ತಮಿಳು ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್; 'ಲೂಸಿಯಾ' ಪವನ್ ಹಾರ್ಟ್ಬ್ರೇಕ್?
ತಮಿಳು ನಿರ್ಮಾಪಕ ನಿರ್ಮಾಪಕ ಸುಧನ್ ಸುಂಧರಮ್ ಜೊತೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ನಿಶ್ಚಯವಾಗಿದೆ. ಮುಂದಿನ ವಾರವೇ ಎಂಗೇಜ್ಮೆಂಟ್ ನಡೆಯಲಿದ್ದು ಇದೇ ವರ್ಷ ಮದುವೆಗೆ ತಯಾರಿ ನಡೆದಿದೆ. ಅಭಿಮಾನಿಗಳು ಆಕೆಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ನಿರ್ದೇಶಕ ಪವನ್ ಕುಮಾರ್ ಮಾತ್ರ ಕೊಂಚ ಬೇರಸಗೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
'ಗಾಳಿಪಟ- 2' ಚಿತ್ರದಲ್ಲಿ ಪವನ್ ಹಾಗೂ ಶರ್ಮಿಳಾ ಜೋಡಿಯಾಗಿ ನಟಿಸಿದ್ದರು. ಪ್ರೊಫೆಸರ್ ಶರ್ಮಿಳಾ ಅವರನ್ನು ಪ್ರೀತಿಸುವ ವಿದ್ಯಾರ್ಥಿ ಭೂಷಣ್ ಪಾತ್ರದಲ್ಲಿ ಪವನ್ ನಟಿಸಿದ್ದರು. ಆದರೆ ಅದು ಒನ್ಸೈಡ್ ಲವ್. ಕೊನೆಯಲ್ಲಿ ಬೇರೆಯವರ ಜೊತೆ ಪ್ರೊಫೆಸರ್ ಶರ್ಮಿಳಾ ಮದುವೆ ನಡೆಯುತ್ತದೆ. ನಿಜ ಜೀವನದಲ್ಲೂ ಹಿಂಗೆ ಆಗಿಬಿಡ್ತಲ್ಲಾ ಎಂದು ಪವನ್ ಕುಮಾರ್ ಫನ್ನಿ ವೀಡಿಯೋ ಶೇರ್ ಮಾಡಿದ್ದಾರೆ.

'ನೀನು ಬಗೆಹರಿಯದ ಹಾಡು' ಹಾಡಿನ ಹಿನ್ನೆಲೆಯಲ್ಲಿ ಸಣ್ಣ ಮೀಮ್ ವೀಡಿಯೋ ಪೋಸ್ಟ್ ಮಾಡಿ ಶರ್ಮಿಳಾ ಮದುವೆ ನಿಶ್ಚಯ ಆಗಿರುವುದಕ್ಕೆ ಹಾರ್ಟ್ಬ್ರೇಕ್ ಆಗಿದೆ ಎಂದಿದ್ದಾರೆ. "ರೀಲ್ ಲೈಫ್ ರಿಯಲ್ ಲೈಫ್ ಆದಾಗ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ನೋಡಿ ಶರ್ಮಿಳಾ ಮಾಂಡ್ರೆ ಕೂಡ "ಓ ಮೈ ಗಾಡ್" ಎಂದು ಪ್ರತಿಕ್ರಿಯಿಸಿದ್ದಾರೆ. ಬಳಿಕ ರಿಪ್ಲೇ ಮಾಡಿರುವ ಪವನ್ "ಶರ್ಮಿಳಾ ನನ್ನನ್ನು ಯಾವತ್ತು ಭೇಟಿಯಾಗದಂತಹ ಸ್ನೇಹಿತೆ.. ಆದರೆ ನಾವು ಮಾತನಾಡುವಾಗಲೆಲ್ಲಾ ಬಹಳ ಆತ್ಮೀಯ ಒಡನಾಟ ಇದೆ ಎನಿಸುತ್ತೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಬಹಳ ತಮಾಷೆ ಮಾಡುತ್ತೇವೆ. ಕಂಗ್ರಾಟ್ಸ್ ಶರ್ಮಿಳಾ... ನಾನು ಸಂತೋಷದಿಂದ ಕನ್ಯಾದಾನ ಮಾಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.
