ಅಬ್ಬಬ್ಬಾ, 'ಬೈರತಿ ರಣಗಲ್' ಮೇಕಿಂಗ್ ಚಿಂದಿ; ರಿಲೀಸ್ ಡೇಟ್ ಬಗ್ಗೆ ನರ್ತನ್ ಏನಂದ್ರು?
ನರ್ತನ್ ನಿರ್ದೇಶನದಲ್ಲಿ 'ಬೈರತಿ ರಣಗಲ್' ಸಿನಿಮಾ ಅದ್ಧೂರಿಯಾಗಿ ಮೂಡಿ ಬರ್ತಿದೆ. 6 ವರ್ಷಗಳ ಹಿಂದೆ ಸೂಪರ್ ಹಿಟ್ 'ಮಫ್ತಿ' ಸಿನಿಮಾ ಪ್ರೀಕ್ವೆಲ್ ಇದು. ಭಾರೀ ಕುತೂಹಲ ಮೂಡಿಸಿರುವ ಸಿನಿಮಾ ಯಾವಾಗ ಬಿಡುಗಡೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಮತ್ತೆ ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣನನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
'ಮಫ್ತಿ' ಸಕ್ಸಸ್ ಬೆನ್ನಲ್ಲೇ 'ಬೈರತಿ ರಣಗಲ್' ಸಿನಿಮಾ ಬಗ್ಗೆ ಚರ್ಚೆ ನಡೆದಿತ್ತು. ಅದೇ ಸಮಯದಲ್ಲಿ ಕಥೆ ಕೂಡ ಸಿದ್ಧವಾಗಿತ್ತು. ಕೊರೊನಾ ಹಾವಳಿ ಕಾರಣ ಕೊಂಚ ತಡವಾಗಿತ್ತು. ಬಳಿಕ ಯಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನರ್ತನ್ ಮುಂದಾಗಿದ್ದರು. ಹಾಗಾಗಿ ಕಳೆದ ವರ್ಷ 'ಬೈರತಿ ರಣಗಲ್' ಸಿನಿಮಾ ಸೆಟ್ಟೇರಿತ್ತು. ಭಾರೀ ಸೆಟ್ಗಳನ್ನು ನಿರ್ಮಿಸಿ ಈಗಾಗಲೇ ಸಾಕಷ್ಟು ಚಿತ್ರೀಕರಣ ನಡೆಸಲಾಗಿದೆ.

ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದರು. ಆದರೆ ಟೀಸರ್, ಸಾಂಗ್ ಯಾವುದೇ ಬಿಡುಗಡೆ ಆಗದೇ ಇರುವುದು ನೋಡಿ ಹೇಳಿದ ದಿನವೇ ಸಿನಿಮಾ ರಿಲೀಸ್ ಕಷ್ಟ ಎನ್ನುವುದು ಗೊತ್ತಾಗಿತ್ತು. ಎಲೆಕ್ಷನ್ ಪ್ರಚಾರ ಅಂತ ಶಿವಣ್ಣ 2 ತಿಂಗಳು ಬಿಡುವು ಪಡೆದಿದ್ದರು. ಹಾಗಾಗಿ ಚಿತ್ರೀಕರಣ ತಡವಾಗಿತ್ತು.
ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ 'ಬೈರತಿ ರಣಗಲ್' ಸಿನಿಮಾ ನಿರ್ಮಾಣವಾಗುತ್ತಿದೆ. ಗೀತಾ ಶಿವರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಚಿತ್ರತಂಡ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದೆ. ಸೆಟ್, ಮೇಕಿಂಗ್ ಎಲ್ಲವೂ ಹುಬ್ಬೇರಿಸುವಂತಿದೆ. 'ಮಫ್ತಿ'ಗಿಂತ ಬಹಳ ಅದ್ಧೂರಿಯಾಗಿ ಪ್ರೀಕ್ವೆಲ್ ಬರಲಿದೆ. ಮಾಫಿಯಾ ಡಾನ್ ಬೈರತಿ ರಣಗಲ್ ಹಿನ್ನೆಲೆ ಏನು ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ವಕೀಲನಾಗಿದ್ದ ಬೈರತಿ ರಣಗಲ್ ದೊಡ್ಡ ಡಾನ್ ಆಗಿ ಬದಲಾಗಿದ್ದು ಯಾಕೆ? ಎನ್ನುವ ಪ್ರಶ್ನೆಗೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ. ನೂರಾರು ಜನ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಹಗಳಿರುಲು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಸ್ಕೇಲ್ನಲ್ಲಿ ಚಿತ್ರವನ್ನು ಕಟ್ಟಿಕೊಡುತ್ತಿರುವುದು ಮೇಕಿಂಗ್ ನೋಡಿದರೆ ಅರ್ಥವಾಗುತ್ತದೆ. ಇಲ್ಲೂ ಗಣಿ ಪ್ರದೇಶ, ಹೆಲಿಕ್ಯಾಪ್ಟರ್ ಶಾಟ್ಸ್ ಇದೆ. ಇನ್ನು ಪೊಲೀಸ್ ಠಾಣೆಯನ್ನೇ ರಣಗಲ್ ಸುಟ್ಟು ಬಿಡುವ ಸನ್ನಿವೇಶ ಕೂಡ ಚಿತ್ರದಲ್ಲಿರುವಂತೆ ಕಾಣುತ್ತಿದೆ.

ಗೀತಾ ಶಿವರಾಜ್ಕುಮಾರ್ ಸೆಟ್ನಲ್ಲೇ ಇದ್ದು ಚಿತ್ರೀಕರಣವನ್ನು ನೋಡಿಕೊಳ್ಳುತ್ತಿದ್ದಾರೆ. ಕಲಾವಿದರು, ತಂತ್ರಜ್ಞರಿಗೆ ಅಡುಗೆ ಮಾಡಿ ಬಡಿಸುವುದನ್ನು ಕೂಡ ನೋಡಬಹುದು. 'ಗೀತಾ ಪಿಕ್ಚರ್ಸ್' ಬ್ಯಾನರ್ನಲ್ಲಿ ಈ ಹಿಂದೆ 'ಭಜರಂಗಿ'-2 ಸಿನಿಮಾ ಬಂದಿತ್ತು. 'ಬೈರತಿ ರಣಗಲ್' ಎರಡನೇ ಸಿನಿಮಾ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ನರ್ತನ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
"ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಆಗುವುದು ಅನುಮಾನ. ಮುಂದೆ ಯಾವಾಗ ಎನ್ನುವುದು ಇನ್ನು ಗೊತ್ತಿಲ್ಲ. ಸಿನಿಮಾ ಕೆಲಸಗಳು ನಡೆಯುತ್ತಿದೆ. ನಾವು ಚರ್ಚಿಸುತ್ತಿದ್ದೇವೆ. ಯಾವಾಗ ಸಿನಿಮಾ ರಿಲೀಸ್ ಮಾಡಬೇಕು ಅಂತ. ಶೀಘ್ರದಲ್ಲೇ ಅಧಿಕೃತವಾಗಿ ಹೊಸ ಡೇಟ್ ಘೋಷಣೆ ಆಗುತ್ತದೆ" ಎಂದಿದ್ದಾರೆ.
ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.


Click it and Unblock the Notifications











