'ಕೂಲಿ' ಬಳಿಕ ತಲೈವಾ ಮುಂದಿನ ಸಿನಿಮಾ ಖಚಿತ ಪಡಿಸಿದ ನಿರ್ದೇಶಕ; ಶಿವಣ್ಣ ಕೂಡ...
ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಕೂಡ ಇದೇ ಚಿತ್ರ ತಮಿಳು ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ತಲೈವಾ 'ಕೂಲಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಉಪೇಂದ್ರ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಸಿನಿಮಾ ಅಕ್ಟೋಬರ್ 10ಕ್ಕೆ ತೆರೆಗೆ ಬಂದಿತ್ತು. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿತ್ತು. 'ವೆಟ್ಟೆಯಾನ್' ದಸರಾ ವಿನ್ನರ್ ಎನಿಸಿಕೊಂಡಿದ್ದಾರೆ. ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಚೆನ್ನೈನಲ್ಲಿ ಸುರಿದ ಭಾರೀ ಮಳೆ ಚಿತ್ರಕ್ಕೆ ಕೊಂಚ ಹಿನ್ನಡೆ ತಂದಿದ್ದು ಸುಳ್ಳಲ್ಲ. ಒಂದೊಳ್ಳೆ ಕಥೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರ ಕಟ್ಟಿಕೊಡಲಾಗಿದೆ.

ಕಳೆದ ವರ್ಷ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಕನ್ನಡ ನಟ ಶಿವರಾಜ್ಕುಮಾರ್ ಹಾಗೂ ಮಲಯಾಳಂ ನಟ ಮೋಹನ್ ಲಾಲ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇದು ಚಿತ್ರಕ್ಕೆ ಪ್ಲಸ್ ಆಗಿತ್ತು. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರ ಕೂಡ ಬಹಳ ನಿರೀಕ್ಷೆ ಮೂಡಿಸಿದೆ.
'ಕೂಲಿ' ಬಳಿಕ ಯಾವ ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ 'ಜೈಲರ್' ಪ್ರೀಕ್ವೆಲ್ ಮಾಡುವ ಬಗ್ಗೆ ಸಾಕಷ್ಟು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ನಿರ್ದೇಶಕ ನೆಲ್ಸನ್ ಸಹ ಈ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. ಕಥೆ ಬರೆಯುತ್ತಿದ್ದೇನೆ, ರಜನಿ ಸರ್ ಒಪ್ಪಿದರೆ ಸಿನಿಮಾ ಶುರುವಾಗುತ್ತದೆ ಎಂದಿದ್ದರು. ಇದೀಗ ಅಧಿಕೃತವಾಗಿ ಈ ಬಗ್ಗೆ ನೆಲ್ಸನ್ ಪ್ರತಿಕ್ರಿಯಿಸಿದ್ದಾರೆ.
ನಿರ್ದೇಶಕ ಕೆ. ಎಸ್ ರವಿಕುಮಾರ್ ಜೊತೆ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ನೆಲ್ಸನ್ ಮಾತನಾಡಿದ್ದಾರೆ. 'ಕೂಲಿ' ಬಳಿಕ 'ಜೈಲರ್'-2 ಸಿನಿಮಾ ಬರುವ ಸಾಧ್ಯತೆಯಿದೆ. ನಡುವೆ ನಾನು ಯಾವುದೇ ಬೇರೆ ಸಿನಿಮಾ ಮಾಡುತ್ತಿಲ್ಲ. ರಜನಿ ಸರ್ ಬೇರೆ ಯಾವುದಾದರೂ ಸಿನಿಮಾ ಒಪ್ಪಿಕೊಳ್ತಾರಾ? ಎನ್ನುವುದು ಗೊತ್ತಿಲ್ಲ. ಆದರೆ ನಾನಂತು 'ಜೈಲರ್-2' ಮಾಡಲು ಸಿದ್ಧ ಎಂದಿದ್ದಾರೆ.

'ಜೈಲರ್' ಸಿನಿಮಾ ಸಕ್ಸಸ್ ಆದಾಗಲೇ ಸನ್ ಪಿಕ್ಚರ್ಸ್ ಸಂಸ್ಥೆ ರಜನಿಕಾಂತ್, ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ದ್ಗೆ ಕಾರುಗಳನ್ನು ಗಿಫ್ಟ್ ನೀಡಿತ್ತು. ಲಾಭದಲ್ಲಿ ಒಂದಷ್ಟು ಹಣವನ್ನು ನೀಡಿ ಸೀಕ್ವೆಲ್ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು. ಮೂರು ಜನ ಮತ್ತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು.
'ಜೈಲರ್' ಚಿತ್ರದಲ್ಲಿ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಕೆಲ ಅಪರಾಧಿಗಳನ್ನು ತಿದ್ದುವ ಕೆಲಸ ಮಾಡಿರುತ್ತಾರೆ. ಅಂತಹವರು ಬಳಿಕ ಒಳ್ಳೆಯವರಾಗಿ ಇರುತ್ತಾರೆ. 'ಜೈಲರ್' ಸರ್ ಕೇಳಿದಾಗ ಸಹಾಯಕ್ಕೆ ಬರುವ ಕಥೆಯನ್ನು ನೋಡಿದ್ದೇವೆ. ಚಿತ್ರದಲ್ಲಿ ಮಂಡ್ಯದ ಡಾನ್ ನರಸಿಂಹ ಆಗಿ ಶಿವರಾಜ್ಕುಮಾರ್ ನಟಿಸಿದ್ದರು.
ಕ್ಲೈಮ್ಯಾಕ್ಸ್ನಲ್ಲಿ ನರಸಿಂಹದ ಆಗಿ ಶಿವಣ್ಣದ ಪರ್ಫಾರ್ಮನ್ಸ್ಗೆ ಪರಭಾಷಿಕರು ಫಿದಾ ಆಗಿದ್ದರು. ಸದ್ಯ 'ಜೈಲರ್' ಪ್ರೀಕ್ವೆಲ್ ಅಥವಾ ಸೀಕ್ವೆಲ್ ಬರುತ್ತದೆ ಅಂದಮೇಲೆ ನರಸಿಂಹ ಪಾತ್ರ ಸಹ ಮುಂದುವರೆಯುವ ನಿರೀಕ್ಷೆಯಿದೆ. ರಜನಿಕಾಂತ್ ಕೇಳಿದರೆ ಶಿವಣ್ಣ ನಟಿಸೋಕೆ ಒಲ್ಲೆ ಎನ್ನುವುದಿಲ್ಲ. ಹಾಗಾಗಿ 'ಜೈಲರ್-2' ಚಿತ್ರದಲ್ಲಿ ಇಬ್ಬರೂ ಮತ್ತೆ ಒಟ್ಟಿಗೆ ನಟಿಸುವ ಸಾಧ್ಯತೆಯಿದೆ. ಅದೇ ನಿಜವಾದರೆ ಸಿನಿರಸಿಕರಿಗೆ ಹಬ್ಬವೇ ಸರಿ. ರಜನಿಕಾಂತ್ ಹುಟ್ಟುಹಬ್ಬಕ್ಕೆ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ.


Click it and Unblock the Notifications