4 ವರ್ಷಗಳ ಹಿಂದೆ ಬಂದಿದ್ದ 'ಗಾಳಿಪಟ- 2' ಸಿನಿಮಾ ಹಿಟ್ ಆಗಿತ್ತು. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ದೂದ್ಪೇಡಾ ದಿಗಂತ್ ಜೊತೆ ಮತ್ತೊಬ್ಬ ನಾಯಕನಾಗಿ ಪವನ್ ಕುಮಾರ್ ನಟಿಸಿದ್ದರು. ಪವನ್ ಹಾಗೂ ಶರ್ಮಿಳಾ ಕಾಣಿಸಿಕೊಂಡಿದ್ದ ಸಾಂಗ್ ಕೂಡ ಹಿಟ್ ಆಗಿತ್ತು. ಪ್ರೀತಿಸಿದ ಫ್ರೊಫೆಸರ್ ಶರ್ಮಿಳಾ ಬೇರೆಯವರನ್ನು ಮದುವೆಯಾಗಿ ಯೂರೋಪ್ಗೆ ಹೋದ್ರು, ಅಲ್ಲಿಗೂ ಆಕೆಯನ್ನು ಹುಡುಕಿ ಭೂಷಣ್ ಹೋಗುವ ಕಥೆ ಚಿತ್ರದಲ್ಲಿತ್ತು. ಬಹಳ ತಮಾಷೆಯಾಗಿ ಕಥೆಯನ್ನು ಭಟ್ರು ಕಟ್ಟಿಕೊಟ್ಟಿದ್ದರು.
ಸದ್ಯ ಪವನ್ ಪೋಸ್ಟ್ ಬಗ್ಗೆ ನೆಟ್ಟಿಗರು ಫನ್ನಿ ಕಾಮೆಂಟ್ಸ್ ಮಾಡುತ್ತಿದ್ದಾರೆ. "ಅರ್ಜೆಂಟ್ ಆಗಿ ಗಣೇಶ್ ಅವರನ್ನು ಮೀಟ್ ಮಾಡಿ, ಯೋಗರಾಜ್ ಭಟ್ರಿಗೆ ಕಾಲ್ ಮಾಡಿ" ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.
"ಛೆ ಪಾಪ.. ಏನ್ರಿ ಡೈರೆಕ್ಟರ್ ಶರ್ಮಿಳಾ ಮೇಡಂ ಹಾರಿ ಹೋದ್ರು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಪ್ರೀತಿ ಮಧುರ ತ್ಯಾಗ ಅಮರ' ಎಂದು 'ಮುಂಗಾರುಮಳೆ' ಸಿನಿಮಾ ಡೈಲಾಗ್ ಅನ್ನು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. 'ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಗೆಳೆಯ' ಎಂದು ಮಗದೊಬ್ಬರು ನಕ್ಕು ಕಾಮೆಂಟ್ ಮಾಡಿರುವುದು ವೈರಲ್ ಆಗ್ತಿದೆ. ಇದೇ ಬೇಸರದಲ್ಲಿ ಒಂದೊಳ್ಳೆ ಸ್ಕ್ರಿಪ್ಟ್ ಬರೆದು ಸಿನಿಮಾ ಮಾಡಿ ಪವನ್ ಸರ್ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ.
'ಸಜನಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಶರ್ಮಿಳಾ ಮಾಂಡ್ರೆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಸುಧನ್ ಸುಂಧರಮ್ ಅವರೊಟ್ಟಿಗೆ ಶರ್ಮಿಳಾ ಹಸೆಮಣೆ ಏರುತ್ತಿದ್ದಾರೆ. ಜೂನ್ 26ರಂದು ಎಂಗೇಜ್ಮೆಂಟ್ ನಡೆಯಲಿದ್ದು ಶೀಘ್ರದಲ್ಲೇ ಮದುವೆಗೆ ಇಬ್ಬರ ಮನೆಯಲ್ಲಿ ಸಿದ್ಧತೆ ನಡೀತಿದೆ. ತಮಿಳಿನಲ್ಲಿ 'ಮಹಾರಾಜ', 'ತಾಯ್ ಕಿಳವಿ' ಸೇರಿ ಕೆಲ ಹಿಟ್ ಸಿನಿಮಾಗಳನ್ನು ಸುಧನ್ ನಿರ್ಮಿಸಿದ್ದಾರೆ.


Click it and Unblock the Notifications