ಪವನ್ ಒಡೆಯರ್ ವೃತ್ತಿ ಜೀವನ ಮಾರ್ಗ ಬದಲಿಸಿದ್ದು ಅನುಷ್ಕಾ ಶೆಟ್ಟಿ ಸಿನಿಮಾ!
ನಿರ್ದೇಶಕ ಪವನ್ ಒಡೆಯರ್ಗೆ ಸಿನಿಮಾ ಇಂಡಸ್ಟ್ರಿಗೆ ಬರಬೇಕು, ಸಿನಿಮಾ ಡೈರೆಕ್ಟರ್ ಆಗಬೇಕು ಅಂತ ಯಾವತ್ತು ಕಲ್ಪನೆ ಸಹ ಇರಲಿಲ್ಲ. ಅಂತಹ ವ್ಯಕ್ತಿ ಈಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ.
Recommended Video
ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಸ್ಟಾರ್ ನಟರಿಗೆ ಸಿನಿಮಾಗಳನ್ನು ಮಾಡ್ತಿದ್ದಾರೆ. ಹಾಗಾದ್ರೆ. ಅಚಾನಕ್ ಆಗಿ ಇಂಡಸ್ಟ್ರಿ ಪ್ರವೇಶಿಸಿದ ಪವನ್ ಒಡೆಯರ್ ಜೀವನ ಬದಲಾಗಿದ್ದು ಹೇಗೆ? ಯಾವ ಒಂದು ಕಾರಣದಿಂದ ಒಡೆಯರ್ ಚಿತ್ರಜಗತ್ತಿಗೆ ಪ್ರವೇಶ ಮಾಡಿದರು ಎಂಬ ಕುತೂಹಲ ಕಾಡುವುದು ಸಹಜ. ಈ ಎಲ್ಲ ಕುತೂಹಲಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಫಿಲ್ಮಿಬೀಟ್ ಡೈರಿಯ ವಿಶೇಷ ಸಂಚಿಕೆಯಲ್ಲಿ ತಮ್ಮ ಜರ್ನಿಯ ಕುರಿತು ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು
ಸಿನಿಮಾ ಬಗ್ಗೆ ಒಂದಿಷ್ಟು ಆಸಕ್ತಿ ಇಲ್ಲದಿದ್ದ ಪವನ್ ಒಡೆಯರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಳ್ಳೆಯ ಸ್ಥಾನ ಹಾಗೂ ಒಳ್ಳೆಯ ಸಂಬಳ ಸಹ ಸಿಗುತ್ತಿತ್ತು. ಇಂತಹ ಸಮಯದಲ್ಲಿ 'ಅನುಷ್ಕಾ ಶೆಟ್ಟಿ ನಟನೆಯ 'ಅರುಂಧತಿ' ಸಿನಿಮಾ ನೋಡಿದೆ. ಆ ಸಿನಿಮಾ ನೋಡಿದ್ಮೇಲೆ ನಾನೊಬ್ಬ ಕಥೆಗಾರ ಆಗಬೇಕು ಎಂಬ ಆಸೆ ಹುಟ್ಟಿಕೊಂಡಿತು' ಎಂದು ಪವನ್ ತಮ್ಮ ಜೀವನದ ಪ್ರಮುಖ ತಿರುವಿನ ಬಗ್ಗೆ ಹೇಳಿಕೊಂಡಿದ್ದಾರೆ.

ಕಥೆಯನ್ನು ಬರೆದುಕೊಂಡೆ....
'ಅರುಂಧತಿ' ಸಿನಿಮಾ ನೋಡಿ ಕಥೆಗಾರ ಆಗ್ಬೇಕು ಎಂಬ ಹುಚ್ಚು ಸ್ವಲ್ಪ ಕಥೆಗಳನ್ನು ಬರೆಯಲು ಸ್ಪೂರ್ತಿ ನೀಡಿತು. ಊಹೆ ಮಾಡ್ಕೊಂಡು ಕೆಲವು ಕಥೆ ಸಹ ಮಾಡಿದೆ. ಕೆಲಸದ ಜೊತೆಯಲ್ಲಿ ಕಥೆಗಾರ ಆಗಬೇಕು ಎಂದು ನಿರ್ಧರಿಸಿದೆ. ಒಂದು ಕಥೆ ಮಾಡ್ಕೊಂಡು ಅದನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಕೊಡಬೇಕು ಎಂದು ಅವರನ್ನು ಭೇಟಿ ಮಾಡಿದೆ'' - ಪವನ್ ಒಡೆಯರ್

