ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!
ನಟ ಸುದೀಪ್ ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಸುದೀಪ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿರುವ ಸುದೀಪ್, ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದ್ದಾರೆ.
ಆದರೆ ಈ ನಡುವೆ ವಿವಾದ ಒಂದು ಭುಗಿಲೆದ್ದಿದೆ. ಹೌದು ನಟ ಸುದೀಪ್ ಬಗ್ಗೆ ವಿಡಿಯೋ ಒಂದು ಹರಿದಾಡುತ್ತಿದೆ. ಅವಹೇಳನಕಾರಿಯಾಗಿ ಮಾತನಾಡಿ, ವ್ಯಕ್ತಿ ಒಬ್ಬ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾನೆ.
ಅನಾಮಿಕ ವ್ಯಕ್ತಿಯೊಬ್ಬ ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದಕ್ಕೆ ಇದೀಗ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೇ ಇದರ ಕುರಿತು ಸ್ಯಾಂಡಲ್ವುಡ್ನ ನಿರ್ದೇಶಕ ನಂದ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ!
ಅನಾಮಿಕ ವ್ಯಕ್ತಿ ಒಬ್ಬ ನಟ ಸುದೀಪ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಯುವಕನೊಬ್ಬ ಕಿಚ್ಚ ಸುದೀಪ್ ಬಗ್ಗೆ ವೀಡಿಯೋ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಸುದೀಪ್ ನೀಡಿದ ಖಾಸಗಿ ಜಾಹೀರಾತಿನಿಂದಾಗಿ ಯುವಕನೊಬ್ಬ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ನಿರ್ದೇಶಕ ನಂದಕಿಶೋರ್ ಎಚ್ಚರಿಕೆ!
ಈ ಬೆನ್ನಲ್ಲೇ ನಿರ್ದೇಶಕ ನಂದಕಿಶೋರ್, ಅವಹೇಳನಕಾರಿ ವಿಡಿಯೋ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದಿದ್ದಾರೆ. "ಕನ್ನಡ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ. ಇಲ್ಲಿ ಸುದೀಪ್, ಪುನೀತ್ ರಾಜ್ಕುಮಾರ್ ಸೇರಿದಂತೆ ಇತರ ಧೀಮಂತ ನಟರು ತಮ್ಮದೇ ಚೌಕಟ್ಟಿನಲ್ಲಿ ಸಹಾಯ ಮಾಡಿದ್ದಾರೆ. ಕೆಲವರು ಅಭಿಮಾನಿಗಳನ್ನೇ ದೇವರೆಂದು ತಲೆಯ ಮೇಲೆ ಹೊತ್ಕೊಂಡು ಮೆರೆದವರೂ ಇದ್ದಾರೆ." ಎಂದಿದ್ದಾರೆ ನಂದ ಕಿಶೋರ್.

ಬೀದಿಯಲ್ಲಿ ನಿಂತು ಮಾತನಾಡಬಾರದು!
ವಿಡಿಯೋ ಮಾಡಿರುವ ಯುವಕನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಂದ ಕಿಶೋರ್, "ಸುದೀಪ್ ಅವರಿಂದ ಯುವಕ ಆತ್ಮಹತ್ಯೆ ಮಾಡ್ಕೊಂಡ ಅಂತ ನಿನ್ನಿಂದ ಸಾಬೀತು ಮಾಡಲು ಸಾಧ್ಯನಾ? ಈ ಬಗ್ಗೆ ಅವರ ಮನೆಯವರು ದೂರು ಕೊಟ್ಟಿದ್ದಾರಾ? ನಿನ್ನ ಬಳಿ ಸಾಕ್ಷ್ಯಾಧಾರವಿದ್ದರೆ ಕಾನೂನು ಬದ್ಧವಾಗಿ ಕೋರ್ಟ್ನಲ್ಲಿ ಹೋರಾಡು. ಅಥವಾ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ದೂರು ಕೊಡು. ಅದನ್ನು ಬಿಟ್ಟು ಹಾದಿಬೀದಿಯಲ್ಲಿ ನಿಂತು ಹೀಗೆ ಮಾತನಾಡಬಾರದು. ಕನ್ನಡ ಮೇರು ನಟರಿಗೆ, ಕಲಾಭಿಮಾನಿಗಳ ಬಗ್ಗೆ ಹೀನ ಪದ ಬಳಸುವುದರಿಂದಲೇ ಗೊತ್ತಾಗುತ್ತೆ ನಿನ್ನ ಸಂಸ್ಕೃತಿ. ನಿನ್ನ ಪ್ರಚಾರಕ್ಕಾಗಿ ಸುದೀಪ್ ಹೆಸರು ಬಳಸಿಕೊಳ್ಳುತ್ತಿದ್ದೀಯಾ? ನೀನು ನಪುಂಸಕ ಅಲ್ಲದೇ ಇದ್ದಿದ್ರೆ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿರಲಿಲ್ಲ." ಎಂದಿದ್ದಾರೆ ನಂದ ಕಿಶೋರ್.

ರೊಚ್ಚಿಗೆದ್ದ ಕಿಚ್ಚನ ಫ್ಯಾನ್ಸ್!
ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಮೇರು ನಟರೇ ಕಾರಣ. ಅಂಥವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲವೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ನಂದ ಕಿಶೋರ್ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸುದೀಪ್ ಅಭಿಮಾನಿಗಳು ಕೂಡ ಆ ವ್ಯಕ್ತಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











