ಡಾ. ವಿಜಯ್ ಮಗಳ ದೇಹಕ್ಕೆ ನಾಗವಲ್ಲಿ ಆತ್ಮ ಎಂಟ್ರಿ; 'ಆಪ್ತಮಿತ್ರ- 3' ಕಥೆ ಹೇಳಿದ ಪಿ. ವಾಸು
ಸಾಹಸಸಿಂಹ ವಿಷ್ಣುವರ್ಧನ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಸೂಪರ್ ಸಿನಿಮಾಗಳಲ್ಲಿ ನಟಿಸಿ ದಾದಾ ಪ್ರೇಕ್ಷಕರನ್ನು ರಂಜಿಸಿದ್ದರು. ತಮ್ಮ ಆದರ್ಶ ವ್ಯಕ್ತಿತ್ವದಿಂದರೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಾಕಷ್ಟು ನೋವು ಉಂಡರೂ ನಗುನಗುತ್ತಾ ಜೀವನ ಸಾಗಿಸಿದರು. ಎಷ್ಟೋ ಜನರಿಗೆ ವಿಷ್ಣು ಸಹಾಯ ಮಾಡಿದ್ದಾರೆ, ಸ್ಫೂರ್ತಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಪಿ. ವಾಸು ಇವತ್ತಿಗೂ ಸಾಹಸಸಿಂಹನನ್ನು ಆರಾಧಿಸುತ್ತಿದ್ದಾರೆ.
ವಿಷ್ಣುವರ್ಧನ್ ನಟನೆಯ 'ಕಥಾನಾಯಕ' ಚಿತ್ರದ ಮೂಲಕ ಪಿ. ವಾಸು ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗಿದ್ದರು. ಮುಂದೆ ದಾದಾ ಜೊತೆ ಏಳೆಂಟು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ವಿಷ್ಣು ನಟಿಸಿದ ಕೆಲ ಚಿತ್ರಗಳಿಗೆ ಕಥೆ ಒದಗಿಸಿದ್ದರು. ದಾದಾಗೆ ವಾಸು ಸಹೋದರನೇ ಆಗಿಬಿಟ್ಟಿದ್ದರು. ವಿಷ್ಣುವರ್ಧನ್ ನಟಿಸಿದ ಕೊನೆಯ ಸಿನಿಮಾ 'ಆಪ್ತರಕ್ಷಕ' ಚಿತ್ರಕ್ಕೂ ವಾಸು ಆಕ್ಷನ್ ಕಟ್ ಹೇಳಿದ್ದರು. ನಿಮಗೆ ಗೊತ್ತಾ ವಿಷ್ಣು ಜೊತೆಗೆ ಮತ್ತಷ್ಟು ಸಿನಿಮಾಗಳನ್ನು ಮಾಡಲು ವಾಸು ಕನಸು ಕಂಡಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಆ ಕೊರಗು ಅವರನ್ನು ಕಾಡುತ್ತಲೇ ಇದೆ.

ಪಿ. ವಾಸು ಅವರಿಗೆ ಸಾಹಸಸಿಂಹ ಒಡನಾಟ ಶುರುವಾಗಿದ್ದು ಹೇಗೆ? ಅವರ ವೃತ್ತಿ ಬದುಕಿನಲ್ಲಿ ದಾದಾ ಮಹತ್ವದ ಸ್ಥಾನ ಪಡೆದಿರುವುದು ಹೇಗೆ? ಹೀಗೆ ಸಾಕಷ್ಟು ವಿಚಾರಗಳನ್ನು ನಿರ್ದೇಶಕ ಪಿ. ವಾಸು ಹಂಚಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಅವರು ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ನನ್ನ ಉಸಿರು ಇರುವವರೆಗೂ ತಮ್ಮ ಆರಾಧ್ಯ ದೈವನನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಪಿ. ವಾಸು ಭಾವುಕರಾಗಿದ್ದಾರೆ.