ಜೂನಿಯರ್ ಕಲಾವಿದ ಆಗಿ ನಟನೆ
''ಕಥೆ ತೋರಿಸೇಕು ಎಂದು ಹೋದೆ. ಆದರೆ, ನಾಗತಿಹಳ್ಳಿ ಚಂದ್ರಶೇಖರ್ ಅವರು ನಿನ್ನ ಫೋಟೋ ಎಲ್ಲಿ ಅಂತಹ ಕೇಳಿದ್ರು. ಅವರು ಆಕ್ಟಿಂಗ್ ಕೇಳ್ಕೊಂಡು ಬಂದಿದ್ದಾನೆ ಅಂತ ಅಂದುಕೊಂಡಿದರು. ಸರಿ, ನಟಿಸುವ ಅವಕಾಶ ಸಿಗುತ್ತೆ ಏಕೆ ಬಿಡ್ಬೇಕು ಅಂತ ನಿರ್ಧರಿಸಿ ಫೋಟೋಶೂಟ್ ಸಹ ಮಾಡಿದೆ. ನೂರು ಜನ್ಮಕ್ಕೆ ಸಿನಿಮಾದಲ್ಲಿ ಜೂನಿಯರ್ ಕಲಾವಿದೆನಾಗಿ ನಟಿಸಿದೆ. ಆದರೆ, ಅದು ಚಿತ್ರದಲ್ಲಿ ಬಂದಿರಲಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಅನುಭವ ಇದೇ'' ಎಂದು ಪವನ್ ಒಡೆಯರ್ ತಿಳಿಸಿದ್ದಾರೆ.

ಯೋಗರಾಜ್ ಭಟ್ ಅವರನ್ನು ಭೇಟಿ
''ನಿರ್ದೇಶಕ ಯೋಗರಾಜ್ ಭಟ್ ಅವರ ಫೋನ್ ನಂಬರ್ ತಗೊಂಡು ಅವರನ್ನು ಭೇಟಿ ಮಾಡಲು ನಿರ್ಧರಿಸಿ ಅವರ ಮನೆ ಬಳಿ ಹೋದೆ. ತುಂಬಾ ದಿನ ಹೋಗಿ ಸುಮ್ಮನೆ ನಿಂತ್ಕೊಳ್ಳುತ್ತಿದ್ದೆ. ಕೊನೆಗೆ ಒಂದು ದಿನ ಸಿಕ್ಕಿದರು. ನಾನು ಒಂದಿಷ್ಟು ಕನ್ನಡದಲ್ಲಿ ಬರೆದಿದ್ದೆ. ಅದನ್ನು ತೋರಿಸಿದೆ, ಅದನ್ನೆಲ್ಲ ನೋಡಿ, ''ಒಳ್ಳೆಯ ಕೆಲಸದಲ್ಲಿ ಇದ್ದೀಯಾ, ಸಿನಿಮಾ ಇಂಡಸ್ಟ್ರಿಗೆ ಏಕೆ? ಇಲ್ಲಿ ಬಂದ್ರೆ ಲೈಫ್ ಚಿತ್ರನ್ನಾ ಆಗುತ್ತೆ ಅಂದರು. ನನಗೆ ಚಿತ್ರನ್ನಾನೇ ಇಷ್ಟ ಸರ್ ಎಂದಾಗ, ಸರಿ ಬನ್ನಿ ಎಂದು ಕೆಲಸ ಕೊಟ್ಟರು. ಇಲ್ಲಿಂದ ನನ್ನ ಸಿನಿ ಜರ್ನಿ ಅಧಿಕೃತವಾಗಿ ಆರಂಭವಾಯಿತು'' ಎಂದು ಪವನ್ ಒಡೆಯರ್ ಅನುಭವ ಹಂಚಿಕೊಂಡರು. (ಕಥೆ ಮುಂದುವರಿಯುತ್ತದೆ)


Click it and Unblock the Notifications











