Devil: ಎಲ್ಲಿಗೆ ಬಂತು 'ಡೆವಿಲ್' ಕಥೆ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಬಗ್ಗೆ ಇಲ್ಲಿದೆ ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಈ ವರ್ಷವೇ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಭಿಮಾನಿಗಳಂತೂ ಫಸ್ಟ್ಡೇ ಫಸ್ಟ್ ಶೋ ನೋಡೋಕೆ ಕಾತರರಾಗಿದ್ದಾರೆ.
ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಿದ್ದ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಯಿತು. 'ಕಾಟೇರ' ಸಕ್ಸಸ್ ಬೆನ್ನಲ್ಲೇ 'ಡೆವಿಲ್' ದಿ ಹೀರೊ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಟೀಸರ್ನಲ್ಲಿ ದರ್ಶನ್ ಲುಕ್, ಡೈಲಾಗ್ ಡೆಲಿವರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಯಾವಾಗ ತೆರೆಮೇಲೆ ಸಿನಿಮಾ ನೋಡ್ತಿವೋ ಎಂದು ಕಾಯುತ್ತಿದ್ದಾರೆ. ಇನ್ನು ಚಿತ್ರದ ಕಲಾವಿದರ ಬಗ್ಗೆಯೂ ಭಾರೀ ನಿರೀಕ್ಷೆಯಿದೆ.

ಈ ಹಿಂದೆ ದರ್ಶನ್ ನಟನೆಯ 'ತಾರಕ್' ಚಿತ್ರಕ್ಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. 'ಡೆವಿಲ್' ಸಿನಿಮಾ ನಿರ್ದೇಶನದ ಜೊತೆಗೆ ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಇನ್ನು ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಈ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕಿದೆ.
ನವೆಂಬರ್ನಲ್ಲೇ 'ಡೆವಿಲ್' ಸಿನಿಮಾ ಮುಹೂರ್ತ ನೆರವೇರಿತ್ತು. ದರ್ಶನ್ ಒಂದು ಸಿನಿಮಾ ಮಾಡಿ ಮುಗಿಸುವ ಮುನ್ನ ಮತ್ತೊಂದು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ. ಹಾಗಾಗಿ 'ಕಾಟೇರ' ಬಿಡುಗಡೆಗಾಗಿ ಕಾಯುತ್ತಿದ್ದರು. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅಂದು ಪೂಜೆ ನೆರವೇರಿಸಲಾಗಿತ್ತು. ಇದೀಗ ಮುಂದಿನ ವಾರವೇ ಸಿನಿಮಾ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೀತಿದೆ. ಈ ಬಗ್ಗೆ ನಿರ್ದೇಶಕ ಪ್ರಕಾಶ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.
ರಾಕ್ಲೈನ್ ಸ್ಟುಡಿಯೋದಲ್ಲಿ ಮುಂದಿನ ಸೋಮವಾರದಿಂದ 'ಡೆವಿಲ್' ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಆರಂಭವಾಗುತ್ತದೆ ಎಂದು ಪ್ರಕಾಶ್ ಹೇಳಿದರು. ಇನ್ನು ನಾಯಕಿಯ ಆಯ್ಕೆ ಆಗಿಲ್ಲ. ಎಲ್ಲಾ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ನಿರ್ದೇಶಕರು, ಛಾಯಾಗ್ರಾಹಕ ಸುಧಾಕರ್ ರಾಜು ಜೊತೆ ಚಿತ್ರೀಕರಣಕ್ಕೂ ಮುನ್ನ ಕುಕ್ಕೆ ಸುಬ್ರಮಣ್ಯಂ ಸ್ವಾಮಿ ದರ್ಶನ ಪಡೆದಿದ್ದರು. ದೇವಸ್ಥಾನಕ್ಕೆ ಚಿತ್ರತಂಡಕ್ಕೆ ಭೇಟಿ ನೀಡಿದ್ದ ಫೋಟೊಗಳು ವೈರಲ್ ಆಗುತ್ತಿದೆ.

2 ದಿನಗಳ ಹಿಂದೆ ನಟ ದರ್ಶನ್ ಕೂಡ ಸ್ನೇಹಿತರ ಜೊತೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದರು. ನಟರಾದ ಚಿಕ್ಕಣ್ಣ, ಯಶಸ್ ಸೂರ್ಯ ಕೂಡ ಸಾಥ್ ಕೊಟ್ಟಿದ್ದಾರೆ. 'ಡೆವಿಲ್' ಸಿನಿಮಾ ಶೂಟಿಂಗ್ ಸೆಟ್ಗೆ ಭೇಟಿ ಇಡುವ ಮುನ್ನ ನಟ ದರ್ಶನ್ ದೇವರ ಆಶೀರ್ವಾದ ಪಡೆಯಲು ತೆರಳಿದ್ದರು. ಒಟ್ಟಾರೆ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
'ತಾರಕ್' ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಒಂದು ಭಾವನಾತ್ಮಕ ಕಥೆಯನ್ನು ಪ್ರಕಾಶ್ ಹೇಳಿದ್ದರು. ದೇವರಾಜ್, ಶ್ರುತಿ ಹರಿಹರನ್, ಶ್ವೇತಾ ಶ್ರೀವತ್ಸ ಚಿತ್ರದ ತಾರಾಗಣದಲ್ಲಿದ್ದರು. ಆದರೆ 'ಡೆವಿಲ್' ಪಕ್ಕಾ ಅಭಿಮಾನಿಗಳಿಗಾಗಿ ಮಾಡುತ್ತಿರುವ ಆಕ್ಷನ್ ಎಂಟರ್ಟೈನರ್ ಸಿನಿಮಾ ಎಂದು ಈಗಾಗಲೇ ನಿರ್ದೇಶಕರು ಸುಳಿವು ಕೊಟ್ಟಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ದರ್ಶನ್ ನಟನೆಯ ಚಿತ್ರಕ್ಕೆ ಅಜನೀಶ್ ಟ್ಯೂನ್ ಹಾಕುತ್ತಿದ್ದಾರೆ. ಹಾಗಾಗಿ ಆಲ್ಬಮ್ ಬಗ್ಗೆ ಕೂಡ ಭಾರೀ ನಿರೀಕ್ಷೆಯಿದೆ.
ಕುಕ್ಕೆಯಿಂದ ಬೆಂಗಳೂರಿಗೆ ವಾಪಸ್ ಬರುವ ಮಾರ್ಗದಲ್ಲೇ ನಿರ್ದೇಶಕ ಪ್ರಕಾಶ್ ಫಿಲ್ಮಿಬೀಟ್ ಜೊತೆ ಮಾತನಾಡಿ ಶೂಟಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ. ಡೆವಲ್ ಬಳಿಕ ದರ್ಶನ್ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಬಳಿಕ 'ಸಿಂಧೂರ ಲಕ್ಷ್ಮಣ'ನ ಅವತಾರ ತಾಳುವ ಸಾಧ್ಯತೆಯಿದೆ.


Click it and Unblock the Notifications