ಒಂದಷ್ಟು ತಮಿಳು ಹಾಗೂ ಒಂದು ತೆಲುಗು ಚಿತ್ರದಲ್ಲಿ ಪಿ. ವಾಸು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ಚಿ. ಉದಯಶಂಕರ್ ಪರಿಚಯಯವಾಗಿ ಒಂದು ಕಥೆ ಹೇಳಿದ್ದರು. ಮುಂದೆ ಅದು 'ಕಥಾನಾಯಕ' ಸಿನಿಮಾ ಆಗಿ ರೂಪುಗೊಂಡಿದ್ದನ್ನು ಪಿ. ವಾಸು ತಿಳಿಸಿದ್ದಾರೆ. "ಕಥೆ ಕೇಳಿದ ಚಿ. ಉದಯಶಂಕರ್ ಇದು ವಿಷ್ಣುಗೆ ಬಹಳ ಚೆನ್ನಾಗಿರುತ್ತೆ. ನಾನು ಅವರಿಗೆ ಹೇಳ್ತೀನಿ, ಹೋಗಿ ಕಥೆ ಹೇಳಿ ಅಂದ್ರು. ನನಗೆ ಅಲ್ಲಿಯವರೆಗೆ ವಿಷ್ಣು ಸರ್ ಪರಿಚಯ ಇರಲಿಲ್ಲ. ಅವರ ಸಿನ್ಮಾಗಳನ್ನಷ್ಟೆ ನೋಡಿದ್ದೆ. ಅದೇ ಮೊದಲ ಬಾರಿಗೆ ಅವರ ಮನೆಗೆ ಹೋಗಿ ಕಥೆ ಹೇಳುವ ಅವಕಾಶ ಸಿಕ್ಕಿತ್ತು" ಎಂದು ಮೆಲುಕು ಹಾಕಿದ್ದಾರೆ.

ಕಥೆ ಹೇಳಲು ಹೋಗಿದ್ದ ಪಿ. ವಾಸು ತಾವೇ ಆ ಚಿತ್ರದ ನಿರ್ಮಾಪಕರು, ನಿರ್ದೇಶಕರು ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. "ಕಥೆ ಕೇಳಿ ಒಪ್ಪಿದ ವಿಷ್ಣು ಸರ್, ನಿರ್ಮಾಪಕರು ಯಾರು ಎಂದು ಕೇಳಿದ್ರು. ಇನ್ನು ಯಾರು ಸಿಕ್ಕಿಲ್ಲ ಎಂದೆ. ಕೂಡಲೇ ನೀವೇ ಪ್ರೊಡ್ಯೂಸ್ ಮಾಡಿ ಅಂದ್ರು. ನಿಮ್ಮ ತಂದೆ ಕೂಡ ನಿರ್ಮಾಪಕರು ಅಲ್ವಾ? ಎಂದು ಕೇಳಿದ್ರು. ನಮ್ಮ ತಂದೆ ಮೇಕಪ್ಮ್ಯಾನ್ ಆಗಿದ್ರು. ಕೆಲ ಸಿನಿಮಾಗಳನ್ನು ನಿರ್ಮಿಸಿದ್ರು. ವಿಷ್ಣು ಸರ್ಗೆ ಇದು ಗೊತ್ತಾಗಿ ನಿಮ್ಮ ತಂದೆಗೆ ಹೇಳು ಅಂದ್ರು. ನಮ್ಮ ತಂದೆಗೆ ಹೇಳಿದಾಗ, ನನಗೆ ಕನ್ನಡ ಇಂಡಸ್ಟ್ರಿ ಬಗ್ಗೆ ಗೊತ್ತಿಲ್ಲ, ವಿತರಕರನ್ನು ಕೇಳೋಣ ಅಂದ್ರು. ಕೂಡಲೇ ವಾಸು ಎಂಬ ಫೈನಾನ್ಶಿಯರ್ಗೆ ಫೋನ್ ಮಾಡಿದ್ವಿ. ಅವ್ರು ಏನಯ್ಯಾ, ವಿಷ್ಣು ಕಾಲ್ಶೀಟ್ ಸಿಕ್ಕರೆ ಜಾಕ್ಪಾಟ್, ಅವರೊಟ್ಟಿಗೆ ಸಿನಿಮಾ ಮಾಡೋಕೆ ಮೀನಾಮೇಷ ಎಣಿಸ್ತೀಯಾ, ಅವರ ಡೇಟ್ಸ್ಗಾಗಿ ಜನ ಇಲ್ಲಿ ಕ್ಯೂ ನಿಂತಿದ್ದಾರೆ, ನಾನೇ ಫೈನಾನ್ಸ್ ಮಾಡ್ತೀನಿ ಸಿನಿಮಾ ಮಾಡು ಅಂದ್ರು. ಜಯರಾಮ ರೆಡ್ಡಿ ಎಂಬುವವರ ಜೊತೆ ಸೇರಿ ಸಿನಿಮಾ ಮಾಡಿದ್ವಿ. ಹಿಟ್ ಆಯ್ತು" ಎಂದು ಪಿ. ವಾಸು ಹೇಳಿದ್ದಾರೆ.
