದ ಕಿಶೋರ್ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ.

ನಂದ ಕಿಶೋರ್ ನಿರ್ದೇಶಿಸಿ ಧ್ರುವ ಸರ್ಜಾ ನಟಿಸಿದ್ದ 'ಪೊಗರು' ಸಿನಿಮಾ ಒಳ್ಳೆಯ ಓಪನಿಂಗ್ ತೆಗೆದುಕೊಂಡಿತಾದರೂ ಆ ನಂತರ ನಿರೀಕ್ಷಿತ ಗಳಿಕೆಯನ್ನು ಮಾಡಲಿಲ್ಲ ಜೊತೆಗೆ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಬಂದಿತ್ತು. ಹಾಗಾಗಿಯೇ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಅನುಮಾನವೂ ಇದೆ.
'ಪೊಗರು' ಸಿನಿಮಾಕ್ಕೆ ಬ್ರಾಹ್ಮಣ ಸಮುದಾಯದಿಂದ ತೀವ್ರ ವಿರೋಧವೂ ವ್ಯಕ್ತವಾಗಿ ನಿರ್ದೇಶಕ ನಂದ ಕಿಶೋರ್ ಹಾಗೂ ನಟ ಧ್ರುವ ಸರ್ಜಾ ಅವರು ಕ್ಷಮೆ ಕೇಳಿ ಕೆಲವು ದೃಶ್ಯಗಳಿಗೆ ಕತ್ತಿರಿ ಪ್ರಯೋಗ ಸಹ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
ಈಗಾಗಲೇ 'ದುಬಾರಿ' ಸಿನಿಮಾದ ಮುಹೂರ್ತ ಕಾರ್ಯ ನೆರವೇರಿದ್ದು, ಬೆಂಗಳೂರು ಮತ್ತು ಆಸ್ಟ್ರೇಲಿಯಾಗಳಲ್ಲಿ ಚಿತ್ರೀಕರಣ ಮಾಡಲು ಯೋಜನೆ ಸಹ ರೂಪಿಸಲಾಗಿತ್ತು. ಆದರೆ ಈಗ ನಿರ್ದೇಶಕರ ಬದಲಾವಣೆಯಿಂದಾಗಿ ಸಿನಿಮಾದ ಪೂರ್ಣ ಯೋಜನೆ ಬದಲಾಗುವ ಸಾಧ್ಯತೆ ಇದೆ.


Click it and Unblock the Notifications