ಇವತ್ತಿಗೂ ಪಿ. ವಾಸು ತಮ್ಮ ಆಫೀಸ್ನಲ್ಲಿ ವಿಷ್ಣುವರ್ಧನ್ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡಿ "ಕಥನಾಯಕ ಸಿನಿಮಾ ಬಳಿಕ ನಮ್ಮಿಬ್ಬರ ನಡುವೆ ಒಳ್ಳೆ ಅನುಬಂಧ ಶುರುವಾಯಿತು. ನನಗೆ ಅವರು ಮಾರ್ಗದರ್ಶಕರಾಗಿಬಿಟ್ರು. ನಮ್ಮ ಆಫೀಸ್ನಲ್ಲಿ ವಿಷ್ಣು ಸರ್ ಫೋಟೊ ಇಟ್ಟಿದ್ದೀನಿ. ಅವರಿಗೆ ಪೂಜೆ ಮಾಡಿ ಪ್ರತಿದಿನ ನಾನು ಕೆಲಸ ಆರಂಭಿಸುತ್ತೇನೆ. ಒಮ್ಮೆ ವಿ. ನಾಗೇಂದ್ರ ಪ್ರಸಾದ್ ನಮ್ಮ ಆಫೀಸ್ಗೆ ಬಂದಿದ್ರು. ವಿಷ್ಣು ಸರ್ ಫೋಟೊ ನೋಡಿ ಕೇಳಿದ್ರು. ನನಗ ಆರಾಧ್ಯ ದೈವ, ದಿನ ನಾನು ಪೂಜೆ ಮಾಡ್ತೀನಿ ಎಂದಿದ್ದು ಕೇಳಿ ಅವ್ರು ಕಣ್ಣೀರಾಗಿಬಿಟ್ರು. ನನಗೆ ಅವಕಾಶ ಕೊಟ್ಟ ನಿರ್ದೇಶಕ ಶ್ರೀಧರ್ ಸರ್, ವಿಷ್ಣು ಸರ್ ಹಾಗೂ ಎಂಜಿಆರ್, ಶಿವಾಜಿ ಸರ್ ಫೋಟೊ ನಮ್ಮ ಆಫೀಸ್ನಲ್ಲಿ ಇವತ್ತಿಗೂ ಇದೆ. ದೇವರ ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಆಫೀಸ್ಗೆ ಬಂದು ಇವರಿಗೆಲ್ಲಾ ಪೂಜೆ ಮಾಡ್ತೀನಿ" ಎಂದಿದ್ದಾರೆ.
ಬಹಳ ಚಿಕ್ಕ ವಯಸ್ಸಿನಲ್ಲೇ ವಿಷ್ಣು ಸರ್ ನಮ್ಮಿಂದ ದೂರ ಆಗಿಬಿಟ್ಟರು. "ಆಪ್ತರಕ್ಷಕ ಬಳಿಕ ಯಾವ ಸಿನಿಮಾ ಮಾಡೋಣ ಎಂದು ವಿಷ್ಣು ಸರ್ ಕೇಳಿದ್ರು. ಅಮಿತಾಬ್ ಬಚ್ಚನ್ ಮಾಡಿದ್ದ 'ಬ್ಲ್ಯಾಕ್' ಚಿತ್ರವನ್ನು ಕನ್ನಡಕ್ಕೆ ತರೋಣ ಎಂದಿದ್ದೆ. 'ಮಣಿಚಿತ್ರತಾಳ್' ಎಳೆಯನ್ನಷ್ಟೆ ಇಟ್ಟುಕೊಂಡು 'ಆಪ್ತಮಿತ್ರ' ಚಿತ್ರದ ಮಾಡಿದಂತೆ 'ಬ್ಲ್ಯಾಕ್' ಚಿತ್ರದ ಎಳೆ ಬಳಸಿಕೊಂಡು ಬೇರೆ ಚಿತ್ರಕಥೆ ಮಾಡಿ ಸಿನಿಮಾ ಮಾಡೋಣ ಎಂದೆ. ವಿಷ್ಣು ಸರ್ ಸರಿ ಮಾಡು ಅಂದ್ರು. ಆಪ್ತರಕ್ಷಕ ನನ್ನ ಕೊನೆಯ ಸಿನಿಮಾ ಆಗುತ್ತಾ ಅಂತ ಎರಡ್ಮೂರು ಸಲ ಹೇಳಿದ್ರು. ನಾನು ಹಾಗೆಲ್ಲಾ ಮಾತನಾಡಿಬೇಡಿ ಎನ್ನುತ್ತಿದ್ದೆ" ಎಂದು ಪಿ. ವಾಸು ವಿವರಿಸಿದ್ದಾರೆ.
'ಆಪ್ತಮಿತ್ರ', 'ಆಪ್ತರಕ್ಷಕ' ಬಳಿಕ ಇದೇ ಕಥೆಯನ್ನು ಮುಂದುವರೆಸಿ ಮತ್ತೊಂದು ಭಾಗ ಮಾಡಲು ಪಿ. ವಾಸು ಬಳಿ ಕಥೆಯ ಎಳೆ ಸಿದ್ಧವಾಗಿತ್ತು. ಇದನ್ನು ವಿಷ್ಣು ಜೊತೆಗೂ ಹಂಚಿಕೊಂಡಿದ್ದರು. ಅದನ್ನು ಕೇಳಿ ದಾದಾ ಅಚ್ಚರಿಗೊಂಡಿದ್ದರು. "ಆಪ್ತರಕ್ಷಕ ಕೊನೆಯಲ್ಲಿ ಪಾರ್ಟ್-3 ಕಥೆ ಶುರುವಾಗುತ್ತದೆ. ಡಾ. ವಿಜಯ್(ವಿಷ್ಣವರ್ಧನ್)ಗೆ ಮಗುವಾಗಿದೆ ಎನ್ನುವ ಸುದ್ದಿ ಬರುತ್ತದೆ. ಮಗಳನ್ನು ನೋಡಲು ವಿಜಯ್ ಹೋಗ್ತಾನೆ. ಪುಟ್ಟ ಮಗು ಅವನನ್ನು ನೋಡಿ ಹೌಲಾ.. ಹೌಲಾ ಅನ್ನುತ್ತೆ. ಅಂದ್ರೆ ನಾಗವಲ್ಲಿ ಆತ್ಮ ಮಗುವಲ್ಲಿ ಸೇರಿಕೊಂಡಿರುತ್ತದೆ. ಈಗ ನಾನು ನಿನ್ನ ಮಗಳಾಗಿ ಬಂದೆ, ಏನು ಮಾಡ್ತೀಯಾ ನೋಡೋಣ ಎಂದು ನಾಗವಲ್ಲಿ ಸವಾಲು ಹಾಕುತ್ತಾಳೆ. ಹೀಗೆ ಕಥೆ ಶುರುವಾಗುತ್ತೆ ಎಂದೆ. ವಿಷ್ಣು ಸರ್ ಕೇಳಿ ಅಚ್ಚರಿಗೊಂಡು, ನೀನು ಬಿಡಪ್ಪ ಮೂರಲ್ಲ ಹತ್ತು ಪಾರ್ಟ್ ಮಾಡ್ತೀಯಾ ಅಂದ್ರು" ಎಂದು ವಾಸು ಆ ಘಟನೆ ನೆನಪುಗೊಂಡಿದ್ದಾರೆ.
'ಆಪ್ತರಕ್ಷಕ' ಡಬ್ಬಿಂಗ್ ಬಳಿಕ ವಿನಯ ಪ್ರಸಾದ್ ಬಳಿ ವಿಷ್ಣು ಸರ್ ಮಾತನಾಡಿದ್ರಂತೆ. ಅವ್ರು ನನಗೆ ಹೇಳಿದ್ರು. "ಪಿ. ವಾಸು ತಲೆಯಲ್ಲಿ ಒಂದು ಚಿಪ್ಪಿದೆ. ಆತನಗೆ ಎಂತಹ ಐಡಿಯಾಗಳು ಬರ್ತಾವೆ. ಪಾರ್ಟ್- 2 ಮಾಡೋಣ ಅಂತ ಸ್ಟೋರಿಲೈನ್ ಹೇಳ್ದ. ಅದ್ಭುತ.. ನಾನೇ ಶಾಕ್ ಆಗಿಬಿಟ್ಟೆ. ಹೇಳಿದಂತೆ ಅವ್ನು ಮಾಡ್ತಾನೆ ಅಂತ ವಿಷ್ಣು ಸರ್ ಹೇಳಿದ್ದಾರೆ ವಿನಯ ಪ್ರಸಾದ್ ನನ್ನ ಬಳಿ ಹೇಳಿದ್ರು" ಎಂದು ವಾಸು ವಿವರಿಸಿದ್ದಾರೆ. ಸರಿಯಾದ ಸಮಯಕ್ಕೆ ವಿಷ್ಣು ಸರ್ ಊಟಕ್ಕೆ ಕೂರುತ್ತಿದ್ದರು. ನನ್ನನ್ನು ಕರೆಯುತ್ತಿದ್ರು. ನಾನು ಬೇರೆಯವರ ಒಂದಷ್ಟು ಶಾಟ್ಸ್ ತೆಗೆದು ಬಳಿಕ ಊಟಕ್ಕೆ ಹೋಗೋಣ ಅಂದುಕೊಂಡ್ರೆ, ನನಗಾಗಿ ಊಟ ಮಾಡದೇ ಕಾಯುತ್ತಿದ್ರು, ಅದು ಗೊತ್ತಾಗಿ ಬಳಿಕ ಅವ್ರು ಊಟಕ್ಕೆ ಹೋಗೋಣ ಅಂದಾಕ್ಷಣ ನಾನು ಹೋಗುತ್ತಿದ್ದೆ" ಎಂದು ನಿರ್ದೇಶಕ ಪಿ. ವಾಸು ಮೆಲುಕು ಹಾಕಿದ್ದಾರೆ.


Click it and Unblock the Notifications











